Site icon Vistara News

Drought in Karnataka : ಬರಪೀಡಿತ ರಾಜ್ಯದತ್ತ ಕರ್ನಾಟಕ; ಬರ್ಬರ ಬರಕ್ಕೆ ತುತ್ತಾದ 216 ತಾಲೂಕು!

drought and Karnataka map

ಬೆಂಗಳೂರು: ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಬರಕ್ಕೆ ರಾಜ್ಯ (Drought in Karnataka) ತುತ್ತಾಗಿದೆ. ಮಳೆ ಇಲ್ಲದೆ ರೈತರು ಸೇರಿದಂತೆ ನಾಗರಿಕರು ಕಂಗೆಟ್ಟಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೇನು ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಕೇಂದ್ರ ಸರ್ಕಾರದ ಬರ ಮಾನದಂಡಗಳ (Central Government drought criteria) ಅನುಸಾರ ರಾಜ್ಯ ಸರ್ಕಾರ ಬರ ತಾಲೂಕುಗಳ ಪರಿಷ್ಕತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರ ಅನುಸಾರ ರಾಜ್ಯದಲ್ಲೀಗ ಒಟ್ಟು 216 ತಾಲೂಕುಗಳು ಬರ ಪೀಡಿತವಾಗಿವೆ ಎಂದು ಘೋಷಿಸಲ್ಪಟ್ಟಿವೆ. ಈ ಮೂಲಕ ಸಂಪೂರ್ಣ ಬರಪೀಡಿತ ರಾಜ್ಯವಾಗಲಿದೆ ಎಂಬ ಆತಂಕ ಕಾಡಲಾರಂಭಿಸಿದೆ. ಇನ್ನು ಬರದಿಂದ ಬಾಕಿ ಉಳಿದಿರುವುದು ಕೇವಲ 20 ತಾಲೂಕುಗಳು ಮಾತ್ರ!

ಈ 216 ಬರ ತಾಲೂಕುಗಳ ಪೈಕಿ 189 ತಾಲೂಕುಗಳು ತೀವ್ರ ಬರಪೀಡಿತವಾಗಿದ್ದರೆ, 27 ತಾಲೂಕುಗಳು ಸಾಧಾರಣ ಬರ ಪೀಡಿತ ಎಂದು ಘೋಷಿಸಲ್ಪಟ್ಟಿದೆ. ಈ ಮೊದಲು ರಾಜ್ಯ ಸರ್ಕಾರ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿತ್ತು.

ಬರ ಅಧ್ಯಯನ ಬಳಿಕ ಪಟ್ಟಿ ಬಿಡುಗಡೆ

ಜಿಲ್ಲಾಧಿಕಾರಿಗಳಿಂದ ಬೆಳೆ ಸಮೀಕ್ಷೆ ಬಗ್ಗೆ ವರದಿಯನ್ನು ಪಡೆದು ಪರಿಶೀಲಿಸಿ ಮೊದಲು ಸಾಧಾರಣ ಬರ ಪೀಡಿತವೆಂದು ಗುರುತಿಸಲಾದ 34 ತಾಲೂಕುಗಳ ಪೈಕಿ 22 ತಾಲೂಕುಗಳಲ್ಲಿ ಅಧ್ಯಯನ ನಡೆಸಿ ವರದಿಯನ್ನು ಪಡೆಯಲಾಗಿತ್ತು. ಇದರ ಅನುಸಾರ 11 ತಾಲೂಕುಗಳಲ್ಲಿ “ತೀವ್ರ” ಬರ ಹಾಗೂ 11 ತಾಲೂಕುಗಳಲ್ಲಿ “ಸಾಧಾರಣ” ಬರ ಎಂದು ಘೋಷಿಸಲಾಗಿತ್ತು. ಸೆಪ್ಟೆಂಬರ್ ಅಂತ್ಯದವರೆಗಿನ ಅವಧಿಗೆ ಬರ ಪರಿಸ್ಥಿತಿ ಕಂಡು ಬಂದ 21 ತಾಲೂಕುಗಳಲ್ಲಿ ಪೈಕಿ ಅಧ್ಯಯನವನ್ನು ಕೈಗೊಳ್ಳಲಾಯಿತು. ಈ ವರದಿಯನ್ವಯ 17 ತಾಲೂಕುಗಳನ್ನು “ತೀವ್ರ” ಬರಪೀಡಿತ ಎಂದು ಮತ್ತು ಉಳಿದ 4 ತಾಲೂಕು “ಸಾಧಾರಣ” ಬರಪೀಡಿತವೆಂದು ಕಂಡುಬಂದಿದೆ. ಇದರ ಅನುಸಾರ ಈಗ ಒಟ್ಟು 236 ತಾಲೂಕುಗಳ ಪೈಕಿ 189 ತೀವ್ರ ಬರಪೀಡಿತವಾಗಿದ್ದರೆ, 27 ಸಾಧಾರಣ ಬರಪೀಡಿತ ತಾಲೂಕುಗಳಾಗಿವೆ. ಒಟ್ಟು 216 ಬರಪೀಡಿತ ತಾಲೂಕುಗಳೆಂದು ನಿರ್ಣಯಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ಬರಕ್ಕೆ 39.74 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ

