Site icon Vistara News

Keruru case | ಅರುಣ್‌ ಕಟ್ಟಿಮನಿ ಯಾವ ಸೀಮೆ ದೊಣ್ಣೆ ನಾಯಕ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಿಡಿ

ವಿಜಯಾನಂದ ಕಾಶಪ್ಪನವರ

ಬಾಗಲಕೋಟೆ: ಕೆರೂರು ಗುಂಪು ಘರ್ಷಣೆಯ (Keruru case) ಗಾಯಾಳು ಅರುಣ್‌ ಕಟ್ಟಿಮನಿ ವಿರುದ್ಧ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹರಿಹಾಯ್ದಿದ್ದು, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಆಸ್ಪತ್ರೆಗೆ ನೋಡಲು ಬಂದರೆ ಬರುವುದು ಬೇಡ ಎನ್ನುವ ಅವನು ಯಾವ ಸೀಮೆ ದೊಣ್ಣೆ ನಾಯಕ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ವಿಚಾರಿಸಲು ಬಂದಾಗ ಅದನ್ನು ವಿರೋಧಿಸುವುದು ಸರಿಯಲ್ಲ ಎಂದು ಕಾಶಪ್ಪನವರ್‌ ಸುದ್ದಿಗಾರರ ಬಳಿ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆಗೆ ಆಗಮಿಸಿ ಹಣ ಸಹಾಯ ಮಾಡಿದಾಗ ಅಲ್ಪಸಂಖ್ಯಾತ ಮಹಿಳೆಯೊಬ್ಬರು ಆ ಹಣವನ್ನು ಅವರ ಕಾರಿಗೆ ಎಸೆದು ಅವಮಾನಿಸಿದರು. ಈ ಸಂಬಂಧ ಶನಿವಾರ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೀಡಿರುವ ಹೇಳಿಕೆ ಹೊಸ ಟ್ವಿಸ್ಟ್‌ ನೀಡಿದೆ.

ಹಣ ಎಸೆದಿದ್ದವರ ಹಿಂದೆ ಎಸ್‌ಡಿಪಿಐ ಕೈವಾಡ

ಹಣ ಎಸೆದ ಮಹಿಳೆಯರ ಹಿಂದೆ ಎಸ್‌ಡಿಪಿಐ ಸಂಘಟನೆ ಇದ್ದು, ಹಣ ಎಸೆಯಲು ಪ್ರೇರೇಪಿಸಿದ್ದನ್ನು ನೋಡಿರುವುದಾಗಿ ಕಾಶಪ್ಪನವರ ಹೇಳಿದ್ದಾರೆ. ಆ ಮಹಿಳೆಯರು ಸಿದ್ದರಾಮಯ್ಯ ಅವರ ಬಳಿ ನಿಂತು ನೋವು ಹೇಳಿಕೊಳ್ಳುತ್ತಿದ್ದರು, ಕೊಟ್ಟ ಹಣವನ್ನು ಸ್ವೀಕರಿಸಿದರು. ಆದರೆ, ಅಲ್ಲೇ ಇದ್ದ ಎಸ್‌ಡಿಪಿಐ ಸಂಘಟನೆಯ ಮುಖಂಡ ಹಣ ಎಸೆಯುವಂತೆ ಹೇಳಿದ್ದೇ ಈ ಎಲ್ಲ ಗೊಂದಲಗಳಿಗೆ ಕಾರಣ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Keruru Case | ಕಾರಿಗೆ ಹಣ ಎಸೆದವರಿಗೆ ಮತ್ತೆ ದುಡ್ಡು ಕೊಟ್ಟು ಬಂದೆ ಅಂದ್ರು ಮಾಜಿ ಸಿಎಂ ಸಿದ್ದರಾಮಯ್ಯ

ಕಾಣದ ಕೈಗಳ ಕುತಂತ್ರವಿದು- ಯು.ಟಿ.ಖಾದರ್‌

ಬಾಗಲಕೋಟೆಯಲ್ಲಿ ನಡೆದ ಪ್ರಕರಣದಿಂದ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ, ಗೌರವಕ್ಕೆ ಕುಂದು ಉಂಟಾಗುವುದಿಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ. ಸದನದ ಒಳಗಡೆ ಮತ್ತು ಹೊರಗಡೆ ರಾಜ್ಯದ ಜನರಿಗೆ ಅನ್ಯಾಯವಾದಾಗ ಎಲ್ಲ ವರ್ಗದ ಜನರಿಗಾಗಿ ಧ್ವನಿ ಎತ್ತುವ ವ್ಯಕ್ತಿತ್ವ ಸಿದ್ದರಾಮಯ್ಯ ಅವರದ್ದು ಎಂದು ಹೇಳಿದ್ದಾರೆ.

ಮಾನವೀಯತೆ ದೃಷ್ಟಿಯಿಂದ ವೈಯಕ್ತಿಕವಾಗಿ ಸಹಾಯ ಮಾಡಲು ಹೋದಾಗ, ಕೆಲವರ ಕುಮ್ಮಕ್ಕಿನಿಂದ ಮಹಿಳೆಯರು ಹಣವನ್ನು ತಿರಸ್ಕರಿಸಿದ್ದಾರೆ. ನಂತರ ಮನ ಬದಲಾಯಿಸಿ ಹಣವನ್ನು ಸ್ವೀಕರಿಸಿದ್ದಾರೆ‌. ಈ ರೀತಿ ಮಾಡುವುದು ಮತೀಯವಾದಿಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ‌‌. ಈಗ ನಡೆದಿರುವ ಘಟನೆಗೆ ಕಾಣದ ಕೈಗಳ ಕುತಂತ್ರವಿದೆ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | ಕೆರೂರು ಘರ್ಷಣೆ ಖಂಡಿಸಿ ಪ್ರತಿಭಟಿಸದವರಿಗೆ ಬಂತು ಜೀವ ಬೆದರಿಕೆ ಕರೆ

Exit mobile version