Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಬೆಳಗಾವಿ ರಾಜ್ಯದ ಉಪ ರಾಜಧಾನಿಯಾಗಲಿ: ಸ.ರಘುನಾಥ್

gadinadu

ಹಾವೇರಿ (ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ): ಭಾಷೆ, ಸಂಸ್ಕೃತಿ ಕುರಿತು ಸರ್ಕಾರ ಕಠಿಣ ನಿಲುವು ನಿರ್ಧಾರ ತೆಗೆದುಕೊಳ್ಳಬೇಕು. ಬೆಳಗಾವಿಯನ್ನು ರಾಜ್ಯದ ಉಪ ರಾಜಧಾನಿಯಾಗಿಸಬೇಕು ಎಂದು ಸಾಹಿತಿ ಸ.ರಘುನಾಥ್ ಒತ್ತಾಯಿಸಿದರು.

ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ “ಗಡಿನಾಡು ಮತ್ತು ಹೊರನಾಡ ಕನ್ನಡಿಗರ ತಳಮಳಗಳು” ಗೋಷ್ಠಿಯಲ್ಲಿ’ಗಡಿಯಲ್ಲಿ ಭಾಷೆ ಸೌಹಾರ್ದ ಸಾಧ್ಯತೆಗಳು ವಿಷಯ ಕುರಿತು ಮಾತನಾಡಿದರು.

ದೇಶವೆಂದರೆ ಮಣ್ಣಲ್ಲ, ಜನರು ಎಂಬುದನ್ನು ಮೊದಲು ಅರಿಯೋಣ. ಭಾಷೆ ಎಂದಿಗೂ ಜಗಳ ಆಡುವುದಿಲ್ಲ, ಭಾಷೆಯನ್ನಿಟ್ಟುಕೊಂಡು ಜಗಳ ನಡೆದಿದೆ. ಗಡಿ ಭಾಗದಲ್ಲಿ ಆಡುವ ಭಾಷೆಯಲ್ಲಿ ನಾಮಪದ ಕನ್ನಡ, ಕ್ರಿಯಾ ಪದ ಅನ್ಯ ಭಾಷೆಯದ್ದಾಗಿರುತ್ತದೆ. ಭಾಷೆಗಳು ಮತ್ತು ಜನರ ಮಧ್ಯದಲ್ಲಿ ಸೌಹಾರ್ದ ಅಡಗಿದೆ. ಕನ್ನಡದ ಗಡಿಯೊಳಗಿನ ಅನ್ಯ ಭಾಷೆ ತನ್ನತನವನ್ನು ಕಳೆದುಕೊಳ್ಳುವಂತೆ, ಗಡಿಯಾಚೆ ಇರುವ ಕನ್ನಡ ತನ್ನತನವನ್ನು ಕಳೆದುಕೊಳ್ಳಲಿದೆ ಎಂದರು.

ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡಿ, ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ಸರಿಯಲ್ಲ. ಕನ್ನಡ ಶಾಲೆ, ಕನ್ನಡ ಉಳಿಸಲು ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ತರಬೇಕು ಎಂದು ರೇವಣಸಿದ್ದಪ್ಪ ಜಲಾದೆ ಒತ್ತಾಯಿಸಿದರು. ಗಡಿನಾಡ ಶಾಲೆಗಳ ಅಭಿವೃದ್ಧ ಯೋಜನೆಗಳ ಕುರಿತು ಅವರು ಮಾತನಾಡಿ, ಗಡಿ ಭಾಗದಲ್ಲಿ ಕೇವಲ 48 ಕನ್ನಡ ಶಾಲೆಗಳು ಮಾತ್ರ ಉಳಿದಿವೆ.  ಕನ್ನಡ ಶಾಲೆ ಆರಂಭ ಮಾಡಲು ಇರುವ ಕಠಿಣ ನಿಯಮಗಳನ್ನು ಸಡಿಲಿಸಬೇಕಿದೆ ಎಂದರು. ಕಳೆದ 3 ವರ್ಷದಿಂದ ಬೆಂಗಳೂರಲ್ಲಿ ಒಂದೇ ಒಂದು ಕನ್ನಡ ಶಾಲೆ ಆರಂಭವಾಗಿಲ್ಲ. ಒಂದೇ ವರ್ಷದಲ್ಲಿ 150ಕ್ಕೂ ಅಧಿಕ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿವೆ. 1ರಿಂದ 5ನೇ ವರೆಗಿನ ತರಗತಿಗಳು ಕನ್ನಡದಲ್ಲೇ ನಡೆಯಬೇಕು ಎಂಬುದು ಸಮ್ಮೇಳನಾಧ್ಯಕ್ಷರ ಆಶಯ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಮ್ಮೇಳನಾಧ್ಯಕ್ಷರಾದ ಡಾ. ದೊಡ್ಡರಂಗೇಗೌಡ ಅವರು ಗೋಷ್ಠಿಯಲ್ಲಿ ಪಾಲ್ಗೊಂಡು, ಭಾಷೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ವರ್ಗೀಕರಣ ಆಗಿಲ್ಲ. ಹೀಗಾಗಿ ಕಾಸರಗೋಡು, ಬೆಳಗಾವಿ ಸಮಸ್ಯೆ ತಲೆದೋರಿದೆ. ಬೆಳಗಾವಿ ಗಡಿ ಅಂಚಿನಲ್ಲಿ ಸಂಚರಿಸಿದ್ದೇನೆ. ಅಲ್ಲಿ ಶೇ. 90ರಷ್ಟು ಕನ್ನಡಿಗರೇ ಇದ್ದಾರೆ, ಅವರೆಲ್ಲ ರಾಜ್ಯಕ್ಕೆ  ಬರುವ ಬಯಕೆ ಹೊಂದಿದ್ದಾರೆ. ಕೋಲಾರದ ದೊಡ್ಡಪಲ್ಲಾಂಗ ಹಳ್ಳಿಗೆ ಹೋದಾಗ ರೈತನೊಬ್ಬ ತನ್ನ ಅಳಲನ್ನು ಹೇಳಿಕೊಂಡ ರೀತಿ ನಿಜಕ್ಕೂ ವಿಪರ್ಯಾಸ. ರೈತನು ಕಂದಾಯ ಕರ್ನಾಟಕ ರಾಜ್ಯಕ್ಕೆ ಕಟ್ಟಿದರೆ ಜಮೀನಿನ ಪಹಣಿ ದಾಖಲೆಗಳು ಪಕ್ಕದ ರಾಜ್ಯದಿಂದ ಬರುತ್ತಿವೆ. ರೈತನು 3 ರಾಜ್ಯಗಳ ಜೊತೆಗೆ ವ್ಯವಹಾರ ಜೀವನ ಮಾಡಬೇಕು ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಅನ್ಯ ಭಾಷೆಯನ್ನು ಹೇರಬೇಡಿ, ಕನ್ನಡ ಹೋರಾಟಗಾರರನ್ನು ಬಿಡುಗಡೆ ಮಾಡಿ: ನಾಡು-ನುಡಿಯ ಕುರಿತು ಕೈಗೊಂಡ 6 ನಿರ್ಣಯಗಳು ಇಲ್ಲಿವೆ