ರಾಜ್ಯದಲ್ಲಿ ಭೀಕರ ಬರಗಾಲ ಭಾರಿ ಸಂಕಷ್ಟವನ್ನು ತಂದೊಡ್ಡಿದೆ. ರಾಜ್ಯದಲ್ಲಿ ಆಹಾರ ಕೊರತೆ (Food Scarcity) ಎದುರಾಗಲಿದೆಯೇ ಎಂಬ ಆತಂಕವನ್ನು ತಂದೊಡ್ಡಿದೆ. ಮಳೆ ಪ್ರಮಾಣ ತೀವ್ರ ತರನಾಗಿ ಕುಸಿದ ಬೆನ್ನಲ್ಲೇ ಇಳುವರಿ ಸಹ ಕುಸಿತ ಕಂಡಿದೆ. ಪ್ರಮುಖ ಬೆಳೆಗಳು (Crop loss) ನೆಲ ಕಚ್ಚಿವೆ. ಲಕ್ಷಾಂತರ ಹೆಕ್ಟೇರ್‌ ಬೆಳೆ (Lakhs of hectares of crops destroyed) ನಾಶಕ್ಕೊಳಪಟ್ಟಿವೆ. ಪ್ರಮುಖವಾಗಿ ಭತ್ತ, ತೊಗರಿ, ಜೋಳ, ಶೇಂಗಾ, ಸೂರ್ಯಕಾಂತಿ, ಸೋಯಾಬೀನ್‌, ಕಬ್ಬು, ಹೆಸರು ಬೇಳೆ ಹಾಗೂ ರಾಗಿ ಬೆಳೆಗಳು (Paddy, tur, jowar, groundnut, sunflower, soyabean, sugarcane, moong dal and ragi crops) ಭಾರಿ ಪ್ರಮಾಣದಲ್ಲಿ ನಾಶವಾಗಿವೆ.

ರಾಜ್ಯದಲ್ಲಿ ಮಳೆಯಾಗದೆ ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಟ್ಟು 208 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಬರದ ಹಿನ್ನೆಲೆಯಲ್ಲಿ ನಡೆಸಿದ ಅಧ್ಯಯನದ ಅನುಸಾರ ಬೆಳೆ ನಷ್ಟದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಒಟ್ಟು 39,74,741.34 ಹೆಕ್ಟೇರ್‌ನಷ್ಟು ಫಸಲು ನಷ್ಟವಾಗಿದೆ ಎಂಬ ಆತಂಕಕಾರಿ ಮಾಹಿತಿಯು ಲಭ್ಯವಾಗಿದೆ.

ಭತ್ತ, ರಾಗಿ, ಬೇಳೆಕಾಳು, ಕಡಲೆ ಬೀಜ, ಹತ್ತಿ, ಕಬ್ಬು, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳ ನಷ್ಟದ ಅಂದಾಜು ಪಟ್ಟಿಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Karnataka Weather : ಕೈ ಕೊಟ್ಟ ಮುಂಗಾರು; ಕೈ ಹಿಡಿಯುತ್ತಾ ಹಿಂಗಾರು?

ಬೆಳೆ ನಷ್ಟಕ್ಕೆ ಮಳೆ ಕೊರತೆಯೇ ಕಾರಣ

ಈ ವರ್ಷ ಮುಂಗಾರು ಕೈಕೊಟ್ಟಿದೆ. ಅಲ್ಲದೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಆಗಲಿದೆ. ರಾಜ್ಯದಲ್ಲಿ ಶೇಕಡಾ 28ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಶೇಕಡಾ 73ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಪೆಟ್ಟು‌ ಬಿದ್ದಿದೆ. ಈಗ ಬೆಳೆ ಇಳುವರಿ ನಿರೀಕ್ಷೆ ಮಾಡಲು‌ ಸಾಧ್ಯವಿಲ್ಲ. ಹಸಿರು ಬರ ನಮಗೆ ಬಂದಿದೆ. ರೈತರು ಮತ್ತು ತಜ್ಞರ ಜತೆ ಮಾತನಾಡಿ ಬರ ಅಧ್ಯಯನ ಮಾಡಲಾಗಿದೆ. ಜೋಳ, ತೊಗರಿ, ಶೇಂಗಾ ಎಲ್ಲ ಬೆಳೆ ಹೊಲದಲ್ಲಿ ಕಾಣುತ್ತದೆ. ಆದರೆ, ಇಳುವರಿ ಮಾತ್ರ ಇಲ್ಲ ಎನ್ನುವಂತೆ ಆಗಿದೆ.

Exit mobile version