Site icon Vistara News

Karnataka Elections 2023 : ಕಾಂಗ್ರೆಸ್‌ ಏನೇ ಆರೋಪ ಮಾಡಿದರೂ ಜನರು ನಮ್ಮ ಪರ: ಬೊಮ್ಮಾಯಿ ವಿಶ್ವಾಸ

BPL Card holders will get half liter nandini milk says BJP Manifesto

ಬೆಂಗಳೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು (Karnataka Elections 2023) ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ. ಕಾಂಗ್ರೆಸ್‌ ಏನೇ ಆರೋಪ ಮಾಡಿದರೂ ಜನತಾ ಜನಾರ್ದನ ನಮ್ಮ ಪರವಾಗಿದ್ದಾನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಚುನಾವಣೆ ಘೋಷಣೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ತಳಮಟ್ಟದಿಂದಲೇ ಗಟ್ಟಿಯಾಗಿದೆ ಎಂದರು.

ʻʻಬಿಜೆಪಿ ಬಲಿಷ್ಠ ಕೇಡರ್ ಇರುವ, ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಈಗಾಗಲೇ ಹಲವಾರು ಅಭಿಯಾನ ಮಾಡಿದೆ. ನಿರಂತರವಾಗಿ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದ್ದು, ಬೂತ್ ಮಟ್ಟದ ಅಭಿಯಾನ, ಮೋರ್ಚಾಗಳ ಸಮ್ಮೇಳನ, ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಚುನಾವಣೆ ಎದುರಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆʼʼ ಎಂದು ಹೇಳಿದರು ಬೊಮ್ಮಾಯಿ.

ಜನತಾ ಜನಾರ್ದನ ನಮ್ಮ ಪರ

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಯೋಜನೆಗಳು, ಮೂಲಸೌಕರ್ಯಕ್ಕೆ ನೀಡಿರುವ ಅನುದಾನ, ರಾಜ್ಯ ಸರ್ಕಾರ ಕೈಗೊಂಡಿರುವ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು, ರೈತಾಪಿ ವರ್ಗ, ಮಹಿಳೆಯರು, ಯುವಕರು, ಎಸ್ಸಿ ಎಸ್ಟಿ, ಒಬಿಸಿ ವರ್ಗಕ್ಕೆ, ಸಾಮಾಜಿಕವಾಗಿ, ಆರ್ಥಿಕವಾಗಿ ತೆಗೆದುಕೊಂಡ ತೀರ್ಮಾನಗಳು ಬಿಜೆಪಿಯನ್ನು ಗೆಲ್ಲಿಸಲಿವೆ ಎಂದು ಬೊಮ್ಮಾಯಿ ಹೇಳಿದರು.

ಬಡವರಿಗೆ ನೀಡಿರುವ ಪ್ರೋತ್ಸಾಹ, ಗ್ರಾಮೀಣ ಪ್ರದೇಶಗಳಲ್ಲಿ ನೀಡಿರುವ ಕುಡಿಯುವ ನೀರಿನ ಯೋಜನೆ, ಕೋವಿಡ್ ಸಂದರ್ಭದಲ್ಲಿ 10 ಕೆಜಿ ಅಕ್ಕಿ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯೋಜನೆ, ರೈತ ವಿದ್ಯಾ ನಿಧಿ, ಯೋಜನೆಗಳನ್ನು ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದು ಬಿಜೆಪಿಗೆ ಚುನಾವಣೆಯಲ್ಲಿ ವರವಾಗಲಿದೆ ಎಂದರು.

ಒಳಮೀಸಲಾತಿ ನೀಡಿರುವುದು, ನನೆಗುದಿಗೆ ಬಿದ್ದ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿರುವುದು ಒಬಿಸಿ ಪ್ರವರ್ಗದಲ್ಲಿನ ಯ ಬದಲಾವಣೆ ಜನಮಾನಸದಲ್ಲಿ ಪಕ್ಷ ಹಾಗೂ ಸರ್ಕಾರದ ಪರವಾಗಿ ಒಲವನ್ನು ಹೆಚ್ಚಿಸಿದೆ. ಈ ಬಾರಿ ನಮ್ಮ ಕೆಲಸಗಳ ಆಧಾರದ ಮೇಲೆ ಸಕಾರಾತ್ಮಕ ತೀರ್ಪನ್ನು ಕೇಳುತ್ತಿದ್ದೇವೆ. ಜನರ ಆಶೀರ್ವಾದ ನಮ್ಮ ಪರವಾಗಿದೆ ಎಂದು ಮುಖ್ಯಮಂತ್ರಿ ನುಡಿದರು.

