Site icon Vistara News

ICC World Cup 2023 : ಟೀಂ ಇಂಡಿಯಾಕ್ಕೆ All the best ಎಂದ ಫ್ಯಾನ್ಸ್‌; ಇಲ್ಲಿದೆ ಅಭಿಮಾನದ ಝಲಕ್

ICC World Cup 2023 All the best for Team India says fans

ಬೆಂಗಳೂರು: ಕ್ರಿಕೆಟ್‌ ವಿಶ್ವ ಕಪ್‌ ಹಬ್ಬ ಕೊನೇ ಘಟಕ್ಕೆ ಬಂದಿದೆ. ಇಡೀ ವಿಶ್ವವೇ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ಮೇಲೆ ಕಣ್ಣಿಟ್ಟಿದೆ. ದೇಶದ ಕ್ರಿಕೆಟ್‌ ಫ್ಯಾನ್ಸ್‌ ಟೀಂ ಇಂಡಿಯಾ ಗೆಲುವಿಗೆ ಒಕ್ಕೊರಲಿನ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. “ಈ ಬಾರಿ ಕಪ್‌ ನಮ್ದೇ” ಎಂಬ ವಿಶ್ವಾಸದಲ್ಲಿ ಜೈಕಾರಗಳು ಮೊಳಗುತ್ತಿವೆ. ಈ ಎಲ್ಲದರ ಮಧ್ಯೆ ಭಾನುವಾರ (ನ. 19) ಮುಂಜಾನೆಯಿಂದಲೇ ಟೀಂ ಇಂಡಿಯಾ ಗೆಲುವಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತಿದೆ. ಕೆಲವರು ದೇವರ ಮೊರೆ ಹೋದರೆ, ಮತ್ತೆ ಕೆಲವರು ಹೋಮ-ಹವನ, ಡ್ಯಾನ್ಸ್‌, ರನ್ನಿಂಗ್‌ ಇತ್ಯಾದಿಗಳ ಮೂಲಕ ಭಾರತ ತಂಡದ ಆಟಗಾರರಿಗೆ ಶುಭ ಕೋರಿದ್ದಾರೆ. ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಇನ್ನೂ ಹಲವರು ಟೀಂ ಇಂಡಿಯಾಕ್ಕೆ All the best ಹೇಳಿದ್ದಾರೆ.

12 ವರ್ಷಗಳ ಬಳಿಕ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡವು (Indian Cricket Team) ಮೂರನೇ ಬಾರಿ ಏಕದಿನ ವಿಶ್ವಕಪ್‌ ಎತ್ತಿಹಿಡಿಯುವ ತವಕದಲ್ಲಿದೆ. ಭಾರತ ಗೆದ್ದು ಬೀಗಲಿ, ವಿಶ್ವಕಪ್‌ ರೋಹಿತ್‌ ಪಡೆಯ ಪಾಲಾಗಲಿ ದೇಶಾದ್ಯಂತ ಶತಕೋಟಿ ಭಾರತೀಯರು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಅತ್ತ ಆಸ್ಟ್ರೇಲಿಯಾ ಕೂಡ ಗೆಲುವು ಸಾಧಿಸುವ ಮೂಲಕ ಕ್ರಿಕೆಟ್‌ನಲ್ಲಿ ತಾನೇ ಅಧಿಪತಿ ಎಂಬುದನ್ನು ಸಾಬೀತುಪಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದೆಲ್ಲ ಕಾರಣಗಳಿಂದಾಗಿ ವಿಶ್ವಕಪ್‌ ಫೈನಲ್‌ ಪಂದ್ಯವು ಎಲ್ಲರನ್ನೂ ತುದಿ ಕಾಲಿನಲ್ಲಿ ನಿಲ್ಲಿಸಿದೆ.

ಇದನ್ನೂ ಓದಿ: ICC World Cup 2023 : ಕಳೆದ 10 ಪಂದ್ಯಗಳಲ್ಲಿ ಭಾರತದ ಬೌಲರ್​ಗಳ ಪರಾಕ್ರಮ ಈ ರೀತಿ ಇತ್ತು

