Site icon Vistara News

Murder Case: ತೋಟದ ಮನೆಯಲ್ಲಿ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರ ಹತ್ಯೆಗೈದ ಗಂಡ

Man kills wife

#image_title

ಬಾಗಲಕೋಟೆ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಾಗಲಕೋಟೆ ಜಿಲ್ಲೆಯ ಹಿರೇಸಂಶಿ ಗ್ರಾಮದಲ್ಲಿ ಬೆಳಗಿನ ಈ ಘಟನೆ ನಡೆದಿದೆ.

ಮಾಯವ್ವ ಉದ್ದನ್ನವರ (43) ಎಂಬ ಮಹಿಳೆಯನ್ನು ಆಕೆಯ ಗಂಡ ಶಿವಪ್ಪ ಉದ್ದನ್ನವರ (48) ಎಂಬಾತ ತೋಟದ ಮನೆಯಲ್ಲಿ ಕೊಚ್ಚಿ ಕೊಂದು ಪರಾರಿಯಾಗಿದ್ದಾನೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಸಾಕಷ್ಟು ಸಾಲ ಮಾಡಿಕೊಂಡಿದ್ದ ಶಿವಪ್ಪ, ಹೆಂಡತಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಹಣ ಕೊಡದೆ ಇದ್ದಾಗ ಈ ರೀತಿ ಮಾಡಿದ್ದ ಎಂದು ತಿಳಿದುಬಂದಿದೆ.

ಬೀಳಗಿ ತಾಲೂಕಿನ ಹಿರೇಸಂಶಿ ಮೂಲದ ಮಾಯವ್ವಳನ್ನು ಬಾದಾಮಿ ತಾಲೂಕಿನ ಹಾಗನೂರ ಗ್ರಾಮಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಗಂಡ ಶಿವಪ್ಪ 10 ಲಕ್ಕಕ್ಕಿಂತಲೂ ಹೆಚ್ಚು ಸಾಲ ಮಾಡಿಕೊಂಡಿದ್ದ. ಇಲ್ಲದ ಚಟಗಳನ್ನು ಅಂಟಿಸಿಕೊಂಡಿದ್ದ. ಸಾಲ ತೀರಿಸಲು ಹಣ ಕೊಡುವಂತೆ ಪದೇಪದೆ ಜಗಳ ಮಾಡುತ್ತಿದ್ದ.

ತನ್ನ ಬಳಿ ಇಲ್ಲ ಎಂದಾಗ ತವರು ಮನೆಯ ಪಾಲಿನ ಆಸ್ತಿಯನ್ನು ಮಾರಾಟ ಮಾಡಿ ಹಣ ಕೊಡು ಎನ್ನುತ್ತಿದ್ದ. ಆತನ ಕಾಟ ತಾಳಲಾಗದೆ ಮಾಯವ್ವ ಇತ್ತೀಚೆಗೆ ತವರು ಮನೆಗೆ ಬಂದು ನೆಲೆಸಿದ್ದಳು. ತೋಟದ ಮನೆಯಲ್ಲಿ ವಾಸವಾಗಿದ್ದಳು.

ಗುರುವಾರ ರಾತ್ರಿ ಶಿವಪ್ಪ ಹೆಂಡತಿಯನ್ನು ಹುಡುಕಿಕೊಂಡು ಆ ಮನೆಗೆ ಬಂದಿದ್ದ. ರಾತ್ರಿ ತೋಟದ ಮನೆಯಲ್ಲೇ ಮಲಗಿದ್ದ ಶಿವಪ್ಪ ಬೆಳಗಿನ ಜಾವ ಕೊಲೆಗೈದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಿವಿಂಗ್‌ ಟುಗೆದರ್‌ನಲ್ಲಿದ್ದ ಜೋಡಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು: ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಜೋಡಿಯೊಂದು ಪ್ರಾಣ ಕಳೆದುಕೊಂಡ (Suicide case) ಘಟನೆ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಗದೀಶ್ ಮತ್ತು ನಂದಿನಿ ಆತ್ಮಹತ್ಯೆಗೆ ಶರಣಾದವರು.

ಮೂಲತಃ ದಾವಣಗೆರೆ ಚನ್ನಗಿರಿ ಮೂಲದ ಜಗದೀಶ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರೆ ‌ ತುಮಕೂರು ಮೂಲದ ನಂದಿನಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಲಿವಿಂಗ್ ಟುಗೆದರ್‌ನಲ್ಲಿ ಇದ್ದರು. ಪೀಣ್ಯದ ಮನೆಯೊಂದರಲ್ಲಿ ವಾಸವಾಗಿದ್ದರು.

ಇವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದು, ಆಸುಪಾಸಿನವರು ಈ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಕೌಟುಂಬಿಕ ಸಮಸ್ಯೆಯಿಂದಾಗಿ ಇವರು ಇಂಥ ಅತಿರೇಕದ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಜಗದೀಶ್ ಚನ್ನಗಿರಿಯಲ್ಲಿರುವ ನಿವೇಶನವೊಂದರ ಸಂಬಂಧ ಕುಟುಂಬ ಸದಸ್ಯರೊಂದಿಗೆ ಜಗಳ ಮಾಡಿದ್ದ ಎನ್ನಲಾಗಿದೆ. ಮಾತ್ರವಲ್ಲ, ನಿವೇಶನದ ಕಾಗದ ಪತ್ರಗಳ ಸುಟ್ಟು ಬಂದಿದ್ದ.

ಈ ವಿಚಾರಗಳನ್ನು ಆತ ಡೆತ್ ನೋಟ್ ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಡೆತ್‌ ನೋಟ್‌ನಲ್ಲಿ ತನ್ನ ತಂದೆ ಮತ್ತು ಮನೆಯ ಕುಟುಂಬದ ಸದಸ್ಯರ ಹೆಸರು ಬರೆದಿಟ್ಟಿದ್ದಾನೆ. ಹೀಗಾಗಿ ಇದು ಜಾಗದ ವಿಚಾರಕ್ಕೆ ಸಂಬಂಧಿಸಿ ಆಗಿರುವ ಗಲಾಟೆಯ ತೀವ್ರತೆಯ ಫಲವಾದ ಸಾವು ಎಂದು ಹೇಳಲಾಗಿದೆ. ಪೊಲೀಸರು ಡೆತ್ ನೋಟ್ ಹಿನ್ನೆಲೆಯನ್ನು ಇಟ್ಟುಕೊಂಡು ಐಪಿಸಿ ಸೆಕ್ಷನ್‌ 306 ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ : Road Accident : ಬೈಕ್‌ಗೆ ಬಸ್‌ ಡಿಕ್ಕಿ; ಮಾರುಕಟ್ಟೆಗೆ ಹೂವು ತೆಗೆದುಕೊಂಡು ಹೋಗುತ್ತಿದ್ದ ರೈತ ಮೃತ್ಯು

Exit mobile version