Site icon Vistara News

Karnataka Elections: ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಇಂದು ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ, ಶೀಘ್ರ ಕಾಂಗ್ರೆಸ್‌ ಸೇರ್ಪಡೆ

KM Shivalingegowda

#image_title

ಶಿರಸಿ/ಹಾಸನ: ಕಳೆದ ಕೆಲವು ತಿಂಗಳುಗಳಿಂದ ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿ, ಮುಂದಿನ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಎದುರಿಸಲು ರೆಡಿ ಆಗಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇ ಗೌಡ (KM Shivalinge gowda) ಅವರು ಭಾನುವಾರ (ಏಪ್ರಿಲ್‌ 2) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅರಕಲಗೂಡು ಶಾಸಕರಾಗಿದ್ದ ಎ.ಟಿ. ರಾಮಸ್ವಾಮಿ ಅವರು ಎರಡು ದಿನದ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶನಿವಾರ ದಿಲ್ಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಈಗ ಶಿವಲಿಂಗೇಗೌಡರು ಅಧಿಕೃತವಾಗಿ ಪಕ್ಷ ತೊರೆಯುವ ಸಮಯ ಸನ್ನಿಹಿತವಾಗಿದೆ. ಜೆಡಿಎಸ್‌ಗೆ ತನ್ನ ಭದ್ರಕೋಟೆಯಲ್ಲಿ ಎರಡನೇ ಹೊಡೆತ ಬಿದ್ದಂತಾಗಿದೆ.

ಕೆ.ಎಂ. ಶಿವಲಿಂಗೇಗೌಡರು ಈಗಾಗಲೇ ಹಾಸನ ಬಿಟ್ಟು ಶಿರಸಿಗೆ ತೆರಳಿದ್ದಾರೆ. ಅಲ್ಲಿ ಅವರು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ. ಅದು ಅಂಗೀಕಾರವಾದ ಬೆನ್ನಿಗೇ ಶಾಸಕತ್ವದಿಂದ ಮುಕ್ತಿ ಹೊಂದುವ ಶಿವಲಿಂಗೇಗೌಡರಿಗೆ ಕಾಂಗ್ರೆಸ್‌ ಸೇರ್ಪಡೆ ಮಾರ್ಗ ನಿರಾಳವಾಗಲಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಲಿರುವ ಎರಡನೇ ಪಟಿಯಲ್ಲಿ ಶಿವಲಿಂಗೇಗೌಡ ಅವರ ಹೆಸರು ಇದೆ ಎನ್ನಲಾಗಿದೆ.

ವಿಧಾನಸಭೆಯಲ್ಲಿ ತಮ್ಮ ವಿಶಿಷ್ಟ ಶೈಲಿಯ ಗ್ರಾಮ್ಯ ಮಾತು ಮತ್ತು ನೇರ ನಡೆನುಡಿಗಳಿಂದ ಹೆಸರಾಗಿರುವ ಶಿವಲಿಂಗೇ ಗೌಡರು ಕಳೆದ ಕೆಲವು ಸಮಯದಿಂದ ಜೆಡಿಎಸ್‌ ಬಗ್ಗೆ ಆಸಕ್ತಿ ಹೊಂದಿಲ್ಲ. ಅವರು ಪಕ್ಷದ ಸಭೆಗಳಿಂದಲೂ ದೂರ ಉಳಿದಿದ್ದರು. ಆದರಲ್ಲೂ ಬಿಜೆಪಿಯ ಎನ್‌.ಆರ್‌ ಸಂತೋಷ್‌ ಅವರು ತಾನೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಓಡಾಡಲು ಆರಂಭಿಸಿದ ಬಳಿಕ ಶಿವಲಿಂಗೇಗೌಡ ಅವರು ಯಾಕೋ ಕಾಂಗ್ರೆಸ್‌ ಕಡೆಗೆ ವಾಲಿದ್ದರು. ಎನ್‌.ಆರ್‌. ಸಂತೋಷ್‌ ಅವರು ರಾಗಿ ಕಳವು ಸೇರಿದಂತೆ ಇತರ ಆರೋಪಗಳನ್ನು ಮಾಡಿದಾಗ ತುಂಬ ನೊಂದಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್‌ ತಮ್ಮ ನೆರವಿಗೆ ಬಂದಿಲ್ಲ ಎನ್ನುವ ನೋವೂ ಅವರಿಗಿತ್ತು.

ಎಚ್‌.ಡಿ ಕುಮಾರಸ್ವಾಮಿ ಮತ್ತು ಎಚ್‌.ಡಿ. ರೇವಣ್ಣ ಸೇರಿದಂತೆ ಎಲ್ಲರ ಜತೆಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದ ಶಿವಲಿಂಗೇಗೌಡ ಅವರು ಹಲವು ಸುತ್ತಿನಲ್ಲಿ ಅಭಿಮಾನಿಗಳ ಸಭೆ ನಡೆಸಿ ಅಂತಿಮವಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದೊಡ್ಡ ಸಮಾರಂಭ ಏರ್ಪಡಿಸಿ ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗಿದೆ.

ಎರಡು ಬಾರಿ ಶಾಸಕರಾದ ಶಿವಲಿಂಗೇಗೌಡ

65 ವರ್ಷದ ಶಿವಲಿಂಗೇಗೌಡ ಅವರು 2001ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದವರು. ಬಳಿಕ 2013 ಮತ್ತು 2018ರಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕರಾಗಿದ್ದಾರೆ. ಅರಸೀಕೆರೆಯ ಕುಡುಕುಂದಿ ಗ್ರಾಮದವರಾದ ಇವರು ಹಾಸನ ಆರ್ಟ್‌ ಕಾಲೇಜಿನ ಬಿಎ ವಿದ್ಯಾರ್ಥಿ. ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಸ್ವಚ್ಛ ರಾಜಕಾರಣಿ ಎಂಬ ಹೆಸರು ಅವರಿಗೆ ಇದೆ.

ಕಾಂಗ್ರೆಸ್‌ ಸೇರ್ಪಡೆಗೆ ವಿರೋಧ

ಶಿವಲಿಂಗೇಗೌಡ ಅವರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರುವುದು ಬಹುತೇಕ ನಿಶ್ಚಿತ. ಅವರಿಗೆ ಸಿದ್ದರಾಮಯ್ಯ ಅವರು ಬೆಂಬಲವಾಗಿ ನಿಂತಿದ್ದಾರೆ. ಡಿ.ಕೆ. ಶಿವಕುಮಾರ್‌ ಬೆಂಬಲವೂ ಇದೆ. ಆದರೆ, ಸ್ಥಳೀಯವಾಗಿ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತ ಎಚ್‌.ಡಿ. ಕುಮಾರಸ್ವಾಮಿ ಅವರು ಅರಸೀಕೆರೆಗೆ ಆಗಲೇ ಅಶೋಕ್‌ ಬಾಣಾವರ ಅವರು ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ : Hasana Politics : ಪಕ್ಷ ಬಿಡದಂತೆ ಶಿವಲಿಂಗೇಗೌಡರ ಮನವೊಲಿಕೆ; ಎಚ್‌.ಡಿ. ರೇವಣ್ಣ ಮಾತುಕತೆಯ ಆಡಿಯೊ ವೈರಲ್

Exit mobile version