ಡ್ಯಾನ್ಸ್ ಮೂಲಕ ಶುಭಹಾರೈಸಿದ ವಿದ್ಯಾರ್ಥಿಗಳು

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಸ್ಟಾರ್ ಚಾಯ್ಸ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಂದ ಟೀಂ ಇಂಡಿಯಾಕ್ಕೆ ವಿಶೇಷ ರೀತಿಯಲ್ಲಿ ಶುಭ ಹಾರೈಕೆ ವ್ಯಕ್ತವಾಗಿದೆ. ಡ್ಯಾನ್ಸ್ ಮೂಲಕ ಮಕ್ಕಳು ಶುಭ ಹಾರೈಸಿದ್ದಾರೆ. 20ಕ್ಕೂ ಅಧಿಕ ಮಕ್ಕಳು ಕಡಲತೀರದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೂ ಮುಂಚೆ ಕಡಲತೀರದಲ್ಲಿ ತ್ರಿವರ್ಣ ಧ್ವಜ‌ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಭಾರತ ತಂಡದ ಪರ ಘೋಷಣೆ ಕೂಗಿದ್ದಾರೆ.

ದಾವಣಗೆರೆಯಲ್ಲಿ ಮಕ್ಕಳಿಂದ ಪೂಜೆ ಸಲ್ಲಿಕೆ

ದಾವಣಗೆರೆಯ ಐತಿಹಾಸಿಕ‌ ಶಾಮನೂರು ಆಂಜನೇಯ ದೇವಸ್ಥಾನದಲ್ಲಿ ಶಾಲಾ ಮಕ್ಕಳು, ಪಾಲಕರು, ಶಿಕ್ಷಕರು ವಿಶೇಷ ಪೂಜೆ ಸಲ್ಲಿಸಿ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥಿಸಿದರು. ಈ ಸಲ ವಿಶ್ವಕಪ್ ನಮ್ಮದೇ.. ನಮ್ಮದೇ ಎಂದು ಘೋಷಣೆ ಹಾಕಿದರು.

ಹಾಸನದಲ್ಲಿ ರನ್ನಿಂಗ್ ಮಾಡಿ ಜಯಘೋಷ

ಹಾಸನ ನಗರದ ಪ್ರಮುಖ ಬೀದಿಗಳಲ್ಲಿ ರನ್ನಿಂಗ್ ಮಾಡಿ ಜಯಘೋಷ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಜರ್ಸಿ ಧರಿಸಿ ಹತ್ತಾರು ಅಭಿಮಾನಿಗಳು ಶುಭ ಕೋರಿದ್ದಾರೆ. ಸುಮಾರು 10 ಕಿ.ಮೀ. ಜಾಗಿಂಗ್ ಮಾಡಿ ಭಾರತದ ಪರ ಜಯ ಘೋಷ ಕೂಗಿ ಶುಭಾಶಯವನ್ನು ಸಲ್ಲಿಸಲಾಗಿದೆ. ಜಿಲ್ಲಾ ಕ್ರೀಡಾಂಗಣ, ಎನ್.ಆರ್ ವೃತ್ತ, ಡಿ.ಸಿ ಕಚೇರಿ, ಶಂಕರಮಠ ರಸ್ತೆ ಮೂಲಕ ರನ್ನಿಂಗ್ ಮಾಡಲಾಗಿದೆ.

ಕೇರಳದಲ್ಲಿ ಅಯ್ಯಪ್ಪ ಭಕ್ತರಿಂದ ವಿಶೇಷ ಪೂಜೆ

ಕೇರಳದ ಗುರುವಾಯೂರು ಕೃಷ್ಣ ಚೋಟಾನಿಕೆರೆ ಭಗವತಿ ದೇವಾಲಯದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಅಯ್ಯಪ್ಪ ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾದ ಪೋಸ್ಟರ್ ಹಿಡಿದು ಪೂಜೆ ಸಲ್ಲಿಸಿದ್ದಾರೆ. ಭಾರತ ತಂಡ ಗೆದ್ದು ಮಿಂಚಲಿ ಎಂದು ಶುಭ ಹಾರೈಸಿದ್ದಾರೆ.

ಕಲಬುರಗಿಯಲ್ಲಿ ರಂಗೋಲಿ ಬಿಡಿಸಿದ ಅಭಿಮಾನಿಗಳು!

ಕಲಬುರಗಿ ನಗರದ ಶೆಟ್ಟಿ ಕಾಂಪ್ಲೆಕ್ಸ್‌ ಬಳಿ‌ ಇರುವ ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಹೋಮ ನಡೆಸಲಾಗಿದೆ. ಹಿಂದೂ ಜಾಗೃತಿ ಸೇನೆ‌ ಜಿಲ್ಲಾ ಘಟಕದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮನೆ ಮುಂದೆಯೂ ರಂಗೋಲಿ ಬಿಡಿಸಿ ಶುಭಕೋರಲಾಗಿದೆ.

