Site icon Vistara News

CM Siddaramaiah: ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು: ಸಿಎಂ ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಕಳೆದ ಹಲವು ವರ್ಷಗಳಲ್ಲಿ ಸೈಬರ್ ದಾಳಿಗಳು ವಿವಿಧ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಆನ್‌ಲೈನ್ ಮೂಲಕ ಮೋಸ ಮಾಡುವುದು ಅಧಿಕವಾಗಿದೆ. ಇದು ವ್ಯಕ್ತಿಗತವಾಗಿ ಹಾನಿಯಲ್ಲದೇ ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿಯಾಗಿದೆ. ಹೀಗಾಗಿ ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ನಿಟ್ಟಿನಲ್ಲಿ ಪೋಲಿಸರು ಕ್ರಿಯಾತ್ಮಕವಾಗಿರಬೇಕು. ಹಾಗೆಯೇ ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚಿಸಿದರು.

ದಕ್ಷಿಣ ಭಾರತ ರಾಜ್ಯಗಳ ಪೊಲೀಸ್ ಮಹಾನಿದೇರ್ಶಕರ ಸಮನ್ವಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಬುನಾದಿ ಹಾಗೂ ಸಮಾಜದ ಸಂರಚನೆಗೆ ಸವಾಲಾಗಿರುವ ಆಂತರಿಕ ಭದ್ರತಾ ವಿಷಯಗಳು ತಮ್ಮ ಸಂಪೂರ್ಣ ಗಮನ ಮತ್ತು ಸಹಯೋಗ ಅಗತ್ಯ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕ ವ್ಯವಸ್ಥೆ ಹಾಗೂ ತಮ್ಮ ಪ್ರದೇಶದ ಪ್ರತಿಯೊಬ್ಬರ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಪೋಲೀಸರಿಂದ ಅಚಲ ಬದ್ಧತೆ, ಸಮರ್ಪಣೆ ಹಾಗೂ ಕರ್ತವ್ಯಪರತೆಯನ್ನು ನಿರೀಕ್ಷಿಸಲಾಗುತ್ತದೆ ಎಂಸು

ಪೋಲಿಸ್ ತಂತ್ರಗಾರಿಕೆಯಲ್ಲಿ ನಿರಂತರ ಮಾರ್ಪಾಡು ಅಗತ್ಯ

ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಪರಾಧಿ ಚಟುವಟಿಕೆಗಳಿಂದ ಹಿಡಿದು ಡಿಜಿಟಲ್ ವಲಯದ ಬೆದರಿಕೆಗಳನ್ನೂ ದೇಶ ಎದುರಿಸುತ್ತಿದೆ. ಆಧುನಿಕ ಸಮಾಜದ ಸಂಕೀರ್ಣತೆಗಳೂ ಕೂಡ ಹೊಸ ಮಾದರಿಯ ಅಪರಾಧಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಪೋಲಿಸ್ ತಂತ್ರಗಾರಿಕೆಯಲ್ಲಿಯೂ ನಿರಂತರವಾಗಿ ಮಾರ್ಪಾಡು ತರಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ | Cauvery Dispute : CWRC ಆದೇಶಕ್ಕೆ ಧಿಕ್ಕಾರ, ತಮಿಳುನಾಡಿಗೆ ನೀರು ಬಿಡಲ್ಲ, ಬಿಡಲ್ಲ, ಬಿಡಲ್ಲ; ಸರ್ವಪಕ್ಷ ಸಭೆಯಲ್ಲಿ ಒಗ್ಗಟ್ಟಿನ ನಿರ್ಣಯ

ಕಾನೂನು ಪಾಲಕರಾಗಿ ತಾವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದರಿಂದ, ಶಾಂತಿ ಕದಡುವವರಿಗಿಂತ ಒಂದು ಹೆಜ್ಜೆ ಮುಂದಿರಿರಬೇಕಲ್ಲದೇ ಶೀಘ್ರವಾಗಿ ಹೊಂದಿಕೊಂಡು ನವೀನ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಪರಾಧ ಜಗತ್ತಿಗೆ ಗಡಿಗಳಿಲ್ಲ. ಮಿತಿಯೂ ಇಲ್ಲ. ಅಪರಾಧಗಳನ್ನು ಸಮರ್ಪವಾಗಿ ನಿಗ್ರಹಿಸಲು ನಾನಾ ರಾಜ್ಯಗಳ ನಡುವೆ ಮಾಹಿತಿ, ಸಂಪನ್ಮೂಲ ಮತ್ತು ತಂತ್ರಗಾರಿಕೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅಪರಾಧ ಜಗತ್ತಿಗೆ ಗಡಿಗಳು ಇಲ್ಲದಿರುವಾಗ ಇದನ್ನು ನಿಗ್ರಹಿಸುವುದರಲ್ಲೂ ಭದ್ರತಾ ಪಡೆಗಳು, ತನಿಖಾ ಸಂಸ್ಥೆಗಳ ನಡುವೆ ಗಡಿಗಳು ಇರಬಾರದು ಎಂದು ತಿಳಿಸಿದರು.

ದಕ್ಷಿಣ ಭಾರತ ತನ್ನ ಸಾಂಸ್ಕೃತಿಕ ವೈವಿಧ್ಯತೆ, ಭಿನ್ನ ಭಾಷೆಗಳು ಮತ್ತು ಭೌಗೋಳಿಕತೆ ಕಾರಣದಿಂದ ಅಪರಾಧ ನಿಗ್ರಹದಲ್ಲಿ ಹಲವು ಸವಾಲುಗಳನ್ನು ಮುಂದಿಡುತ್ತಿದೆ. ಮಾದಕ ವಸ್ತು ಕಳ್ಳಸಾಗಣೆ, ಮಾನವ ಕಳ್ಳ ಸಾಗಣೆ, ಸಂಘಟಿತ ಅಪರಾಧ, ಸೈಬರ್ ಕ್ರೈಂ ಸಮಾಜದ ಮತ್ತು ಸಮುದಾಯದ ಶಾಂತಿ ಮತ್ತು ಸುರಕ್ಷತೆಗೆ ಅಪಾಯವನ್ನು ತಂದೊಡ್ಡುತ್ತಿದೆ ಎಂದು ಹೇಳಿದರು.

