Site icon Vistara News

Wild boar attack : ರೈತನ ಬಲಿ ಪಡೆದ ಕಾಡುಹಂದಿಯನ್ನು ಹೊಡೆದು ಕೊಂದ ಜನ!

people who killed the wild boar at hasana

ಹಾಸನ: ಜಮೀನಿಗೆ ನೀರು ಹಾಯಿಸುತ್ತಿದ್ದವರ ಮೇಲೆ ಏಕಾಏಕಿ ಎರಗಿದ ಕಾಡುಹಂದಿಯು (Wild boar attack) ದಾಳಿ ಮಾಡಿತ್ತು. ಕಾಡುಹಂದಿಯಿಂದ ತಪ್ಪಿಸಿಕೊಳ್ಳಲು ಆಗದೆ ರೈತ ರಾಜೇಗೌಡ ಎಂಬುವವರು ಮೃತಪಟ್ಟಿದ್ದರು. ಹೀಗಾಗಿ ಸಿಟ್ಟಿಗೆದ್ದ ಜನರು ದಾಳಿ ಮಾಡಿದ್ದ ಕಾಡುಹಂದಿಯನ್ನು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಾರಗೌಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಜನರು ಕೈಯಲ್ಲಿ ದಪ್ಪದಾದ ದೊಣ್ಣೆಗಳನ್ನು ಹಿಡಿದು ಕಾಡುಹಂದಿಗೆ ಹೊಡೆದು ಕೊಂದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾಗ ಕಾಡು ಹಂದಿ ದಾಳಿ (Wild Boar Attack) ನಡೆಸಿದ್ದರಿಂದ ರೈತರೊಬ್ಬರು ಮೃತಪಟ್ಟಿದ್ದರು. ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಾರಗೌಡನಹಳ್ಳಿ ಗ್ರಾಮದಲ್ಲಿ ಡಿ.18ರಂದು ನಡೆದಿತ್ತು. ರಾಜೇಗೌಡ (63) ಮೃತ ದುರ್ದೈವಿ.

ರಾಜೇಗೌಡ, ಕಾಂತಮ್ಮ ಹಾಗೂ ನಂಜಮ್ಮ ಎಂಬುವವರು ಜಮೀನಿಗೆ ನೀರು ಹಾಯಿಸುತ್ತಿದ್ದಾಗ, ಕಾಡುಹಂದಿ ದಾಳಿ ಮಾಡಿತ್ತು. ಹಂದಿ ತಪ್ಪಿಸಿಕೊಳ್ಳಲು ಕಿರುಚಾಡಿದ್ದರು. ಆದರೆ ಕಾಡುಹಂದಿ ರಾಜೇಗೌಡರ ಮೇಲೆ ಎರಗಿ ಸಾಯಿಸಿತ್ತು. ಕಾಡುಹಂದಿ ದಾಳಿಯಿಂದ ಸ್ಥಳದಲ್ಲೇ ರಾಜೇಗೌಡ ದಾರುಣವಾಗಿ ಸಾವನ್ನಪ್ಪಿದ್ದರು.

ಇತ್ತ ರಾಜೇಗೌಡನನ್ನು ಬಚಾವ್ ಮಾಡಲು ಹೋದ ಶಾಂತಮ್ಮ, ನಂಜಮ್ಮ ಗಂಭೀರ ಗಾಯಗೊಂಡಿದ್ದರು. ಗಾಯಾಳನ್ನು ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್‌ಗೆ ರವಾನೆ ಮಾಡಲಾಗಿತ್ತು.

ಇದನ್ನೂ ಓದಿ: Road Accident : ವಿದ್ಯಾರ್ಥಿಯ ಉಸಿರು ನಿಲ್ಲಿಸಿದ ಬೊಲೆರೋ; ಮತ್ತೊಬ್ಬ ಗಂಭೀರ

ಮಹಿಳೆ ಮೇಲೆ ಐದಾರು ಕಾಡು ಹಂದಿಗಳು ಅಟ್ಯಾಕ್‌!

ಹಾಸನದ ಬೇಲೂರು ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಘಟನೆ ಮಹಿಳೆ ಮೇಲೆ ಐದಾರು ಕಾಡು ಹಂದಿಗಳು ದಾಳಿ ಮಾಡಿವೆ. ಚಂದ್ರಕಲಾ (55) ಎಂಬುವವರು ಕಾಡು ಹಂದಿ ದಾಳಿಯಿಂದ ಗಾಯಗೊಂಡಿದ್ದಾರೆ.

ಚಂದ್ರಕಲಾ ಜಮೀನಿನ ಕೆಲಸಕ್ಕೆ ತೆರಳಿದಾಗ ಏಕಾಏಕಿ ಐದಾರು ಕಾಡು ಹಂದಿಗಳು ದಾಳಿ ಮಾಡಿವೆ. ಈ ವೇಳೆ ಚಂದ್ರಕಲಾ ಚಿರಾಟ ಕೇಳಿ, ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಕಾಡುಹಂದಿಗಳನ್ನು ಓಡಿಸಿ, ರಕ್ಷಿಸಿದ್ದಾರೆ. ಕೈ ಮತ್ತು ಕಾಲು ಭಾಗಗಳಲ್ಲಿ ಗಂಭೀರವಾದ ಗಾಯವಾಗಿದ್ದು, ಬೇಲೂರಿನ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹಾಸನದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಲಿಂಕ್‌ ಕ್ಲಿಕ್‌ ಮಾಡಿ

Exit mobile version