Site icon Vistara News

Lok Adalat‌ : ಅಕ್ಕ-ತಂಗಿಯನ್ನು ಬಿಟ್ಟ ಅಣ್ಣ-ತಮ್ಮ; ವಿಚ್ಛೇದನದ ಬದಲು ನ್ಯಾಯಾಲದ ಸಂಧಾನ

lok adalat divorce case

ವಿಜಯನಗರ: ವಿಚ್ಛೇದನ ಬೇಕೆಂದು (Divorce case) ಸತತ 6 ವರ್ಷಗಳ ಕಾಲ ಕೋರ್ಟ್‌ಗೆ ಓಡಾಡಿದ ದಂಪತಿಯನ್ನು ಅದೇ ಕೋರ್ಟ್‌ (lok adalat) ಒಂದು ಮಾಡಿದ ಅಪರೂಪದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಕುಟುಂಬಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ದಾಂಪತ್ಯದಲ್ಲಿ ಬಿರುಕು ಬಂದು ನಮಗೆ ವಿಚ್ಛೇದನ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದ ಒಂದೇ ಮನೆಯ ಎರಡು ಜೋಡಿಯನ್ನು ಒಂದು ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಜಾತಪ್ಪ ಕೋಗಳಿ ಮತ್ತು ಕೊಟ್ರಮ್ಮ ದಂಪತಿಯ ಇಬ್ಬರು ಪುತ್ರಿಯರಾದ ಅಶ್ವಿನಿ ಮತ್ತು ನಂದಿನಿ ಎಂಬುವವರನ್ನು, ಹುಬ್ಬಳ್ಳಿ ಮೂಲದ ಸಿದ್ದಬಸಪ್ಪ ಕೆರೂರು- ಕಮಲಾಪಕ್ಷಮ್ಮ ದಂಪತಿಯ ಮಕ್ಕಳಾದ ಶ್ರೀಧರ್ ಕೆರೂರ್, ಶಶಿಧರ್ ಕೆರೂರ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ದೂರಾಗಲು ಬಂದವರು ಒಂದಾದ ಜೋಡಿಗಳು

ಇದನ್ನೂ ಓದಿ: 15 ದಂಪತಿಗಳಿಗೆ ಡಿವೋರ್ಸ್​ ಕೊಡದ ರಾಯಚೂರು ಜಿಲ್ಲಾ ನ್ಯಾಯಾಲಯ; ‘ಜತೆಗೇ ಬದುಕಿ’ ಎಂದ ನ್ಯಾಯಾಧೀಶರು

ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳನ್ನು ಮತ್ತೊಂದು ಕುಟುಂಬದ ಇಬ್ಬರು ಸಹೋದರರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ದಾಂಪತ್ಯದಲ್ಲಿ ಕಲಹ ಏರ್ಪಟ್ಟು, ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಸತತ 6 ವರ್ಷಗಳ ಬಳಿಕ ಅದೇ ನ್ಯಾಯಾಲಯ ಎರಡು ಜೋಡಿಯನ್ನು ಮನಸ್ಸು ಬದಲಾಯಿಸಿ, ಒಂದು ಮಾಡಿದೆ.

ಸತತ ಆರು ವರ್ಷಗಳ ಕಾಲ ದೂರವಾಗಿದ್ದ ಅಶ್ವಿನಿ ಹಾಗೂ ಶ್ರೀಧರ್ ಕೆರೂರ್, ನಂದಿನಿ ಹಾಗೂ ಶಶಿಧರ್ ಕೆರೂರ್ ಮತ್ತೆ ಒಂದಾಗಿದ್ದಾರೆ. ಈ ಜೋಡಿಗಳನ್ನು ಒಂದು ಮಾಡಿದ ಕೀರ್ತಿ ಹೊಸಪೇಟೆಯ ನ್ಯಾಯಾಧೀಶರು, ನ್ಯಾಯವಾದಿಗಳು, ಎಪಿಪಿಗಳಿಗೆ ಸಲ್ಲುತ್ತದೆ. ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿಗಳಾದ ಅಶ್ವಿನಿ ಶ್ರೀಧರ್ ಕೆರೂರ್ ಅವರ ಪುತ್ರ ರೋಹಿತ್, ನಂದಿನಿ- ಶಶಿಧರ್ ಕೆರೂರ್ ಅವರ ಪುತ್ರ ರವಿ ತೇಜಸ್ ಖುಷಿಯಿಂದ ತಂದೆ- ತಾಯಿ ಜತೆ ಮನೆಗೆ ತೆರಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version