Site icon Vistara News

ಹಸೆಮಣೆ ಏರಬೇಕಿದ್ದ ಯುವಕನ ಕೊಲೆ; ಈತ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಕೊಲೆಗಾರ!

Dharwad Murder Case

#image_title

ಹುಬ್ಬಳ್ಳಿ: ಇತ್ತೀಚೆಗೆ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣ (Murder Case)ದಲ್ಲೊಂದು ಟ್ವಿಸ್ಟ್​ ಸಿಕ್ಕಿದೆ. ಈ ಗ್ರಾಮದ ನಿಂಗಪ್ಪ ನವಲೂರು (33) ಎಂಬಾತ ಹತ್ಯೆಯಾದವನಾಗಿದ್ದ. ಜೂ.7ರಂದು ನಿಂಗಪ್ಪನ ಮದುವೆಯಿತ್ತು. ತಾವರೆಗೆರೆ ಎಂಬ ಹಳ್ಳಿಯ ಯುವತಿ ಜತೆ ಆತ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದ. ಆದರೆ ಜೂ.1ರ ರಾತ್ರಿ ಊಟ ಮಾಡಿ, ತೋಟದ ಮನೆಗೆ ಮಲಗಲೆಂದು ಹೋಗುತ್ತಿದ್ದಾಗ ಕೊಲೆ ಮಾಡಲಾಗಿತ್ತು.

ಹೊಲದಲ್ಲಿರುವ ಹಸುಗಳ ಶೆಡ್​​ನಲ್ಲಿ ನಿಂಗಪ್ಪನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಆತನ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಹಿಸುಕಿ ಕೊಲೆ ಮಾಡಿ ಹೋಗಿದ್ದರು. ಆತನ ಕೊಲೆ ಯಾಕಾಯಿತು ಎಂಬುದೇ ಕಗ್ಗಂಟಾಗಿತ್ತು. ಈ ಪ್ರಕರಣವನ್ನೀಗ ಪೊಲೀಸರು ಬೇಧಿಸಿದ್ದಾರೆ. ನಿಂಗಪ್ಪನಿಗೆ ಜಿನ್ನೂರು ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಇದ್ದ ಅನೈತಿಕ ಸಂಬಂಧವೇ ಆತನ ಹತ್ಯೆಗೆ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ. ನಿಂಗಪ್ಪ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬುದು ಗೊತ್ತಾಗಿ, ಆಕೆಯ ಪತಿ ಮುತ್ತಪ್ಪ ಹುಲ್ಲೊಳ್ಳಿ, ಸಹೋದರ ವೀರಭದ್ರ ಜಾಲಿಹಾಳ ಸೇರಿ ಕೊಂದಿದ್ದರು. ಇವರಿಬ್ಬರನ್ನೂ ಬಂಧಿಸಿರುವ ಕಲಘಟಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case: ಬಾರ್‌ ಮುಚ್ಚಲು ಸಮಯವಾಯ್ತು ಎಂದಿದ್ದಕ್ಕೆ ಕ್ಯಾಶಿಯರ್‌ನ ಕೊಲೆ, ಪೊಲೀಸರ ಎದುರೇ ಇರಿದರು!

ಮನೆ ಬೀಗ ಒಡೆದು ಹಣ ಕಳವು

ಧಾರವಾಡ: ಇಲ್ಲಿನ ನಾಗಚೈತನ್ಯ ಬಡಾವಣೆಯಲ್ಲಿ ಕಳ್ಳರು ಮನೆಯೊಂದನ್ನು ದೋಚಿದ್ದಾರೆ. ಚಿದಾನಂದ ಹೊಟ್ಟೆಪ್ಪನವರ್​ ಎಂಬುವರ ಮನೆಯ ಬಾಗಿಲಿನ ಕೀ ಮುರಿದ ಖದೀಮರು 120 ಗ್ರಾಂ ಚಿನ್ನ, 20 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಚಿದಾನಂದ ಅವರ ಕುಟುಂಬದವರು ಕಳೆದ ಎರಡು ದಿನಗಳಿಂದ ಊರಲ್ಲಿ ಇರಲಿಲ್ಲ. ಮನೆ ಬಾಗಿಲು ಹಾಕಿದಂತೆ ಇತ್ತು. ಕಳ್ಳರು ಸಮಯ ನೋಡಿಕೊಂಡು ಬಾಗಿಲು ಒಡೆದಿದ್ದಾರೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕೇಸ್ ದಾಖಲಿಸಿಕೊಂಡಿದ್ದಾರೆ.

Exit mobile version