Site icon Vistara News

Mad Love : ಮದುವೆ ಮನೆಗೆ ನುಗ್ಗಿ ಪಾಗಲ್‌ ಪ್ರೇಮಿಯ ಹುಚ್ಚಾಟ; ಅರ್ಧದಲ್ಲೇ ನಿಂತು ಹೋಯಿತು ಹುಡುಗಿ ಮದುವೆ

pagal premi

#image_title

ದೇವನಹಳ್ಳಿ: ಹುಚ್ಚು ಪ್ರೇಮಿಯೊಬ್ಬ ಕಲ್ಯಾಣ ಮಂಟಪಕ್ಕೆ ನುಗ್ಗಿ, ನಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಬೇರೊಬ್ಬ ಮದುವೆಯಾಗುತ್ತಿದ್ದಾನೆ ಎಂದು ಗಲಾಟೆ ಮಾಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯದಲ್ಲಿ ಸಂಭವಿಸಿದೆ. ಹುಡುಗಿಯ ಕಡೆಯವರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಅದರೆ, ನಿಜಾಂಶವನ್ನು ವಿಮರ್ಶಿಸದೆ ಹುಡುಗನ ಕಡೆಯವರು ಮದುವೆಯನ್ನೇ ರದ್ದುಪಡಿಸಿ ತೆರಳಿದ್ದಾರೆ.

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು. ಬುಧವಾರ ಸಂಜೆಯಿಂದಲೇ ಮದುವೆ ಸಂಭ್ರಮವಿತ್ತು. ಸಂಜೆ ಆರತಕ್ಷತೆ ನಡೆದು ಗುರುವಾಗ ಮದುವೆ ನಡೆಯಲಿತ್ತು.

ಈ ನಡುವೆ, ಬುಧವಾರ ರಾತ್ರಿ ಬೆಂಗಳೂರಿನ ನಿತೀಶ್‌ ಎಂಬ ಯುವಕನೊಬ್ಬ ಬಂದು ಹುಚ್ಚಾಟ ಮಾಡಿದ್ದಾನೆ. ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆಯಾಗ್ತಿದ್ದಾಳೆ ಅಂತ ಗಲಾಟೆ ಮಾಡಿದ ಆಗ ಮದುವೆ ನಿಲ್ಲಿಸಿ ಎಂದು ಸದ್ದು ಮಾಡಿದ್ದಾನೆ. ಹುಚ್ಚಾಟ ಮಾಡಿದ ಯುವಕನಿಗೆ ಮದುವೆ ಮನೆಯಲ್ಲಿದ್ದವರು ಸರಿಯಾಗಿ ಹೊಡೆದು ಬುದ್ಧಿ ಕಲಿಸಿದ್ದಾರೆ.

ನಿಜಕ್ಕೂ ಪ್ರೀತಿ ಇತ್ತಾ? ಹುಚ್ಚಾಟಕ್ಕೆ ಕಾರಣವೇನು?

ಮದುವೆಯಾಗಬೇಕಿದ್ದ ಯುವತಿ ಮತ್ತು ಈ ಯುವಕ ಹತ್ತನೇ ತರಗತಿಯಲ್ಲಿ ಸಹಪಾಠಿಗಳಾಗಿದ್ದರು. ಈ ನಡುವೆ ಕೆಲವರು 10ನೇ ತರಗತಿಯ ಸಹಪಾಠಿಗಳ ವಾಟ್ಸ್‌ ಆಪ್‌ ಗ್ರೂಪ್‌ ಒಂದನ್ನು ಆರಂಭಿಸಿದ್ದರು. ಇದರ ಮೂಲಕ ಇವರಿಗೆ ಮತ್ತೆ ಪರಿಚಯವಾಗಿದೆ. ಹಳೆ ಸ್ನೇಹದಿಂದ ಹುಡುಗಿ ಆತ್ಮೀಯವಾಗಿಯೇ ಮಾತನಾಡಿದ್ದಾಳೆ ಎನ್ನಲಾಗಿದೆ. ಆದರೆ, ಇದನ್ನೇ ಪ್ರೀತಿ ಎಂದು ತಿಳಿದುಕೊಂಡ ಆತ ಮನಸಿನಲ್ಲೇ ಮಂಡಿಗೆ ತಿನ್ನಲು ಶುರು ಮಾಡಿದ್ದ. ಜತೆಗೆ ಮದುವೆಯಾಗುವಂತೆ ಒತ್ತಾಯಿಸಲು ಶುರು ಮಾಡಿದ್ದ. ಆದರೆ, ಆಕೆ ಇದನ್ನು ನಿರಾಕರಿಸಿದ್ದಳು.

ಈ ನಡುವೆ, ಯುವತಿಗೆ ಬೇರೊಬ್ಬ ಯುವಕನ ಜತೆ ಮದುವೆ ನಿಶ್ಚಯವಾಗಿತ್ತು. ಮದುವೆ ದಿನವೂ ಹತ್ತಿರ ಬಂತು. ಮದುವೆಯ ವಿಚಾರವನ್ನು ಯಾರಿಂದಲೋ ತಿಳಿದ ಆತ ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡಿದ್ದಾನೆ.

ಅಷ್ಟೇ ಅಲ್ಲ, ಗಲಾಟೆಯ ನಡುವೆ ಚಾಕುವಿನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಾನೆ. ಹೊಡೆತ ಮತ್ತು ಆತ್ಮಹತ್ಯೆ ಯತ್ನದಿಂದ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ವಿಕ್ಟೋರಿಯಾ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಡುವೆ, ಗಲಾಟೆ ಹಿನ್ನೆಲೆಯಲ್ಲಿ ಹುಡುಗಿಯ ಮದುವೆ ಮುರಿದು ಬಿದ್ದಿದೆ. ರಾತ್ರಿ ಗಲಾಟೆಯ ಬಳಿಕ ಹುಡುಗನ ಕಡೆಯವರು ಬೆಳಗ್ಗೆಯೇ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : Murder Case: ಬೆಂಗಳೂರಿನಲ್ಲಿ ಯುವತಿಯ ಬರ್ಬರ ಕೊಲೆ; ಪ್ರೀತಿ ನಿರಾಕರಿಸಿದ್ದಕ್ಕೆ 16 ಬಾರಿ ಚಾಕು ಇರಿದ ಪಾಗಲ್ ಪ್ರೇಮಿ

Exit mobile version