Site icon Vistara News

Killer BMTC : ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್‌!

Veena dead

ಬೆಂಗಳೂರು: ಬಿಎಂಟಿಸಿ ಬಸ್‌ (Killer BMTC) ಹರಿದು ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯ ಅರಕೆರೆಯ ಶ್ರೀ ಸಾಯಿ ಗಾರ್ಮೆಂಟ್ಸ್ ಬಳಿ (Road Accident) ನಡೆದಿದೆ. ವೀಣಾ ಬಿಎಂಟಿಸಿ ಬಸ್‌ಗೆ ಬಲಿಯಾದ ಮಹಿಳೆ.

ವೀಣಾ ಅವರು ರಸ್ತೆ ದಾಟುವಾಗ ವೇಗವಾಗಿ ಬಂದ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯತನ ಹಾಗು ಅತಿ ವೇಗದ ಚಾಲನೆ ಮಾಡಿದ ಚಾಲಕ ಲೂರ್ದು ಸ್ವಾಮಿ ಎಂಬಾತನನ್ನ ಹುಳಿಮಾವು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೊರಟಿದ್ದ ಕಾರು ತುಮಕೂರಿನಲ್ಲಿ ಕೆರೆಗೆ ಬಿದ್ದು ಒಂದೇ ಕುಟುಂಬದ ಮೂವರ ಸಾವು

ಪತ್ನಿ ಸೀಮಂತಕ್ಕೆ ಹೂ ತರಲು ಹೋದವನ ಬಲಿ ಪಡೆದ ಬಿಎಂಟಿಸಿ!

ಬೆಂಗಳೂರು: ಆ ಕುಟುಂಬ ಹೊಸ ಅತಿಥಿಯ ನಿರೀಕ್ಷೆಯಲ್ಲಿತ್ತು. ಸಂಭ್ರಮದ ವಾತಾವರಣವಿದ್ದ ಆ ಮನೆ ಇದೀಗ ಸೂತಕದ ಮನೆಯಾಗಿದೆ. ಪತ್ನಿ ಸೀಮಂತಕ್ಕೆಂದು ಹೂ ಖರೀದಿ ಮಾಡಿ ಮನೆಗೆ ತೆರಳುತ್ತಿದ್ದಾಗ ಯಮ ಸ್ವರೂಪಿಯಾಗಿ ಬಂದ ಬಿಎಂಟಿಸಿ ಬಸ್‌ ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ (Killer BMTC) ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ವಿಜಯನಗರ ವಾಟರ್ ಟ್ಯಾಂಕ್ ಬಳಿ ನಡೆದಿದೆ.

ಅನ್ನಪೂರ್ಣೇಶ್ವರಿ ನಗರದ ನಿವಾಸಿ ಕುಮಾರ್ ಮೃತ ದುರ್ದೈವಿ. ಭಾನುವಾರ ಬೆಳಗ್ಗೆ 7:30ರ ಸುಮಾರಿಗೆ ಪತ್ನಿಯ ಸೀಮಂತ ಇದ್ದ ಕಾರಣ ಹೂ ತರಲು ಬಂದಿದ್ದರು. ಈ ವೇಳೆ ಬಿಎಂಟಿಸಿ ಬಸ್ ಓವರ್ ಟೇಕ್ ಮಾಡುವಾಗ ಕುಮಾರ್‌ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು ತೀವ್ರ ರಕ್ತಸ್ರಾವವಾಗಿದೆ.

ಕೂಡಲೇ ಸ್ಥಳೀಯರು ಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್‌ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತ ದುರ್ದೈವಿ ಕುಮಾರ್‌

ಸದ್ಯ ಕುಮಾರ್ ಮೃತದೇಹವು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಚಾಲಕನ ನಿರ್ಲಕ್ಷ್ಯದಿಂದ ಇನ್ನು ಜಗತ್ತು ನೋಡದ ಮಗು ತಂದೆಯನ್ನು ಕಳೆದುಕೊಂಡಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸೀಮಂತ ಕಾರ್ಯ ಹಿನ್ನೆಲೆಯಲ್ಲಿ ಇಂದು ಎಲ್ಲಾ ಸಿದ್ಧತೆ ನಡೆದಿತ್ತು. ಮೃತ ಕುಮಾರ್‌ ಪತ್ನಿಗೆ ಸ್ಕೂಟರ್‌ ಆಕ್ಸಿಡೆಂಟ್ ಆಗಿದೆ ಎಂದಷ್ಟೇ ವಿಚಾರ ತಿಳಿಸಿದ್ದೇವೆ. ಕುಮಾರ್‌ ಇನ್ನಿಲ್ಲ ಎಂಬ ವಿಷಯವನ್ನು ಮಗಳಿಗೆ ಹೇಗೆ ಮುಟ್ಟಿಸಲಿ ಎಂದು ಮೃತ ಕುಮಾರ್‌ ಮಾವ ರಾಜಣ್ಣ ಕಣ್ಣೀರು ಹಾಕುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version