Site icon Vistara News

Karnataka Election: ರಿಪ್ಪನ್‌ಪೇಟೆ ಅಭಿವೃದ್ಧಿಗೆ 36 ಕೋಟಿ ರೂ. ಅನುದಾನ ತಂದಿರುವೆ: ಹರತಾಳು ಹಾಲಪ್ಪ

ಹಾಲಪ್ಪ ಅವರಿಂದ ಚುನಾವಣಾ ಪ್ರಚಾರ

ರಿಪ್ಪನ್‌ಪೇಟೆ: “ಸಮಾಜವಾದಿ ನೇತಾರ ವರ್ಣರಂಜಿತ ನಾಯಕ ಎಸ್. ಬಂಗಾರಪ್ಪ ಅವರು ನಿಧನರಾಗಿದ್ದ ಸಂದರ್ಭದಲ್ಲಿ ಅವರ ಕುರಿತು ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಂತಾಪ ಸಭೆಯಲ್ಲಿ ಅವಕಾಶವನ್ನು ನೀಡಲಾಗಿದ್ದರೂ ಬಂಗಾರಪ್ಪನವರ ಬಗ್ಗೆ ಗುಣಗಾನ ಮಾಡದವರು ಮಾನಸ ಪುತ್ರರಾಗಲು ಹೇಗೆ ಸಾಧ್ಯ” ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರ ಹೆಸರನ್ನು ಪ್ರಸ್ತಾಪ ಮಾಡದೇ ಶಾಸಕ ಹರತಾಳು ಹಾಲಪ್ಪ ವ್ಯಂಗ್ಯವಾಡಿದರು.

ಬಿಜೆಪಿ ಪಕ್ಷದ ಅಭ್ಯರ್ಥಿ ಹರತಾಳು ಹಾಲಪ್ಪ ಅವರು ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಮತಯಾಚಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ ಐದು ವರ್ಷದ ಅವಧಿಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ 36 ಕೋಟಿ ರೂಪಾಯಿ ಅನುದಾನವನ್ನು ತಂದಿರುವುದಾಗಿ ವಿವರಿಸಿದರು.

ಇದನ್ನೂ ಓದಿ: Karnataka Election 2023: ಪ್ರಿಯಾಂಕ್‌ ಖರ್ಗೆಯನ್ನು ಜಿರಳೆ ಎಂದ ಈಶ್ವರಪ್ಪ; ರಾಜ್ಯ ಜನರ ಕ್ಷಮೆ ಕೇಳಲು ಆಗ್ರಹ

“ಈ ಹಿಂದೆ 10 ವರ್ಷದ ಅವಧಿಯಲ್ಲಿ ಶಾಸಕರಾಗಿದ್ದವರು ಎಷ್ಟು ಅನುದಾನವನ್ನು ತಂದಿದ್ದಾರೆ? ಈಗಾಗಲೇ ನಾನು ಚುನಾವಣೆಯ ಸಂದರ್ಭದಲ್ಲಿ ರಿಪ್ಪನ್‌ಪೇಟೆಯ ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ವಿನಾಯಕ ವೃತ್ತದಿಂದ ತಲಾ ಒಂದು ಕಿ.ಮೀ. ಡಬಲ್ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದೇನೆ. ಅದರಂತೆ ಸಾಗರ ರಸ್ತೆಯಲ್ಲಿ ಡಬಲ್ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಸಹ ಆರಂಭವಾಗಿದೆ. ಉಳಿದ ಮೂರು ರಸ್ತೆಗಳನ್ನು ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸುವ ಬಗ್ಗೆ ಸರ್ಕಾರದಿಂದ ಅನುದಾನ ತರುವುದರೊಂದಿಗೆ ಅಭಿವೃದ್ಧಿ ಮಾಡಲು ನನಗೆ ಮತ ನೀಡಿ” ಎಂದು ಮನವಿ ಮಾಡಿದರು.

“ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಬಗರ್‌ಹುಕುಂ ಸಾಗುವಳಿ ರೈತರ ಸಮಸ್ಯೆಗೆ ಶಾಸನ ಸಭೆಯ ಒಳಗೆ ಮತ್ತು ಹೊರಗೆ ಹೋರಾಟ ಮಾಡುವುದರೊಂದಿಗೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವವರ ಪರ ಕಾಗೋಡು ಹೋರಾಟದಂತೆ ಉಳುವವನೇ ಹೊಲದೊಡೆಯ ತತ್ವ ಸಿದ್ಧಾಂತದಂತೆ ಹೋರಾಟ ನಡೆಸಿ ಶಾಶ್ವತ ಪರಿಹಾರ ಕೊಡಿಸಲು ನನಗೆ ಈ ಬಾರಿ ಮತ ಕೊಡಿ” ಎಂದ ಹಾಲಪ್ಪ ಕೇಳಿಕೊಂಡರು. ಹಾಗೆಯೇ, “ಬಿಜೆಪಿ ಬಡವರ, ದೀನದಲಿತ ಪರವಾದ ಪಕ್ಷವಾಗಿದೆ. ಬಿ.ಎಸ್. ಯಡಿಯೂರಪ್ಪನವರ ಕನಸನ್ನು ನನಸು ಮಾಡಲು ಬಿಜೆಪಿ ಪಕ್ಷವನ್ನು ಬೆಂಬಲಿಸಿ” ಎಂದರು.

