Site icon Vistara News

Leaf spot Disease : ವಿಸ್ತಾರ ನ್ಯೂಸ್‌ ಇಂಪ್ಯಾಕ್ಟ್;‌ ಅಡಿಕೆ ಎಲೆ ಚುಕ್ಕಿ ರೋಗ ಸಂಶೋಧನೆಗೆ 43 ಲಕ್ಷ ರೂ. ಬಿಡುಗಡೆ

adike samshodhana kendra

ಬೆಂಗಳೂರು: ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗದ (Leaf spot Disease) ಕುರಿತು ʻವಿಸ್ತಾರ ನ್ಯೂಸ್‌ʼ ನಡೆಸಿದ್ದ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನದಿಂದ ಕೊನೆಗೂ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ (Congress Government) ಈ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ಹಣಕಾಸಿನ ನೆರವು ನೀಡಿದೆ.

ಮೊದಲ ಹಂತವಾಗಿ ಶಿವಮೊಗ್ಗ ತೋಟಗಾರಿಕಾ ವಿವಿಗೆ (Shimoga Horticulture University) ಸಂಶೋಧನೆಯ ಉದ್ದೇಶಕ್ಕಾಗಿಯೇ 43.61 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ವಿಸ್ತಾರ ನ್ಯೂಸ್‌ನ ವರದಿಯ ಇಂಪ್ಯಾಕ್ಟ್‌ (Vistara News Impact) ಇದಾಗಿದ್ದು, ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.

ರಾಜ್ಯದ 7 ಜಿಲ್ಲೆಗಳಲ್ಲಿನ 53,977.04 ಹೆಕ್ಟೇರ್‌ಗೂ ಹೆಚ್ಚಿನ ಅಡಿಕೆ ತೋಟಗಳು ಎಲೆಚುಕ್ಕಿ ರೋಗದಿಂದ ನಾಶವಾಗುವ ಹಂತ ತಲುಪಿವೆ. ಇದರ ನಿಯಂತ್ರಣಕ್ಕೆ ನಿರ್ದಿಷ್ಟವಾದ ಔಷಧ ಇಲ್ಲದಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿ ಈ ರೋಗದ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶೇ.74 ಅಡಿಕೆ ತೋಟ ನಾಶವಾಗಿದೆ.

ಈ ರೋಗದ ನಿಯಂತ್ರಣಕ್ಕೆ ಔಷಧಿಯನ್ನು ಕಂಡು ಹಿಡಿಯಬೇಕೆಂಬ ಉದ್ದೇಶದಿಂದ ಶೃಂಗೇರಿ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗಿದೆಯಾದರೂ, ಇವುಗಳಿಗೆ ವಿಜ್ಞಾನಿಗಳನ್ನು ನಿಯೋಜಿಸಲಾಗಿರಲಿಲ್ಲ. ಅಲ್ಲದೆ, ಅಗತ್ಯ ಹಣಕಾಸಿನ ನೆರವೂ ನೀಡಲಾಗಿರಲಿಲ್ಲ. ಹೀಗಾಗಿ ಈ ಸಂಶೋಧನಾ ಕೇಂದ್ರಗಳು ಇದ್ದೂ ಇಲ್ಲದಂತಾಗಿದ್ದವು. ಈ ಕುರಿತು ಮಲೆನಾಡು ಪ್ರಾಂತ ಅಡಿಕೆ ಬೆಳೆಗಾರರ ಸಂಘ ಹಲವು ಬಾರಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿತ್ತು. ಆದರೂ ಪ್ರಯೋಜನವಾಗಿರಲಿಲ್ಲ.