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ 63 ತಾಲೂಕುಗಳು, 6 ರಾಜ್ಯದೊಂದಿಗೆ ಅಂಟಿಕೊಂಡಿವೆ. ಶೈಕ್ಷಣಿಕ ಸಾಮಾಜಿಕ ಬದುಕು ಕಟ್ಟಿಕೊಡುವುದು ಪ್ರಾಧಿಕಾರದ ಉದ್ದೇಶ. ಸಂಸ್ಕೃತಿ ಇಲ್ಲದ ಬದುಕಿಲ್ಲ, ಸಂಸ್ಕೃತಿಯಲ್ಲಿ ದೇಶ ಭಕ್ತಿ, ಪ್ರಜ್ಞೆ ಎಲ್ಲವೂ ಅಡಗಿದೆ. ಪ್ರಾಧಿಕಾರ 400 ಸಾಂಸ್ಕೃತಿಕ ಸಮಾರಂಭ ನಡೆಸಲು 5 ಕೋಟಿ ಅನುದಾನ ನೀಡಿದೆ. ಅಧಿಕಾರಿಗಳು ವ್ಯಕ್ತಿಯನ್ನು ಕಡತವಾಗಿ ನೋಡದೇ, ಕಡತಗಳಲ್ಲಿ ವ್ಯಕ್ತಿಯನ್ನು ಹುಡುಕಬೇಕು. ಸರ್ಕಾರ ಕೊಂಕಣಿ, ತುಳು ಅಕಾಡೆಮಿ ರಚಿಸಿ ಭಾಷಾ ಸಾಮರಸ್ಯ ಮೆರೆದಿದೆ. ಕೇರಳ ಸರ್ಕಾರ ಕನ್ನಡ ಅಕಾಡೆಮಿ ರಚಿಸಿದೆ. ಇತರ ರಾಜ್ಯಗಳು ಈ ದಿಸೆಯಲ್ಲಿ ಸಾಗಲಿ ಎಂದರು.

ಆಶಯ ನುಡಿಗಳನ್ನಾಡಿದ ಸೊಲ್ಲಾಪುರ ಅಕ್ಕಲಕೋಟೆ ಬಸವಲಿಂಗ ಮಹಾಸ್ವಾಮಿಗಳು, ಸೊಲ್ಲಾಪುರದ ಅಕ್ಕಲಕೋಟೆ ಭಾಗದಲ್ಲಿ ಶೇ. 90ರಷ್ಟು ಜನರು ಕನ್ನಡವನ್ನೇ ಆಡುಭಾಷೆ, ವ್ಯವಹಾರಿಕ ಭಾಷೆಯಾಗಿ ಬಳಸುತ್ತಾರೆ. ಇದು ಹೀಗೆಯೇ ಮುಂದುವರೆದರೆ ಬೆಳಗಾವಿ ಕೇಳಿದಂತೆ ಎಲ್ಲ ಪ್ರದೇಶಗಳನ್ನು ಕೇಳುತ್ತಾರೆ, ಈಗಲೇ ಎಚ್ಚೆತ್ತುಕೊಳ್ಳಬೇಕು. ಗಡಿ ಅಭಿವೃದ್ಧ ಪ್ರಾಧಿಕಾರ ಮೊದಲು ಆರ್ಥಿಕ ಅಭಿವೃದ್ಧ ಹೊಂದಿ ಇದರಿಂದ ಆ ಭಾಗದ ಅಭಿವೃದ್ಧಯಾಗಲಿ ಎಂದರು.

ಕನ್ನಡ ಕಟ್ಟುವಲ್ಲಿ ಹೊರನಾಡ ಕನ್ನಡಿಗರ ಪಾತ್ರ ವಿಷಯ ಕುರಿತು ಡಾ. ಈಶ್ವರ ಅಲೆವೂರು ಮಾತನಾಡಿ, ಅನ್ನ ಕೊಡದ ಭಾಷೆ ಎಂದಿಗೂ ಉಳಿಯದು ಎಂದು ನಾವೆಲ್ಲ ಅರಿಯಬೇಕು. ಹೊರ ರಾಜ್ಯದಲ್ಲಿ ಕನ್ನಡ ಉಳಿದಿರುವುದು ಕೇವಲ ಅಭಿಮಾನಿಗಳಿಂದ. ಹೊರ ರಾಜ್ಯಗಳಲ್ಲಿ ಮಾಹಿತಿ ಕೇಂದ್ರ ತೆರೆಯಬೇಕು. ಹೊರನಾಡ ಸಂಘ ಸಂಸ್ಥೆ ಅಭಿವೃದ್ಧಿಗೆ ಅನುದಾನ ನೀಡಬೇಕು. ಹೊರನಾಡ ಕನ್ನಡ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಬೇಕು ಎಂದು ಹೇಳಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಾಧಕ ರೈತರ ಕುರಿತ ಸಾಹಿತ್ಯ ಬೇಕು: ಎಸ್.ಎ. ಪಾಟೀಲ  

Exit mobile version