Site icon Vistara News

Karwar News: ಜಗತ್ತಿನ ಯಾವುದೇ ದೇಶಗಳಿಗೆ ಆಹಾರ ಪೂರೈಸುವಷ್ಟರ ಮಟ್ಟಿಗೆ ಭಾರತ ಬೆಳೆದಿದೆ; ಈ ಏಳ್ಗೆಗೆ ರೈತರ ಶ್ರಮವೇ ಕಾರಣ

Vishweshwar Hegde Kageri karwar

#image_title

ಕಾರವಾರ: “ಸ್ವಾತಂತ್ರ್ಯ ಬಳಿಕ ನಮ್ಮ ಹಿರಿಯರು ಮಾಡಿದ ಪರಿಶ್ರಮದ ಫಲವಾಗಿ 75 ವರ್ಷಗಳಲ್ಲಿ ನಾವು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದೇವೆ. ಈ ಸಂದರ್ಭದಲ್ಲಿ ವಿಶೇಷವಾಗಿ ರೈತರನ್ನು (Farmers) ಅಭಿನಂದಿಸಬೇಕಾಗಿದೆ” ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ಅವರು, “ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಕರ್ನಾಟಕದಲ್ಲಿ ಆರೂವರೆ ಕೋಟಿ ಜನ ಸಂಖ್ಯೆಯಿದ್ದು, ದೇಶದಲ್ಲಿ ಇದು 140 ಕೋಟಿಗೇರಿದೆ. ಆದರೆ ಭಾರತ ಅಂದರೆ ಈ ಹಿಂದೆ ಇತರೆ ದೇಶಗಳು ಇದೊಂದು ಬಡವರ ದೇಶ, ಇಲ್ಲಿ ನಾಗರಿಕ ಜೀವನವೇ ಇಲ್ಲ, ಸೌಲಭ್ಯಗಳೇ ಇಲ್ಲ ಎನ್ನುವ ರೀತಿಯಲ್ಲಿ ನಮ್ಮನ್ನು ಪ್ರತಿಬಿಂಬಿಸುತ್ತಿದ್ದುದನ್ನು ನೋಡಿದ್ದೇವೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನಮಗೆ ಆಹಾರದ ಕೊರತೆ ಎದುರಾಗಿತ್ತು. ಈ ವೇಳೆ ಹೊರ ದೇಶಗಳಿಂದ ಆಹಾರ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಈಗಿನ ದಿನಮಾನದಲ್ಲಿ ಭಾರತ ತನ್ನ ಬಳಕೆಗೆ ಹೊರತುಪಡಿಸಿ ಜಗತ್ತಿನ ಯಾವುದೇ ದೇಶಗಳಿಗೆ ಅಗತ್ಯವಿದ್ದಲ್ಲಿ ಅವರಿಗೂ ಆಹಾರ ಪೂರೈಸುವಷ್ಟರ ಮಟ್ಟಿಗೆ ಸದೃಢವಾಗಿ ಬೆಳೆದಿದೆ. ಇದಕ್ಕೆ ರೈತರ ಪರಿಶ್ರಮವೇ ಕಾರಣ” ಎಂದರು.

“ಜಗತ್ತು ಕೊರೊನಾದಿಂದ ತತ್ತರಿಸಿ ಹೋದಂತಹ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಎದುರಿಸಿರುವ ದೇಶ ನಮ್ಮದು. 30 ಕೋಟಿ ಜನ ಸಂಖ್ಯೆಯಿದ್ದು ಮುಂದುವರಿದ ರಾಷ್ಟ್ರ ಎಂದು ಅಮೆರಿಕಾ ಕರೆಸಿಕೊಳ್ಳುತ್ತದೆ. ಆದರೆ 140 ಕೋಟಿ ಜನ ಸಂಖ್ಯೆ ಇದ್ದು, ಕೊರೋನಾ ಲಾಕ್‌ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ಸಮರ್ಥವಾದ ಆಡಳಿತ ಕೊಟ್ಟು, ನೇತೃತ್ವ ವಹಿಸಿದ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೇ ಕಾರಣ” ಎಂದರು.

