Site icon Vistara News

ಗುವಾಹಟಿಯಲ್ಲಿ ಸೆ.22ರಿಂದ ಲೋಕ ಮಂಥನ 3ನೇ ಆವೃತ್ತಿ ಸಮಾವೇಶ

ಮಂಥನ

ಬೆಂಗಳೂರು: ಲೋಕ ಮಂಥನ 3ನೇ ಆವೃತ್ತಿಯು ರಾಷ್ಟ್ರ ಮೊದಲು ಎಂಬ ಚಿಂತನೆಯುಳ್ಳ ಚಿಂತಕರ, ಕಾರ್ಯಪ್ರವೃತ್ತರ ಸಮಾವೇಶವನ್ನು ಪ್ರಜ್ಞಾ ಪ್ರವಾಹ ಹಾಗೂ ಇನ್ನಿತರ ಸಮಾನ ಮನಸ್ಕ ವೈಚಾರಿಕ ಸಂಘಟನೆಗಳಾದ ಸಂಸ್ಕಾರ ಭಾರತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ವಿಜ್ಞಾನ ಭಾರತಿ, ಇತಿಹಾಸ ಸಂಕಲನ ಸಮಿತಿ, ವನವಾಸಿ ಕಲ್ಯಾಣ ಆಶ್ರಮಗಳ ಸಹಯೋಗದೊಂದಿಗೆ ಅಸ್ಸಾಂನ ಗುವಾಹಟಿಯಲ್ಲಿ ಸೆಪ್ಟೆಂಬರ್ 22 ರಿಂದ 24ರವರೆಗೆ ಆಯೋಜಿಸಲಾಗಿದೆ.

ಇಂಟಲೆಕ್ಚುವಲ್ ಫೋರಮ್ ಆಫ್ ನಾರ್ತ್ ಈಸ್ಟ್ (IFNE) ಕಾರ್ಯಕ್ರಮದ ಸ್ಥಳೀಯ ಆಯೋಜಕರಾಗಿದ್ದು, ಅಸ್ಸಾಂನ ಪ್ರವಾಸೋದ್ಯಮ ಇಲಾಖೆಯು ಇದಕ್ಕೆ ಸಹಕಾರ ನೀಡುತ್ತಿದೆ. ಸಮಾವೇಶದಲ್ಲಿ “ಲೋಕಪರಂಪರೆ” ಕುರಿತಾಗಿ ಚರ್ಚೆ ನಡೆಯಲಿದ್ದು, ಸಮಾವೇಶದಲ್ಲಿ ಹೇಗೆ ಲೋಕಪರಂಪರೆ ನಮ್ಮ ಜಾನಪದ ಸಂಸ್ಕೃತಿಯನ್ನು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ರಾಷ್ಟ್ರೀಯತೆಯನ್ನು ಮತ್ತು ಸ್ವತ್ವವನ್ನು ಬೆಳೆಸುತ್ತ ಬಂದಿದೆ ಎಂಬುವುದರ ಕುರಿತು ವಿಸ್ತಾರವಾಗಿ ಚರ್ಚೆ ನಡೆಯಲಿದೆ.

ಇದನ್ನೂ ಓದಿ | Shivamogga terror | ಗುರುಪುರ ಹೊಳೆ ಬದಿಯಲ್ಲಿ ಬಾಂಬ್‌ ತಯಾರಿಸುತ್ತಿದ್ದರು, ಮಂಗಳೂರಲ್ಲೂ ಮಹಜರು

ಉಪರಾಷ್ಟ್ರಪತಿ ಜಗದೀಪ್ ಧನ‌ಕರ್ ಅವರು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರು ಉಪಸ್ಥಿತರಿರಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ತ್ರೇಯ ಹೊಸಬಾಳೆ ಅವರು ಭಾಗವಹಿಸಿ ಮಾತನಾಡಲಿದ್ದಾರೆ.

ವಿಚಾರವಂತರು, ಪ್ರಮುಖ ಕಲಾವಿದರು, ಅಕಾಡೆಮಿಯನ್‌ಗಳು ವಿವಿಧ ಸಭೆಗಳಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಲೋಕಮಂಥನವು ದೇಶದ ವಿವಿಧ ಭಾಗದಿಂದ ಆಗಮಿಸಿದ ಕಲಾವಿದರು, ವಿಚಾರವಂತರು ಮತ್ತು ಅಕಾಡೆಮಿಯನ್‌ಗಳನ್ನು ಒಟ್ಟುಗೂಡಿಸುವ ಮತ್ತು ಸಮಾಜದಲ್ಲಿರುವ ಸವಾಲುಗಳಿಗೆ ತಕ್ಕದಾದ ಆಖ್ಯಾನಗಳನ್ನು ರೂಪಿಸುವುದು ಮತ್ತು ಅಗತ್ಯವಾದ ಅಂಶಗಳನ್ನು ಬದಲಾಯಿಸುತ್ತಾ ರಾಷ್ಟ್ರವನ್ನು ಮುನ್ನಡೆಸುವ ಸಮರ್ಥ ನಾಗರಿಕ ಸಮಾಜವನ್ನು ರೂಪಿಸುವ ಬಹು ಅಪ್ಯಾಯಮಾನವಾದ ವೇದಿಕೆಯಾಗಿದೆ.

