Site icon Vistara News

Veer Savarkar : ಸಾವರ್ಕರ್‌ ಗಾಯನಕ್ಕೆ ತೆರಳಿದ ವಿದ್ಯಾರ್ಥಿನಿಯರು; ಪ್ರಿನ್ಸಿಪಾಲ್‌ಗೆ ಸರ್ಕಾರ ಶಿಕ್ಷೆ

Veer savarkar Haveri College

ಹಾವೇರಿ: ವೀರ್‌ ಸಾವರ್ಕರ್‌ (Veer Savarkar) ವಿಚಾರದಲ್ಲಿ ಸರ್ಕಾರದ ತಿಕ್ಕಾಟ ಮುಂದುವರಿದಿದೆ. ವೀರ್‌ ಸಾವರ್ಕರ್‌ ದೇಶಭಕ್ತನೇ ಅಲ್ಲ, ವೀರನೇ ಅಲ್ಲ ಎಂಬ ಅಭಿಪ್ರಾಯಗಳ ಜತೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಡಲಾಗಿರುವ ಸಾವರ್ಕರ್‌ ಫೋಟೊ ಇಟ್ಟುಕೊಳ್ಳಬೇಕೇ, ತೆಗೆಯಬೇಕೇ ಎಂಬಲ್ಲಿಯವರೆಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆ, ಹಾವೇರಿಯಲ್ಲಿ ಆಯೋಜಿಸಿದ್ದ ವೀರ ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ನಡೆದ ಗೀತ ಗಾಯನ (Savarkar Geeta gayana) ತರಬೇತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಎಂಬ ಕಾರಣಕ್ಕಾಗಿ ಪ್ರಿನ್ಸಿಪಾಲ್‌ ಅವರಿಗೆ ಸರ್ಕಾರ ಶಿಕ್ಷೆ ನೀಡಿದೆ (Principal Trasferred).

ಡಿಸೆಂಬರ್ 17ರಂದು ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ ಸವಿನೆನಪು ಕಾರ್ಯಕ್ರಮ ನಡೆದಿತ್ತು. ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕೆಈ ಕಾಂತೇಶ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್ ಭಾಗವಹಿಸಿದ್ದರು.

ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿದೆ ಸಾವರ್ಕರ್ ಸಂಸ್ಮರಣೆ ಸಮೂಹ ಗಾಯನಕ್ಕೆ ಹಲವು ದಿನಗಳಿಂದ ತರಬೇಡಿ ನಡೆಯುತ್ತಿತ್ತು. ಇದರಲ್ಲಿ ಇಜಾರಿ ಲಕಮಾಪುರದಲ್ಲಿರುವ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಕೆಲವು ಪಿಯು ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಡಿಸೆಂಬರ್‌ 12ರಂದು ಹಾವೇರಿಯ ಈ ಕಾಲೇಜಿಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್ ಭೇಟಿ ನೀಡಿದ್ದರು. ಆಗ ತರಗತಿಗಳಲ್ಲಿ ವಿದ್ಯಾರ್ಥಿನಿಯರು ಇರಲಿಲ್ಲ. ಈ ಬಗ್ಗೆ ಪ್ರಾಂಶುಪಾಲ ಕೃಷ್ಣಪ್ಪ ಅವರನ್ನು ವಿಚಾರಿಸಿದ್ದರು. ಆಗ ಕೃಷ್ಣಪ್ಪ ಅವರು ವಿದ್ಯಾರ್ಥಿನಿಯರು ಸಮೂಹ ಗಾಯನ ತರಬೇತಿಗೆ ಹೋಗಿದ್ದಾಗಿ‌ ಹೇಳಿದ್ದರು.

ಇದು ರಿತೇಶ್‌ ಕುಮಾರ್‌ ಅವರನ್ನು ಕೆರಳಿಸಿತ್ತು. ಕಾಲೇಜು ಅವಧಿಯಲ್ಲಿ ಈ ರೀತಿ ಹೊರಗೆ ಹೋಗಲು ಬಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಮತ್ತು ತಾವು ಕಾಲೇಜಿಗೆ ಭೇಟಿ ನೀಡಿದಾಗ ಕಂಡ ವಿದ್ಯಮಾನಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ವರದಿ ಕೇಳಿದ್ದರು. ಜಿಪಂ ಸಿಇಒ ಅವರು ನೀಡಿದ ವರದಿಯನ್ನು ಮತ್ತು ತಮ್ಮ ಮಾಹಿತಿಯನು ಸೇರಿಸಿ ಅವರು ಸರ್ಕಾರಕ್ಕೆ ನೀಡಿದ್ದರು.

ಇದೀಗ ಸರ್ಕಾರ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಂಡಿದೆ. ಕಾಲೇಜು ಅವಧಿಯಲ್ಲಿ ಇಂಥ ಕಾರ್ಯಕ್ರಮಗಳಿಗೆ ಹೋಗಲು ಅವಕಾಶ ನೀಡಿದ ಕಾರಣಕ್ಕಾಗಿ ಪ್ರಾಂಶುಪಾಲ ಕೃಷ್ಣಪ್ಪ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

ಈ ಘಟನೆಯ ಬಗ್ಗೆ ಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಕಾಲೇಜುಗಳೇ ಅವಕಾಶ ಮಾಡಿಕೊಡಬೇಕು. ಆ ಕೆಲಸ ಮಾಡಲಾಗುತ್ತಿಲ್ಲ. ಈಗ ವಿದ್ಯಾರ್ಥಿನಿಯರೇ ಸ್ವಇಚ್ಛೆಯಿಂದ ಭಾಗವಹಿಸಿದರೂ ಈ ರೀತಿ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಾವರ್ಕರ್‌ ಬಗ್ಗೆ ಇರುವ ದ್ವೇಷ ಭಾವನೆಯನ್ನು ಸರ್ಕಾರ ಈ ಮೂಲಕ ತೀರಿಸಿಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version