Site icon Vistara News

Jain College: ಸ್ಕಿಟ್‌ನಲ್ಲಿ ಅಂಬೇಡ್ಕರ್‌ಗೆ ಅಪಮಾನ ಪ್ರಕರಣ; ಏಳು ವಿದ್ಯಾರ್ಥಿಗಳ ಬಂಧನ

#image_title

ಬೆಂಗಳೂರು: ಜೈನ್ ಯುನಿವರ್ಸಿಟಿ ವಿದ್ಯಾರ್ಥಿಗಳಿಂದ ಬಾಬಾ ಸಾಹೇಬ್ ಡಾ. ಬಿ.ಆರ್‌ ಅಂಬೇಡ್ಕರ್‌ಗೆ (Jain College) ಅವಮಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಜೈನ್‌ ಕಾಲೇಜಿನ 7 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಬಂಧಿತ ಏಳು ವಿದ್ಯಾರ್ಥಿಗಳು 5ನೇ ಸೆಮಿಸ್ಟರ್‌ನ ಬೇರೆ ಬೇರೆ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸುಜಲ್, ನೈಮಾ ನಾಗ್ರಿಯಾ, ಗೌರವ್ ಪವಾರ್, ಪ್ರಣವ್ ಪಲ್ಲಿಯಿಲ್ ಹಾಗೂ ರಿಷಬ್ ಜೈನ್, ಸ್ಮೃತಿ ಆರ್.ಬಿ ಹಾಗೂ ಆಸಿಶ್ ಅಗರ್ವಾಲ್ ಎಂಬುವವರನ್ನು ಬಂಧಿಸಲಾಗಿದೆ.

ದಕ್ಷಿಣ ವಿಭಾಗದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಿಂದ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕಾಲೇಜಿನ ಪ್ರಾಂಶುಪಾಲರು, ಡೀನ್, ಕಾರ್ಯಕ್ರಮ ಆಯೋಜಕರು, ವಿದ್ಯಾರ್ಥಿಗಳು ಹಾಗೂ ಸ್ಕಿಟ್ ಬರಹಗಾರರ ಮೇಲೆ ಕೇಸ್ ದಾಖಲಾಗಿತ್ತು. ಜಯನಗರ ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಎಸ್‌ಸಿ, ಎಸ್‌ಟಿ ಆ್ಯಕ್ಟ್ ಹಾಗೂ ಐಪಿಸಿ 153a, 295a, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾಲೇಜಿನಿಂದ ವಿದ್ಯಾರ್ಥಿಗಳ ಅಮಾನತು

ವಿದ್ಯಾರ್ಥಿಗಳ ಸ್ಕಿಟ್ ಪ್ರದರ್ಶನದಿಂದಾಗಿ ಮುಜುಗರಕ್ಕೀಡಾಗಿರುವ ಜೈನ್‌ ಕಾಲೇಜು ಆಡಳಿತ ಮಂಡಳಿಯೂ ಅಸಮಾಧಾನ ಹೊರಹಾಕಿದೆ. ಈಗಾಗಲೇ ಬೇಷರತ್ ಕ್ಷಮೆಯಾಚಿಸಿದ್ದು, ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಈ ಎಲ್ಲ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?

ಲಾಲ್‌ಬಾಗ್ ರಸ್ತೆಯಲ್ಲಿರುವ ಜೈನ್ ಕಾಲೇಜಿನಲ್ಲಿ ಕಳೆದ ಫೆ.5ರಂದು ಕಾಲೇಜು ಯೂತ್‌ ಫೆಸ್ಟ್ ನಡೆಸಲಾಗಿತ್ತು. ನಗರದ ನಿಮ್ಹಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾತಿ ವ್ಯವಸ್ಥೆಯನ್ನು ಖಂಡಿಸುವ ಸಂದೇಶವನ್ನು ಕೊಡುವ ಭರದಲ್ಲಿ ವಿದ್ಯಾರ್ಥಿಗಳು ಯಡವಟ್ಟು ಮಾಡಿಕೊಂಡಿದ್ದರು. ಕಾಲೇಜು ಫೆಸ್ಟ್‌ನಲ್ಲಿ ಹಾಸ್ಯ ಜತೆಗೆ ದಲಿತರನ್ನು ಗೇಲಿ ಮಾಡಿದ್ದಾರೆಂದು ದಲಿತಪರ ಸಂಘಟನೆಗಳು ಆರೋಪಿಸಿದ್ದವು.

ಸಿಎಂಎಸ್‌ ಥಿಯೇಟರ್ ಗ್ರೂಪ್ ದಿ ಡೆಲ್ರಾಯ್ಸ್ ಬಾಯ್ಸ್ ಈ ಸ್ಕಿಟ್ ಅನ್ನು ಪ್ರದರ್ಶಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅಲ್ಲ. ಅವರು ʻಬಿಯರ್ ಅಂಬೇಡ್ಕರ್ʼ ಎಂದು ಅವಹೇಳನ ಮಾಡಿದ್ದರು. ಸ್ಕಿಟ್‌ನಲ್ಲಿ ದಲಿತ ಯುವತಿ ಬಗ್ಗೆಯೂ ಅವಮಾನ ಮಾಡಿದ್ದು, ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಹಾಕಿ ಗೇಲಿ ಮಾಡಿದ್ದರು. ‘ನೀವು ಡಿ-ಲಿಟ್ ಆಗಿರುವಾಗ ದಲಿತರಾಗಿರಲು ಕಾರಣವೇನು’ ಎಂದು ‍ವಿವಾದಾತ್ಮಕವಾಗಿ ನುಡಿದಿದ್ದರು.

ಇದನ್ನೂ ಓದಿ: Aero India 2023: ಏರೋ ಇಂಡಿಯಾದಲ್ಲಿ 98 ದೇಶಗಳಿಂದ 809 ಕಂಪನಿಗಳು ಭಾಗಿ, ಭಾರಿ ಹೂಡಿಕೆ ನಿರೀಕ್ಷೆ

ವಿಡಿಯೊ ವೈರಲ್‌ ಬೆನ್ನಲೇ ಮಹಾರಾಷ್ಟ್ರದಲ್ಲೂ ಕೇಸ್‌ ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನದ ವಿಡಿಯೊ ವೈರಲ್ ಆಗುತ್ತಿದ್ದಂತೆ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಯ ಬಗ್ಗೆ ಮಹಾರಾಷ್ಟ್ರದಲ್ಲಿ ದಲಿತ ಸಂಘಟನೆಯ ಮುಖಂಡ ಅಕ್ಷಯ್ ಬನ್ಸೋಡೆ ಎಂಬುವವರು ನಾಂದೇಡ್ (ಮಹಾರಾಷ್ಟ್ರ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಇತ್ತ ಕರ್ನಾಟಕದಲ್ಲಿ ದಲಿತ ಸಂಘಟನೆಗಳು ಜೈನ್‌ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿ ಕಪ್ಪು ಮಸಿ ಬಳಿದು ಕಿಡಿಕಾರಿದ್ದವು.

Exit mobile version