ಇದನ್ನೂ ಓದಿ: Karnataka Election 2023: ಯಮಕನಮರಡಿಯಲ್ಲಿ ಈ ಬಾರಿ ಸತೀಶ್‌ ಜಾರಕಿಹೊಳಿಗೆ ಬಿಜೆಪಿ ಶಾಕ್‌?

“ಹೊಸನಗರ ತಾಲ್ಲೂಕಿನ ವೀರಶೈವ ಸಮಾಜಕ್ಕೆ 8 ಕೋಟಿ ನಾರಾಯಣ ಗುರು ಮಠಕ್ಕೆ 10 ಕೋಟಿ ಹಾಗೂ 600ಕ್ಕೂ ಅಧಿಕ ದೇವಸ್ಥಾನಗಳ ಅಭಿವೃದ್ಧಿ ಹಾಗೂ 880 ಗ್ರಾಮೀಣ ರಸ್ತೆಗಳಿಗೆ ಹಾಗೂ ಸೇತುವೆ ಕಾಲುಸಂಕ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಜಾತಿಗಳ ಭೇದಭಾವ ತೊರದೆ ಎಲ್ಲರಿಗೂ ಸಮಾನತೆ ನೀಡಿ ಹೆಚ್ಚಿನ ಅನುದಾನ ನೀಡಲಾಗಿದೆ” ಎಂದು ಸಭೆಯಲ್ಲಿ ವಿವರಿಸಿದರು.

ಪ್ರಚಾರ ಕಾರ್ಯಕ್ರಮದಲ್ಲಿ ಹಾಲಪ್ಪ ಅವರಿಂದ ಭಾಷಣ

ಸಂಸದ ಬಿ.ವೈ.ರಾಘವೇಂದ್ರ ಮತಯಾಚಿಸಿ, “ಸಾಗರ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹರತಾಳು ಹಾಲಪ್ಪ ಶ್ರಮಿಸಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಲಿದೆ. ಬಗರ್‌ಹುಕುಂ ಸಮಸ್ಯೆ, ಅರಣ್ಯ ಒತ್ತುವರಿದಾರರ ಸಮಸ್ಯೆಗೆ ಶಾಸನ ಸಭೆಯಲ್ಲಿ ಧ್ವನಿ ಎತ್ತುವುದರೊಂದಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಲಿದ್ದಾರೆ. ಅದಕ್ಕಾಗಿ ನೀವು ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಚಿಹ್ನೆಗೆ ಮತ ನೀಡಿ” ಎಂದು ಮನವಿ ಮಾಡಿದರು.

ಇದನ್ನೂ ಓದಿ: Karnataka Election 2023: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ: ಜನಮನ ಗೆಲ್ಲುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ

ಸಭೆಯಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿ.ಪಂ. ಮಾಜಿ ಸದಸ್ಯರಾದ ಎ.ಟಿ.ನಾಗರತ್ನಮ್ಮ, ಸುರೇಶ್‌ ಸ್ವಾಮಿರಾವ್, ಬಿಜೆಪಿ ಹಿರಿಯ ಮುಖಂಡರಾದ ಡಾ. ರಾಜಾನಂದಿನಿ, ತಲ್ಲೂರುರಾಜು, ಕೆರೆಕೈ ಪ್ರಸನ್ನ, ಗಣಪತಿ ಬೆಳಗೋಡು, ಎಂ.ಬಿ.ಮಂಜುನಾಥ, ಮಂಜುಳ ಕೇತಾರ್ಜಿರಾವ್, ಬಿ.ಯುವರಾಜ್, ವೀರೇಶ್‌ ಅಲುವಳ್ಳಿ, ಬೆಳ್ಳೂರು ತಿಮ್ಮಪ್ಪ, ಹೊನಗೋಡು ರತ್ನಾಕರ್, ಸುರೇಶ್‌ ಸಿಂಗ್ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.

ಬಹಿರಂಗ ಸಭೆಗೂ ಮುನ್ನ ರಿಪ್ಪನ್‌ಪೇಟೆಯ ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂದಿರದ ಬಳಿಯಿಂದ ಸಾವಿರಾರು ಬೈಕ್‌ಗಳಲ್ಲಿ ಕಾರ್ಯಕರ್ತರು ನಾಲ್ಕು ರಸ್ತೆಯಲ್ಲಿ ಬೈಕ್ ರ‍್ಯಾಲಿ ನಡೆಸಿದರು.

Exit mobile version