ಇದು ಮೂರು ದಿನಗಳ ಕಾರ್ಯಕ್ರಮ ಮಾತ್ರವಲ್ಲದೆ ಭಾರತದ ಶ್ರೀಮಂತ ವೈವಿಧ್ಯತೆಯನ್ನು ತೋರುವ ಅನೇಕ ಸಂವಾದ, ಸೆಮಿನಾರ್, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಸಮಾಜದಲ್ಲಿ ಒಡಕನ್ನು ಹುಟ್ಟುಹಾಕುತ್ತಿರುವ ಮತ್ತು ಭಾರತದ ಐಕ್ಯತೆಯನ್ನು ಛಿದ್ರಗೊಳಿಸುವ ಶಕ್ತಿಗಳು ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಲೋಕಮಂಥನವು ಆಯೋಜನೆಗೊಳ್ಳುತ್ತಿದ್ದು, ಈ ರೀತಿಯ ಶಕ್ತಿಗಳಿಗೆ, ಭಾರತವನ್ನು ರಾಜ್ಯಗಳ ಒಕ್ಕೂಟ ಮಾತ್ರವೆಂಬಂತೆ ಬಿಂಬಿಸುತ್ತಿರುವವರಿಗೆ ಸಾಂಸ್ಕೃತಿಕ ಮತ್ತು ನಾಗರಿಕವಾದ ಉತ್ತರವೆಂಬಂತೆ ಲೋಕಮಂಥನವು ಆಯೋಜನೆಗೊಳ್ಳುತ್ತಿದೆ.

ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಯೋಜಕ ಜೆ. ನಂದಕುಮಾರ್ ಅವರು ಮಾತನಾಡಿ, ಎಲ್ಲ ವೈವಿಧ್ಯಗಳು, ತದ್ವಿರುದ್ಧ ಪರಂಪರೆ ಆಚರಣೆಗಳ ಆಚೆಗೆ ನಮ್ಮನ್ನೆಲ್ಲ ಸಾಂಸ್ಕೃತಿಕವಾಗಿ ಒಂದು ತಂತು ಬೆಸೆದುಕೊಂಡಿದ್ದು, ಅದು ಭಾರತವನ್ನು ಒಂದು ರಾಷ್ಟ್ರವಾಗಿ, ಒಂದು ನಾಗರೀಕತೆಯಾಗಿ 7,000 ವರ್ಷಗಳಿಂದ ಸತತವಾಗಿ ಬೆಳೆಸಿಕೊಂಡು ಬಂದಿದೆ. ಈ ಏಕತೆ ನಮಗೆ ಹೊರಗಿನಿಂದ ಹೇರಿರುವಂಥದ್ದಲ್ಲ ಅಥವಾ ಹೊರಗಿನ ಯಾವುದೋ ನಂಬಿಕೆಗೆ, ದಬ್ಬಾಳಿಕೆಗಳಿಗೆ ಅಥವಾ ರಾಜಕೀಯ ಕಾರಣಗಳಿಗೆ ಒಳಗಾಗಿ ಹುಟ್ಟಿದ್ದಲ್ಲ. ನಮ್ಮೊಳಗೆ ನಮ್ಮನ್ನು ಬೆಸೆಯುತ್ತಿರುವ, ವೈವಿಧ್ಯವನ್ನು ಪ್ರೋತ್ಸಾಹಿಸುತ್ತಾ ಮತ್ತು ಒಂದುಗೂಡಿಸುವ, ಪರಂಪರೆಯನ್ನು ಒಪ್ಪಿಕೊಂಡು ಅದನ್ನು ಬೆಳೆಸುತ್ತಿರುವ ಜಾನಪದ ಸಂಸ್ಕೃತಿ ಮತ್ತು ತತ್ವಜ್ಞಾನ ಶಕ್ತಿಗಳ, ರಾಷ್ಟ್ರವನ್ನು ಸ್ವತ್ವದೆಡೆಗೆ ಬಲಪಡಿಸುವ ಪ್ರಕ್ರಿಯೆಗೆ ನೀರೆರೆಯುವ ಪ್ರಯತ್ನವೇ ಲೋಕಮಂಥನ” ಎಂದರು.

ಲೋಕಮಂಥನದ ಮೊದಲ ಆವೃತ್ತಿಯು 2016ರಲ್ಲಿ ‘ದೇಶ- ಕಾಲ-ಸ್ಥಿತಿ’ ಎಂಬ ವಿಚಾರದ ಮೇಲೆ ನಡೆದಿದ್ದು, ನಂತರ 2018ರಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತ ಬೋಧ: ಜನ ಗಣ ಮನ’ ಎಂಬ ಆಶಯದೊಂದಿಗೆ ನಡೆದಿತ್ತು. ಸುದ್ದಿಗೋಷ್ಠಿಯಲ್ಲಿ ಪ್ರಜ್ಞಾ ಪ್ರವಾಹದ ಕ್ಷೇತ್ರೀಯ ಸಂಯೋಜಕ ರಘುನಂದನ ಉಪಸ್ಥಿತರಿದ್ದರು.

ಇದನ್ನೂ ಓದಿ | ಮೀಸಲಾತಿ ಕೊಡದೆ ಬೊಮ್ಮಾಯಿ, ಬಿಎಸ್‌ವೈ ನಡು ದಾರಿಯಲ್ಲಿ ಕೈಬಿಟ್ಟರು: ಬಸವಜಯ ಮೃತ್ಯುಂಜಯ ಸ್ವಾಮೀಜಿ

Exit mobile version