ವಿರೋಧ ಪಕ್ಷಗಳ ಆರೋಪ ಯಶಸ್ವಿಯಾಗಿಲ್ಲ

ʻʻವಿರೋಧ ಪಕ್ಷದವರು ಹಲವಾರು ಆರೋಪಗಳನ್ನು ಮಾಡಿದ್ದು ಅವರು ಮಾಡಿರುವ ಯಾವುದೇ ಆರೋಪ ಯಶಸ್ವಿ ಆಗಿಲ್ಲ. ಜನರು ಇದರ ಬಗ್ಗೆ ಗಮನವನ್ನೇ ನೀಡಿಲ್ಲ. ಭ್ರಷ್ಟಾಚಾರದ ವಿಚಾರ ಸೇರಿದಂತೆ ಎಲ್ಲವೂ ಅವರಿಗೆ ತಿರುಗುಬಾಣವಾಗಿದೆ. ಅವರ ಮೇಲೆಯೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ನಮ್ಮ ಶಾಸಕರ ಮೇಲೆ ದಾಳಿ ಮಾಡಿರುವುದು, ನಾವು ಲೋಕಾಯುಕ್ತವನ್ನು ಬಲಪಡಿಸಿದ್ದರಿಂದ‌ ನ್ಯಾಯಸಮ್ಮತವಾಗಿ ಅಧಿಕಾರ ನೀಡಿದ್ದರಿಂದ ಶಾಸಕರ ವಿರುಧ್ಧ ಪ್ರಕರಣ ದಾಖಲಾಗಿದೆ ಎನ್ನುವುದು ಜನರಿಗೆ ಅರ್ಥವಾಗಿದೆʼʼ ಎಂದು ಹೇಳಿದರು.

ಕಾಂಗ್ರೆಸ್ಸಿನ ಮತ ಬ್ಯಾಂಕ್ ಸಂಪೂರ್ಣ ಛಿದ್ರ

ಬಿಜೆಪಿಯ ಅಭಿವೃದ್ಧಿ ಸಿದ್ಧಾಂತದಿಂದಾಗಿ ಎಲ್ಲರೂ ಅದರ ಕಡೆಗೆ ಬರುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಬ್ಯಾಂಕ್ ಸಂಪೂರ್ಣ ಛಿದ್ರವಾಗಿದೆ. ಹೀಗಾಗಿ ಅವರು ಹತಾಶರಾಗಿ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಅವರ ಕೀಳು ಮಟ್ಟದ ಭಾಷೆಯೇ ಅವರ ಹತಾಶೆಯನ್ನು ತೋರಿಸುತ್ತದೆʼʼ ಎಂದು ಬೊಮ್ಮಾಯಿ ನುಡಿದರು.

ಮೋದಿ, ಶಾ ಭೇಟಿಯಿಂದ ಸಕಾರಾತ್ಮಕ ಪರಿಣಾಮ

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿನ ಕಳೆದ ಮೊಕರು ತಿಂಗಳು ಮಾಡಿರುವ ಪ್ರವಾಸ ಸಕಾರಾತ್ಮಕ ಪರಿಣಾಮ ಬೀರಿದೆ. 2023ರ ಮೇ 13ರಂದು ಸ್ಪಷ್ಟವಾದ ಬಹುಮತ ಭಾರತೀಯ ಜನತಾ ಪಕ್ಷಕ್ಕೆ ಸಿಗಲಿದೆ. ಮತ್ತೆ ನಮ್ಮ ಸರ್ಕಾರ‌ 5 ವರ್ಷ ಆಡಳಿತ ಮಾಡುವುದರಲ್ಲಿ ಸಂಶಯವಿಲ್ಲ ಎಂದರು ಬೊಮ್ಮಾಯಿ.

ಯಾರೂ ವಲಸಿಗರಲ್ಲ, ಎಲ್ಲರೂ ನಮ್ಮವರೇ

ʻʻನಮ್ಮ ಪಕ್ಷದ ಯಾವುದೇ ಶಾಸಕರು ಕಾಂಗ್ರೆಸ್‌ಗೆ ಹೋಗುವುದಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಂದಿರುವ ಯಾರೂ ಯಾರೂ ವಲಸಿಗರಲ್ಲ. ಎಲ್ಲರೂ ನಮ್ಮವರೇ. ಡಿ.ಕೆ ಶಿವಕುಮಾರ್‌ ಅವರು ಕರೆ ಮಾಡಿ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಆದರೆ, ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದ ಬೊಮ್ಮಾಯಿ ಅವರು, ಇನ್ನೇನು ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಇದನ್ನೂ ಓದಿ : Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್‌, ಮುನಿರತ್ನ ಕರೆಸಿಕೊಂಡು ಚರ್ಚೆ

Exit mobile version