ಭರವಸೆ ನೀಡಿದ್ದ ತೋಟಗಾರಿಕಾ ಸಚಿವ

ಈ ವರ್ಷ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದರು. ಎಲೆಚುಕ್ಕಿ ರೋಗದಿಂದ ತೋಟ ನಾಶವಾಗಿದ್ದರಿಂದ ಮುಂದೇನು ಮಾಡಬೇಕೆಂದು ತೋಚದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶೃಂಗೇರಿ ತಾಲೂಕಿನಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಊರು ತೊರೆದಿದ್ದರು. ಈ ಬಗ್ಗೆ ʻವಿಸ್ತಾರ ನ್ಯೂಸ್‌ʼ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನ ನಡೆಸಿ, ಸಮಗ್ರ ವರದಿ ಪ್ರಸಾರ ಮಾಡಿತ್ತು.
ಈ ಅಭಿಯಾನದ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದ ರಾಜ್ಯದ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್‌ ಎಲೆಚುಕ್ಕೆ ರೋಗದ (Leaf spot Disease) ಮೂಲದ ಬಗ್ಗೆ ಉನ್ನತ ಸಂಶೋಧನೆ ನಡೆಸಲಾಗುವುದು ಮತ್ತು ಬೆಳೆಗಾರರಿಗೆ ಈ ರೋಗ ತಡೆಗೆ ಉಚಿತ ಔಷಧ (Free Medicine) ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.

ಎಲೆ ಚುಕ್ಕೆ ರೋಗ ಮಲೆನಾಡು, ಅರೆಮಲೆನಾಡು, ಕಾರವಾರ, ಮಂಗಳೂರು ಭಾಗದಲ್ಲಿ ಜಾಸ್ತಿ ಕಾಣಿಸಿಕೊಂಡಿದೆ. ಇದರ ಬಗ್ಗೆ ಉನ್ನತ ಸಂಶೋಧನೆ ನಡೆಯಬೇಕಾಗಿದೆ. ಹಿಂದಿನ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಸ್ಪಂದಿಸಿದೆ. ನಮ್ಮಲ್ಲೇ ಸಂಶೋಧನೆ ಮಾಡಿ ಸೂಕ್ತವಾದ ಔಷಧ ತಯಾರಿ‌ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಅನುದಾನ ನೀಡುತ್ತೇವೆ ಎಂದು ಸಚಿವ ಮಲ್ಲಿಕಾರ್ಜುನ್‌ ವಿವರಿಸಿದ್ದರು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಈ ಬಗ್ಗೆ ಗಮನ ನೀಡುವ ಭರವಸೆ ನೀಡಿದ್ದರು.

ಇದನ್ನೂ ಓದಿ: Karnataka Drought : ಬಿಜೆಪಿಯದ್ದು ರಾಜಕಾರಣದ ಬರ ಅಧ್ಯಯನ; ಕೇಂದ್ರದಿಂದ ಅನುದಾನ ಕೊಡಿಸಲಿ: ಸಿದ್ದರಾಮಯ್ಯ

ಮೊದಲ ಹಂತದ ಹಣ ಬಿಡುಗಡೆ

ವಿಸ್ತಾರದ ಅಭಿಯಾನದ ಫಲವಾಗಿ ಈಗ ಸಂಶೋಧನೆಗೆ 43.61 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ನಿರ್ದಿಷ್ಟ ಫಲಾನುಧಾರಿತ ಸಂಶೋಧನೆಗೆ ಹಣ ಬಳಸಲು ಸೂಚನೆ ನೀಡಲಾಗಿದೆ. ಇದು ಮೊದಲ ಹಂತದ ಮೊತ್ತವಾಗಿದ್ದು,, ಅಗತ್ಯ ಬಿದ್ದರೆ ಮತ್ತೆ ನೀಡಲಾಗುತ್ತದೆ ಎಂದ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ʻವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದಾರೆ. ಇದರಿಂದಾಗಿ ಸ್ಥಗಿತಗೊಂಡಿದ್ದ ಸಂಶೋಧನೆಗೆ ಮತ್ತೆ ಚಾಲನೆ ದೊರೆಯುವ ನಿರೀಕ್ಷೆ ಇದೆ.

Exit mobile version