ಅಪರಾಧಿಗಳೆಲ್ಲಾ ರಾಜ್ಯಗಳ ಗಡಿ ದಾಟಿಯೂ ಕಾರ್ಯಾಚರಣೆ ಮಾಡುತ್ತಿರುವುದರಿಂದ ಇವುಗಳ ನಿಗ್ರಹದಲ್ಲೂ ಅಂತಾರಾಜ್ಯ ಪೊಲೀಸ್ ತಂಡಗಳ ನಡುವೆ ಸಮನ್ವಯ ಮತ್ತು ಸಹಕಾರ ಅಗತ್ಯ. ಜಂಟಿ ಕಾರ್ಯಾಚರಣೆಗಳು ಅಪರಾಧಿಗಳ ಬಲಕುಂದಿಸಲು ಸಹಕಾರಿಯಾಗಬಹುದು. ರಾಜ್ಯ ಸರ್ಕಾರಗಳು ಜಂಟಿ ಕಾರ್ಯಾಚರಣೆಗಾಗಿ ಟಾಸ್ಕ್‌ಫೋರ್ಸ್‌, ಜಂಟಿ ತರಬೇತಿ ಕಾರ್ಯಕ್ರಮಗಳು ಹಾಗೂ ಕಾನೂನು ರಕ್ಷಣೆಯ ಸಂಸ್ಥೆಗಳ ನಡುವೆ ಸಭೆಗಳನ್ನು ನಡೆಸುವ ಮೂಲಕ ಸಮನ್ವಯವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಮಾದಕವಸ್ತು ನಿಯಂತ್ರಣ

ಮಾದಕವಸ್ತು ನಿಯಂತ್ರಣದಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ಅತ್ಯುತ್ತಮ ಕೆಲಸ ಮಾಡಿದ್ದು ಅಂತಾರಾಷ್ಟ್ರೀಯ ಮಾದಕವಸ್ತು ಜಾಲವನ್ನು ಪತ್ತೆ ಹಚ್ಚಲಾಗಿದೆ. ಡಾರ್ಕ್‍ವೆಬ್ ಮೂಲಕ ನಡೆಸುವ ಡ್ರಗ್ಸ್ ಜಾಲವನ್ನೂ ಕೂಡ ಭೇದಿಸಲಾಗಿದೆ. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲಾಗಿದ್ದರೂ, ಕರ್ನಾಟಕದ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಈ ಸಮಸ್ಯೆಯನ್ನು ಮಟ್ಟಹಾಕಲು ಹೆಚ್ಚಿನ ಸಹಕಾರ ಅಗತ್ಯ ಎಂದರು.

ಭಯೋತ್ಪಾದನೆ ನಿಗ್ರಹ

ಭಯೋತ್ಪದನಾ ಚಟುವಟಿಕೆಗಳು ರಾಜ್ಯದಲ್ಲಿಯೂ ನಡೆದಿದ್ದು, ಇವುಗಳ ನಿಗ್ರಹಕ್ಕೆ ಮಾಹಿತಿ ಸಂಗ್ರಹಣೆ, ಸಮನ್ವಯ, ಸಹಕಾರ ಹಾಗೂ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಅಗತ್ಯ. ಅಂತಾರಾಜ್ಯ ಅಪರಾಧಿಗಳು ಹಾಗೂ ಗ್ಯಾಂಗ್‌ಗಳ ಮೇಲೆ ನಿಗಾ ಅಗತ್ಯವೆಂದ ಮುಖ್ಯಮಂತ್ರಿಗಳು, ಈ ಕುರಿತು ವಿವಿಧ ರಾಜ್ಯಗಳ ನಡುವೆ ಸಮನ್ವಯ ಹಾಗೂ ಸಹಕಾರವಿದ್ದರೆ ಅಪರಾಧಿಗಳನ್ನು ಮಟ್ಟಹಾಕುವುದು ಸುಲಭ ಎಂದರು.

ಇದನ್ನೂ ಓದಿ | Cauvery water dispute : ತಮಿಳುನಾಡಿಗೆ ಕೂಡಲೇ ನೀರು ನಿಲ್ಲಿಸಿ: ಎಚ್‌.ಡಿ. ಕುಮಾರಸ್ವಾಮಿ ಖಡಕ್‌ ಎಚ್ಚರಿಕೆ

ತೀವ್ರಗಾಮಿಗಳ ಪ್ರತ್ಯೇಕತೆಗೆ ಕ್ರಮ

ಜೈಲುಗಳಲ್ಲಿ ತೀವ್ರಗಾಮಿಗಳ ಪ್ರತ್ಯೇಕತೆಗೆ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದ ಮುಖ್ಯಮಂತ್ರಿಗಳು, ಪೋಲಿಸ್ ಅಧಿಕಾರಿಗಳಿಗೆ ತಂತ್ರಜ್ಞಾನದ ಬಳಕೆ, ತರಬೇತಿ, ಸಾಮರ್ಥ್ಯ ವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಗೃಹ ಸಚಿವರಾದ ಜಿ.ಪರಮೇಶ್ವರ್ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಉಪಸ್ಥಿತರಿದ್ದರು.

Exit mobile version