Site icon Vistara News

Karnataka Election : ಸಿದ್ದರಾಮಯ್ಯಗೆ ಯುವಕನ ಆಫರ್‌, ರಾಯಚೂರಿನಿಂದ ಕಣಕ್ಕಿಳಿದರೆ ಜಮೀನು ಮಾರಿ ಹಣ ಕೊಡ್ತಾನಂತೆ!

ಸಿದ್ದರಾಮಯ್ಯನಿಗೆ ಅಭಿಮಾನಿ ಆಫರ್

#image_title

ರಾಯಚೂರು: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ (Karnataka Election) ಸ್ಪರ್ಧೆ ಮಾಡಲು ಸೂಕ್ತ ಕ್ಷೇತ್ರವಿಲ್ಲದೆ ಕಷ್ಟಪಡುತ್ತಿರುವುದು ನಿಜವೇ ಆದರೂ ಅವರನ್ನು ತಮ್ಮೂರಿಗೆ ಬನ್ನಿ ಎಂದು ಕರೆಯುವ ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ರಾಜ್ಯದ ಎಲ್ಲ ಕಡೆಗಳಲ್ಲಿ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಈ ನಡುವೆ ರಾಯಚೂರಿನ ಅಭಿಮಾನಿ ಯುವಕನೊಬ್ಬ ಸಿದ್ದು ಅವರಿಗೆ ಒಂದು ಹೊಸ ಆಫರ್‌ ಕೊಟ್ಟಿದ್ದನೆ.

ಒಂದೊಮ್ಮೆ ಸಿದ್ದರಾಮಯ್ಯ ಅವರು ರಾಯಚೂರಿನ ಯಾವುದಾದರೂ ಕ್ಷೇತ್ರದಲ್ಲಿ ಕಣಕ್ಕಿಳಿದರೆ ತನಗಿರುವ ಎರಡು ಎಕರೆ ಜಮೀನನ್ನೇ ಕೊಡುವುದಾಗಿ ಘೋಷಿಸಿದ್ದಾನೆ. ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯಾಗಿರುವ ಲಿಂಗಸುಗೂರು ಕ್ಷೇತ್ರದ ಚಿಕ್ಕ ಹೆಸರೂರಿನ ಯುವಕ ಶರಣು ಕಡ್ಡೋಣಿ ಈ ಆಫರ್‌ ನೀಡಿದವನು. ಸಾಮಾಜಿಕ ಜಾಲತಾಣದಲ್ಲಿ ಈ ಆಫರ್‌ ನೀಡಿರುವ ಯುವಕ ನಿಜದಲ್ಲೂ ಸಿದ್ದರಾಮಯ್ಯ ಅವರಿಗೆ ಏನು ಬೇಕಾದರೂ ಮಾಡಬಲ್ಲಷ್ಟು ಪ್ರೀತಿಯನ್ನು ಹೊಂದಿದವನು.

ʻʻಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ನನ್ನ ಪಾಲಿನ ಎರಡು ಎಕರೆ ಭೂಮಿ ಕೊಡುತ್ತೇನೆ. ಈ ಜಮೀನು ಮಾರಾಟದಿಂದ ಬಂದ ಹಣವನ್ನು ಚುನಾವಣೆಗೆ ಖರ್ಚು ಮಾಡುತ್ತೇನೆʼʼ ಎಂದಿರುವ ಯುವಕ ಸಿಂಧನೂರು ಅಥವಾ ರಾಯಚೂರು ಕ್ಷೇತ್ರದಿಂದ ಸ್ಪರ್ಧೆಗೆ ಅಹ್ವಾನ ನೀಡಿದ್ದಾನೆ.

ಚಿಕ್ಕ ಹೆಸರೂರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯನಾಗಿರುವ ಶರಣು ಫೇಸ್‌ ಬುಕ್‌ನಲ್ಲಿ ನೀಡಿರುವ ಈ ಆಹ್ವಾನ ಎಲ್ಲೆಡೆ ವೈರಲ್‌ ಆಗಿದೆ. ಕೆಲವರು ಅವನನ್ನು ಹೊಗಳಿದ್ದರೆ, ಕೆಲವರು ಇದೆಲ್ಲ ಪ್ರಚಾರಕ್ಕೆ ಎಂದಿದ್ದಾರೆ.

ʻʻನಾನು ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಯುವಕ. ಈ‌ ಲಿಂಗಸಗೂರು ಕ್ಷೇತ್ರ ಎಸ್ ಸಿ ಮೀಸಲು ಕ್ಷೇತ್ರವಾಗಿದೆ. ಹಾಗಾಗಿ ಸಿಂಧನೂರು ಅಥವಾ ರಾಯಚೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲಿ. ಎಲ್ಲೇ ನಿಂತರೂ ಸಿದ್ದರಾಮಯ್ಯ ಅವರಿಗೆ 50 ಸಾವಿರ ಮತಗಳ ಅಂತರದಿಂದ ಗೆಲುವು ಖಚಿತʼʼ ಎಂದಿರುವ ಯುವಕ, ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಬರಬೇಕು ಎನ್ನುವ ಕಳಕಳಿ ತೋರಿದ್ದಾರೆ.

ಇದನ್ನೂ ಓದಿ ಸ| ಸಿಎಂ ಸಿದ್ದರಾಮಯ್ಯ ಬಾಸ್‌ ಎಂದು ಬಂಗಾರದಲ್ಲಿ ಬರೆಸಿದ ಅಭಿಮಾನಿ, ಸಿದ್ದು ಪ್ರತಿಕ್ರಿಯೆ ಏನಿತ್ತು?

Exit mobile version