ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಸುಪ್ರಸಿದ್ಧ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಅಫಜಲಪುರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2022ರ ಡಿಸೆಂಬರ್ 29 ರಂದು ರಾತ್ರಿ ವೇಳೆ ಘತ್ತರಗಾ ಭಾಗ್ಯವಂತಿ ದೇವಸ್ಥಾನಕ್ಕೆ ನುಗ್ಗಿ ಮೂರು ಜನ ಮುಸುಕುಧಾರಿಗಳು, ದೇವಿ ಮೂರ್ತಿಯ ಮೇಲಿದ್ದ 6 ಲಕ್ಷದ 40 ಸಾವಿರ ಮೌಲ್ಯದ ಬಂಗಾರದ ಆಭರಣಗಳು ಮತ್ತು ಕಾಣಿಕೆ ಹುಂಡಿಯಲ್ಲಿದ್ದ 1 ಲಕ್ಷದ 50 ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಗ್ಗೆ ತುರ್ತು ಸೇವೆಗಳಿಗೆ ತಕ್ಷಣ ಮಾಹಿತಿ ನೀಡಿದ್ದು, ರಜಾದಲ್ಲಿದ್ದ ಎನ್ಡಿಆರ್ಎಫ್ ಯೋಧ!
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಅಫಜಲಪುರ ಠಾಣೆಯ ಪೊಲೀಸರು ಆರೋಪಿಗಳಾದ ತಾನಾಜಿ ರಾಠೋಡ್ ಮತ್ತು ಕವಿತಾ ರಾಠೋಡ್ ಅವರನ್ನು ಬಂಧಿಸಿದ್ದಾರೆ.
ಆರೋಪಿಗಳು ಮೂಲತಃ ಬೀದರ್ ಜಿಲ್ಲೆಯ ಅವರಾದ್ ತಾಲೂಕಿನ ಹರಿಯಾಳ ಗ್ರಾಮದವರಾಗಿದ್ದು ಇವರಿಂದ 65 ಗ್ರಾಂ ಬಂಗಾರದ ಆಭರಣಗಳು ಮತ್ತು 80 ಸಾವಿರ ರೂ. ನಗದು ಹಣವನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.