ಯಾದಗಿರಿಯಲ್ಲಿ ಶಾಲಾ ಮಕ್ಕಳಿಂದ ಶುಭ ಹಾರೈಕೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಲ್ಲದೇವನಹಳ್ಳಿಯ ಶ್ರೀ ಖಾಸ್ಗತೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಬ್ಯಾಟ್ ಹಿಡಿದು ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ. ಗೆದ್ದು ಬಾ ಭಾರತ್ ಎಂದು ಮಕ್ಕಳು ಘೋಷಣೆ ಕೂಗಿದ್ದಾರೆ.

ಬೆಳಗಾವಿಯಲ್ಲಿ ಮುತ್ತೈದೆಯರಿಗೆ ಉಡಿ ತುಂಬಿದ ಮಹಿಳೆಯರು

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಗಣೇಶ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯವನ್ನು ಆಯೋಜಿಸಲಾಗಿತ್ತು. ಆ ಮೂಲಕ ಟೀಂ ಇಂಡಿಯಾ ಗೆದ್ದು ಬೀಗಲಿ ಎಂದು ಶುಭ ಹಾರೈಸಲಾಗಿದೆ. ತಂಡದ ಪ್ರಮುಖ ಆಟಗಾರರ ಭಾವಚಿತ್ರಗಳನ್ನು ಪ್ರದರ್ಶಿಸಿ ಮಹಿಳೆಯರು ಸಂಭ್ರಮಪಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯರಿಂದ ಶುಭಾಶಯ

ಇಂದು ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಣೆ ಮಾಡುತ್ತೇನೆ. ಭಾರತ ಗೆಲ್ಲಬೇಕೆಂದು ಶುಭ ಕೋರುತ್ತೇನೆ. ಟೀಂ ಇಂಡಿಯಾದವರು ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಅವರು ಗೆದ್ದೇ ಗೆಲ್ಲುತ್ತಾರೆ. ಎಲ್ಲ ಆಟಗಾರರು ನನ್ನ ಫೆವರಿಟ್ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಟೀಮ್ ಇಂಡಿಯಾಗೆ ಶುಭ ಕೋರಿದ ಆರ್ ಅಶೋಕ್

ಪ್ರತಿಯೊಬ್ಬರೂ ಈಗಾಗಲೇ ಪೂಜೆ, ಹೋಮಗಳನ್ನು ಮಾಡುತ್ತಿದ್ದಾರೆ. ಎಲ್ಲರೂ ಭಾರತ ಗೆಲ್ಲಲಿ ಅಂತ ಪ್ರಾರ್ಥನೆ ಮಾಡುತ್ತಿದ್ದಾರೆ. ನಾವು ಕೂಡ ಎಲ್ಲರ ರೀತಿ ಜೈ ಹೋ ಅಂತ ಭಾರತ ಪರವಾಗಿ ಘೋಷಣೆ ಕೂಗುತ್ತೇವೆ. ಟೀಮ್ ವರ್ಕ್ ಮತ್ತಷ್ಟು ಹೆಚ್ಚು ಗೆಲುವನ್ನು ತಂದು ಕೊಡಲಿದೆ. ಹಿಂದೆ ಕಪಿಲ್ ದೇವ್ ಆಟ ನಮಗೆ ನೆನಪಾಗುತ್ತದೆ. ಭಾರತ ಗೆಲ್ಲಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ICC World Cup 2023 : ಫೈನಲ್​ ಪಂದ್ಯದವರೆಗೆ ಭಾರತ ತಂಡದ ಬ್ಯಾಟರ್​ಗಳ ಪ್ರದರ್ಶನ ಹೀಗಿತ್ತು

ಭಾರತ ತಂಡಕ್ಕೆ ಆಲ್ ದಿ‌ ಬೆಸ್ಟ್ ಹೇಳಿದ ಬಿ ವೈ ವಿಜಯೇಂದ್ರ

ಇಡೀ ದೇಶ ಭಾರತ ಗೆಲ್ಲಬೇಕೆಂದು ಪೂಜೆ ಸಲ್ಲಿಸುತ್ತಿದೆ. ಇವತ್ತಿನ ಫೈನಲ್ ಸಹ ಭಾರತಕ್ಕೆ ಉತ್ತಮ ಗೆಲುವು ಸಿಗಲಿ. ಆಲ್ ದ ಬೆಸ್ಟ್ ಅಂತ ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಶುಭ ಕೋರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version