ಪ್ರಧಾನಿ ನರೇಂದ್ರ ಮೋದಿ ಸಂವಾದ ಅಂತ್ಯ
ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದ ಅಂತ್ಯಗೊಂಡಿದೆ.
ರಾಜ್ಯದ ಜಿಲ್ಲಾ ಬಿಜೆಪಿ ಕಚೇರಿಗಳಲ್ಲಿ LED ಪರದೆ ಅಳವಡಿಸಿ ಈ ಸಂವಾದದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಕರ್ನಾಟಕದ ವಿಕಾಸ ಎಂದರೆ ಭಾರತದ ವಿಕಾಸ
ಕರ್ನಾಟಕದ ಅಭಿವೃದ್ಧಿ ಎಂದರೆ ಭಾರತದ ಅಭಿವೃದ್ಧಿ ಎಂದಿರುವ ಪ್ರಧಾನಿ ಮೋದಿ, ಇಂದು ಇಡೀ ಜಗತ್ತು ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದತ್ತ ನೋಡುತ್ತಿದೆ. ಈ ಅವಕಾಶವನ್ನು ಕರ್ನಾಟಕ ಬಳಸಿಕೊಳ್ಳಬೇಕಾಗಿದೆ. ಇದಕ್ಕಾಗಿ ರಾಜ್ಯದಲ್ಲಿನ ಮೂಲ ಸೌಕರ್ಯಗಳನ್ನು ಆಧುನೀಕರಣಗೊಳಿಸಬೇಕಾಗಿದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಬೆಂಗಳೂರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಆಧುನೀಕರಣ, ಬೆಂಗಳೂ- ಮೈಸೂರು ಎಕ್ಸ್ಪ್ರೆಸ್ ವೇ, ಶಿವಮೊಗ್ಗ, ಬೀದರ್ ವಿಮಾನ ನಿಲ್ದಾಣ ಆರಂಭಿಸಲಾಗಿದೆ ಎಂದಿದ್ದಾರೆ.
ಬೆಂಗಳೂರಿನ ಕಾರ್ಯಕರ್ತ ಯೋಗೇಶ್ ಪ್ರಶ್ನೆಗೆ ಮೋದಿ ಈ ಉತ್ತರ ನೀಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗಲ್ಲ
ಕಾಂಗ್ರೆಸ್ ಭರವಸೆ ನೀಡಿರುವ ಗ್ಯಾರಂಟಿ ಬಗ್ಗೆ ಆನ್ಲೈನ್ ಸಂವಾದದಲ್ಲಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ʻಅವಧಿ ಮುಗಿದಿದೆʼ ಎಂದು ಲೇವಡಿ ಮಾಡಿದ್ದಾರಲ್ಲದೆ, ಕಾಂಗ್ರೆಸ್ ಸುಳ್ಳು ಭರವಸೆ ನೀಡುತ್ತಿದೆ. ಅದು ನೀಡಿದ ಗ್ಯಾರಂಟಿ ಯೋಜನೆಗಳು ಹಿಮಾಚಲ ಪ್ರದೇಶ, ರಾಜಸ್ಥಾನದಲ್ಲಿ ಜಾರಿಗೆ ಬಂದಿಲ್ಲ. ಕಾಂಗ್ರೆಸ್ ಎಂದರೆ ಸುಳ್ಳು ಹೇಳುವ, ಭ್ರಷ್ಟಾಚಾರ ಮಾಡುವ, ವಂಶಪಾರಂಪರ್ಯ ಆಡಳಿತ ನಡೆಸುವ ಗ್ಯಾರಂಟಿ ನೀಡುವ ಪಕ್ಷ ಎಂದು ಕುಟುಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜತೆ ಸಂವಾದ ಆರಂಭ
ಬೆಂಗಳೂರು: ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಂವಾದ ಆರಂಭವಾಗಿದ್ದು, ನಗರದ ಮೂರು ಕಡೆ ಸಂವಾದದ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಬಿಜೆಪಿ ಕಚೇರಿಯ ಮೂರನೇ ಮಹಡಿಯಲ್ಲಿ LED ಪರದೆ ಅಳವಡಿಸಲಾಗಿದೆ. ಪ್ರಧಾನಿ ಸಂವಾದ ವೀಕ್ಷಣೆಗೆ ಬಿ.ಎಲ್ ಸಂತೋಷ್ ಹಾಗೂ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಆಗಮಿಸಿದ್ದಾರೆ.
ವಿಜಯನಗರ, ಬಳ್ಳಾರಿಯಲ್ಲಿ ಇಂದು ನಟ ಸುದೀಪ್ ಪ್ರಚಾರ
ವಿಜಯನಗರ/ ಬಳ್ಳಾರಿ: ಇಂದು ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಲಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಸುದೀಪ್ ಪ್ರಚಾರ ನಡೆಸಲಿದ್ದಾರೆ.