Site icon Vistara News

ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ, ಇಬ್ಬರು ದಾರುಣ ಮೃತ್ಯು

Koppal

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗುರುವಾರ ಮುಂಜಾನೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಯಕಪ್ಪ ಶ್ಯಾಮಪ್ಪ ತಳವಾರ (60) ಹಾಗೂ ಭಾಷಾಸಾಬ (22) ಮೃತರು. ಈ ನಡುವೆ, ಧರ್ಮಣ್ಣ ಹರಿಜನ ಎಂಬ ಯುವಕ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಯುವಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಇದೀಗ ಈ ಪ್ರಕರಣ ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಎರಡು ಗುಂಪುಗಳ ಮಧ್ಯೆ ಮುಂಜಾನೆಯೇ ಈ ಹೊಡೆದಾಟ ನಡೆದಿದೆ. ಎರಡು ಗುಂಪುಗಳು ಕತ್ತಿ, ದೊಣ್ಣೆ ಹಿಡಿದುಕೊಂಡು ಬಡಿದಾಡಿದಂತೆ ಕಾಣುತ್ತಿದೆ. ಮೃತರಿಬ್ಬರು ತಲೆಗೆ ಏಟು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುವಿನ ತಲೆಗೂ ಗಾಯಗಳಾಗಿವೆ. ದೇಹ ಮತ್ತು ಮುಖದ ಮೇಲೆ ಕತ್ತಿಯಿಂದ ಹೊಡೆದಂತೆ ಗಾಯಗಳು ಕಾಣಿಸುತ್ತಿವೆ.

ಗಾಯಾಳು ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಶವಗಳನ್ನೂ ಆಸ್ಪತ್ರೆಗೆ ತರಲಾಗಿದೆ. ಗಂಗಾವತಿಯ ಸರಕಾರಿ ಆಸ್ಪತ್ರೆಯಲ್ಲಿ ಬಂಧುಗಳ ರೋದನ ಮುಗಿಲು ಮುಟ್ಟಿದೆ. ಇದೊಂದು ಕ್ಷುಲ್ಲಕ ಕಾರಣಕ್ಕಾಗಿ ಆರಂಭಗೊಂಡ ಜಗಳ ವಿಪರೀತಕ್ಕೇರಿ ಸಾವಿನಲ್ಲಿ ಅಂತ್ಯಗೊಂಡ ಪ್ರಕರಣ ಎಂದು ಹೇಳಲಾಗಿದೆ. ಆದರೆ, ನಿಜವಾದ ಕಾರಣ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

Exit mobile version