Site icon Vistara News

ರೈತನ ಲಕ್ಷಾಂತರ ರೂಪಾಯಿ ಕದ್ದಿದ್ದ ಕಳ್ಳ; 20 ಸಾವಿರ ರೂ. ಖರ್ಚು ಮಾಡಿ, ಉಳಿದ ಹಣ ವಾಪಸ್ ಕೊಟ್ಟ

Theft Case

ಕೊಪ್ಪಳದಲ್ಲಿ ರೈತನೊಬ್ಬನ ಜೇಬು ಕತ್ತರಿಸಿ ಹಣ ಕದ್ದಿದವನನ್ನು (Theft Case) ಪೊಲೀಸರು ಬಂಧಿಸಿದ್ದಾರೆ. ಅನಿಲ್​ ಕಂಜರಬಾಟ್​ ಬಂಧಿತನಾಗಿದ್ದು, ಈತ ಹುಬ್ಬಳ್ಳಿಯವನು. ಜುಲೈ 7ರಂದು ಹನಕುಂಟಿಯ ಸಿದ್ದಯ್ಯ ಸಾರಂಗಮಠ ಎಂಬ ರೈತನ ಜೇಬಿನಲ್ಲಿದ್ದ 1.60 ಲಕ್ಷ ರೂಪಾಯಿಯನ್ನು ಈತ ಎಗರಿಸಿದ್ದ. ಕಳ್ಳ ಸಿಕ್ಕರೂ ರೈತನ ಪೂರ್ತಿ ಹಣ ಸಿಗಲಿಲ್ಲ.

ಜು.7ರಂದು ಕಳ್ಳತನ ಮಾಡಿದ ಬಳಿಕ ಅನಿಲ್​ ಹುಬ್ಬಳ್ಳಿಗೆ ಹೋಗಿದ್ದ. ಇತ್ತೀಚೆಗೆ ಮತ್ತೆ ಕೊಪ್ಪಳಕ್ಕೆ ಆಗಮಿಸಿದ್ದ. ನಗರ ಠಾಣೆಯಲ್ಲಿ ಈ ಕೇಸ್ ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಹೆಚ್ಚಿನ ನಿಗಾ ವಹಿಸಿದ್ದರು. ಅನಿಲ್​ ಕಂಜರಬಾಟ್​ನನ್ನು ಬಸ್​ ಸ್ಟ್ಯಾಂಡ್​ನಲ್ಲಿ ನೋಡಿದ ಪೊಲೀಸರು ಅನುಮಾನ ಬಂದು ಅವನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆತ ಹಣ ಕದ್ದಿದ್ದನ್ನು ಒಪ್ಪಿಕೊಂಡಿದ್ದ. ಕದ್ದ 1.60 ಲಕ್ಷ ರೂಪಾಯಿಯಲ್ಲಿ, 20 ಸಾವಿರ ರೂ.ನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದೇನೆ ಎಂದು ಹೇಳಿ, ಉಳಿದ 1.40ಲಕ್ಷ ರೂ.ನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.

ಇದನ್ನೂ ಓದಿ: ಎಟಿಎಂನಿಂದ 24 ಲಕ್ಷ ರೂ. ದೋಚಿದ್ದ ಗ್ಯಾಂಗ್​ ಅರೆಸ್ಟ್​; ಹಣ ಹಾಕಿದ್ದವನೇ ಕಳ್ಳರ ಲೀಡರ್​!

ಪೊಲೀಸರಂತೆ ಬಂದು ಚಿನ್ನ ದೋಚಿದ ದುಷ್ಕರ್ಮಿಗಳು

ಕಲಬುರಗಿ: ಪೊಲೀಸರಂತೆ ಬಂದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇಲ್ಲಿನ ಚಿಂಚೋಳಿ ತಾಲೂಕಿನ ಸುಲೇಪೇಟ್​ ಬಳಿಯ ರಾಯಚೂರು-ವನ್ಮಾರಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಪಂಚನಪಳ್ಳಿ ಗ್ರಾಮದ ಚಂದ್ರಶೇಖರ್ ಅವರ ಬಳಿಯಿದ್ದ 12 ಗ್ರಾಂ ಚಿನ್ನದ ಉಂಗುರ, 6 ಗ್ರಾಂ. ತೂಕದ ಹರಳಿನ ಉಂಗುರವನ್ನು ಕಸಿದು ಪರಾರಿಯಾಗಿದ್ದಾರೆ. ಚಂದ್ರಶೇಖರ್​ ಅವರು ಪೇಪರ್​ ತರಲೆಂದು ಇದೇ ಮಾರ್ಗದಲ್ಲಿ ಬೈಕ್​​ನಲ್ಲಿ ಹೋಗುತ್ತಿದ್ದರು. ಈ ವೇಳೆ ಕಳ್ಳರೂ ಕೂಡ ಬೈಕ್​ನಲ್ಲಿ ಬಂದಿದ್ದಾರೆ. ತಮ್ಮನ್ನು ತಾವು ಪೊಲೀಸ್​ ಅಧಿಕಾರಿಗಳು, ಬೈಕ್ ತಪಾಸಣೆ ಮಾಡಬೇಕು ಎಂದು ಹೇಳಿಕೊಂಡು ಚಂದ್ರಶೇಖರ್ ಬೈಕ್ ನಿಲ್ಲಿಸಿದ್ದಾರೆ. ಆಗ ಚಾಕು ತೋರಿಸಿ ಚಿನ್ನ ಪಡೆದು ಹೋಗಿದ್ದಾರೆ.

Exit mobile version