ಇದನ್ನೂ ಓದಿ: Weekend With Ramesh: ಮಾರ್ಚ್‌ 25ರಿಂದ ʻವೀಕೆಂಡ್ ವಿತ್ ರಮೇಶ್’; ಮೊದಲ ಗೆಸ್ಟ್‌ ಮೋಹಕ ತಾರೆ ರಮ್ಯಾ?

“ಸೈನಿಕರ ಸಾಧನೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ. ನಮ್ಮ ದೇಶದ ಸೈನಿಕರ ಶೌರ್ಯದ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ, ಚೀನಾದಂತಹ ದೇಶಗಳು ಭಾರತದತ್ತ ತಲೆ ಹಾಕಿ ನಿದ್ರಿಸುವ ಧೈರ್ಯವನ್ನೂ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಪುಲ್ವಾಮಾ, ಏರ್‌ಸ್ಟ್ರೈಕ್‌ ದಾಳಿಗಳನ್ನು ನೋಡಿದಾಗ ಭಾರತದಲ್ಲಿ ಯಾರೇ ಭಯೋತ್ಪಾದಕ ಕೃತ್ಯವನ್ನು ನಡೆಸಿದಲ್ಲಿ ಅದಕ್ಕೆ ಪ್ರತ್ಯುತ್ತರ ನೀಡಲು ನಮ್ಮ ದೇಶದ ಸೈನಿಕರು ಸನ್ನದ್ಧರಾಗಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿವೆ. ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಇಡೀ ದೇಶ ಸಾಕಷ್ಟು ಮುಂದುವರಿದಿದೆ” ಎಂದು ಹೇಳಿದರು.

ಇದನ್ನೂ ಓದಿ: Karnataka Elections : ಈಗಲೂ ಹೇಳುತ್ತೇನೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ; ಈಶ್ವರಪ್ಪ

“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವನ್ನು ಜಗತ್ತು ನೋಡುವ ದೃಷ್ಟಿಕೋನ ಬದಲಾಗಿದ್ದು, ಜಿ20 ದೇಶದ ನೇತೃತ್ವ ವಹಿಸಲು ಭಾರತವನ್ನು ಸೂಚಿಸುವಷ್ಟರ ಮಟ್ಟಿಗೆ ಭಾರತ ಪ್ರಬಲವಾಗಿ ಬೆಳೆದಿದೆ. ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿಯಾದ ಮೇಲೆ ನಮಗೆ ನಾವು ಯಾರು, ನಮ್ಮ ಶಕ್ತಿ, ಸಾಮರ್ಥ್ಯ ಏನು ಎನ್ನುವುದರ ಅರಿವಾಗುತ್ತಿದೆ. ಯಾವ ಕ್ಷೇತ್ರವನ್ನು ತೆಗೆದುಕೊಂಡರೂ ಹೊಸದಾದ ದಾಖಲೆಯನ್ನು ಬರೆಯುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಹಾಕುತ್ತಿದೆ. ಗುಡ್ಡಗಾಡಿನಲ್ಲಿ ಜೀವನ ನಡೆಸುತ್ತಿದ್ದಂತಹ ಮಹಿಳೆ ದ್ರೌಪದಿ ಮುರ್ಮು ದೇಶದ ರಾಷ್ಟ್ರಪತಿಯಾಗಿದ್ದಾರೆ. ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಒಬ್ಬ ಯುವಕ ದೇಶದ ಪ್ರಧಾನಿಯಾಗುತ್ತಾನೆ ಎಂದರೆ ನಮ್ಮ ದೇಶದ ಸಂಸದೀಯ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಡಲು ಸಾಧ್ಯವಾಗಿದೆ” ಎಂದರು.

ಇದನ್ನೂ ಓದಿ: Rain Alert: ಮುಂದಿನ 3 ದಿನ ದೇಶಾದ್ಯಂತ ಭಾರಿ ಮಳೆ, ಈಗಾಗಲೇ 10 ಜನ ಸಾವು, ಕಟಾವು ಬೇಡ ಎಂದ ಹವಾಮಾನ ಇಲಾಖೆ

Exit mobile version