Site icon Vistara News

Manual Scavenging: ಯಲವಳ್ಳಿ ಮೊರಾರ್ಜಿ ವಸತಿ ಶಾಲೆಯ ಎಲ್ಲ ಸಿಬ್ಬಂದಿ ಬದಲು; ಸಿಇಒ ಸೂಚನೆ

Kolara residential school and CEO visit

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ (Manual Scavenging) ಪ್ರಕರಣ ಬೆಳಕಿಗೆ ಬರುತ್ತಿರುವಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ವಸತಿ ಶಾಲೆಯ ಎಲ್ಲ ಸಿಬ್ಬಂದಿಯನ್ನು ಬದಲಾವಣೆ ಮಾಡಲು ಮುಂದಾಗಲಾಗಿದೆ. ಈ ಸಂಬಂಧ ಕೋಲಾರ ಜಿಲ್ಲಾ ಪಂಚಾಯತ್ ಸಿಇಒ (Kolar Zilla Panchayat CEO) ಪದ್ಮ ಬಸಂತಪ್ಪ ಖಡಕ್ ಸೂಚನೆ ನೀಡಿದ್ದಾರೆ.

ವಸತಿ ಶಾಲೆಯ ಸಿಬ್ಬಂದಿ, ಅಡುಗೆ ಸಹಾಯಕಿಯರು, ಡಿ ಗ್ರೂಪ್ ನೌಕರರು, ಶಿಕ್ಷಕ ವೃಂದದವರು, ನಿಲಯದ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಎಲ್ಲರನ್ನೂ ತಕ್ಷಣದಿಂದಲೇ ಬದಲಾಯಿಸಲು ಪದ್ಮ ಬಸಂತಪ್ಪ ಸೂಚನೆ ನೀಡಿದ್ದಾರೆ. ii

ಇದನ್ನೂ ಓದಿ: COVID Subvariant JN.1: ರಾಜ್ಯದಲ್ಲಿ ಕೋವಿಡ್‌ ಹೈ ಅಲರ್ಟ್‌; 60 ವರ್ಷ ದಾಟಿದವರಿಗೆ ಮಾಸ್ಕ್‌ ಕಡ್ಡಾಯ

ವಸತಿ ನಿಲಯದಲ್ಲಿನ ಮಲ ಎತ್ತುವ ಪದ್ಧತಿ ಹಾಗೂ ಬಾಲಕಿಯರು ಬಟ್ಟೆ ಬದಲಿಸುವುದನ್ನು ಚಿತ್ರೀಕರಣ ಮಾಡಿರುವ ಕುರಿತು ತನಿಖೆ ಮುಂದುವರಿದಿದೆ. ಯಾರು ತಪ್ಪಿತಸ್ಥರೋ ಅವರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪದ್ಮ ಬಸಂತಪ್ಪ ಹೇಳಿದ್ದಾರೆ.

ಚಿತ್ರಕಲಾ ಶಿಕ್ಷಕನ ಬಂಧನ ಖಂಡಿಸಿ ಮಕ್ಕಳ ಪ್ರತಿಭಟನೆ

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ (Manual Scavenging) ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲೆ ಮತ್ತು ಶಿಕ್ಷಕರೊಬ್ಬರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ವಸತಿ ಶಾಲೆ ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ.

ಬೆಳಗ್ಗೆ 5 ಗಂಟೆಯಿಂದಲೇ ಪ್ರತಿಭಟನೆ ಮಾಡಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ. ಚಿತ್ರಕಲಾ ಶಿಕ್ಷಕ‌ ಮುನಿಯಪ್ಪ ಬಂಧನಕ್ಕೆ ಖಂಡನೆ ವ್ಯಕ್ತವಾಗಿದೆ. ಅವರ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಮಕ್ಕಳು ಆಗ್ರಹಿಸಿದ್ದಾರೆ. ಊಟ ತಿಂಡಿ ಬಿಟ್ಟು ಮಕ್ಕಳು ಪ್ರತಿಭಟಿಸಿದ್ದಾರೆ.

ಈ ವೇಳೆ ವಸತಿ ನಿಲಯಕ್ಕೆ ಸಂಬಂಧಪಟ್ಟಂತೆ ಹಾಸ್ಟೆಲ್ ವಿದ್ಯಾರ್ಥಿಗಳು ಕೇಂದ್ರ ಸಚಿವ ನಾರಾಯಣಸ್ವಾಮಿಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಘೇರಾವ್ ಹಾಕಿದ್ದಾರೆ. ಶಿಕ್ಷಕರ ವಿರುದ್ಧ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಆಕ್ರೋಶವನ್ನು ಹೊರಹಾಕಿದ್ದರೆ. ಸಚಿವರ ಭರವಸೆ ಬಳಿಕ ಪ್ರತಿಭಟನೆಯನ್ನು ವಾಪಸ್‌ ಪಡೆದುಕೊಂಡರು.

ವಸತಿ ಶಾಲೆಗೆ ಭೇಟಿ ನೀಡಿದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಭೇಟಿ, ಖಂಡನೆ

ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ (Manual Scavenging) ಪ್ರಕರಣವನ್ನು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಖಂಡಿಸಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿಯನ್ನು ಪಡೆದುಕೊಂಡರು. ಶಾಲಾ ಮಕ್ಕಳ ಕೈಯಲ್ಲಿ ಅಮಾನವೀಯ ಕೃತ್ಯ ನಡೆಸಿರುವುದು ಖಂಡನಾರ್ಹ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇಲ್ಲಿನ ಮಕ್ಕಳು ಪ್ರಕರಣದಿಂದ ಗಾಬರಿಯಲ್ಲಿದ್ದಾರೆ. ಮಕ್ಕಳನ್ನು ಮಲದ ಗುಂಡಿಯಲ್ಲಿ‌ ಇಳಿಸಿರುವುದು ಸಮಾಜಕ್ಕೆ ಮಾಡಿರುವ ಅಪಮಾನ. ಡಿ. 1ರಂದು ಆಗಿರುವ ಘಟನೆ ಇದಾಗಿದೆ. ಜಿಲ್ಲಾಡಳಿತ ಇದರ‌ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ನಿಜಕ್ಕೂ ಸರಿಯಲ್ಲ. ಮಕ್ಕಳ‌ ಬಟ್ಟೆ ಬದಲಾವಣೆಯ ವಿಡಿಯೊ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ನ್ಯಾಯಾಧೀಶರು ವಸತಿ ಇಲಾಖೆಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ. ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ. ಎಲ್ಲ ವಸತಿ‌ ಶಾಲೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಕೇಸು ಹಾಕಿದರೆ, ಪ್ರಕರಣ ದಾಖಲು ಮಾಡಿದರೆ ಎಲ್ಲವೂ ಬದಲಾವಣೆಯಾಗುವುದಿಲ್ಲ. ಸರ್ಕಾರ ಇದರ ಜವಾಬ್ದಾರಿ‌ ಹೊರಬೇಕಾಗಿದೆ. ರಾಜ್ಯದ ಮೊರಾರ್ಜಿ ದೇಸಾಯಿ ವಸತಿ‌ ಶಾಲೆಗಳ‌ ಕೊರತೆ ಬಗ್ಗೆ ಎಸ್‌ಐಟಿ ತನಿಖೆಯಾಗಬೇಕು. ವಸತಿ‌ ಶಾಲೆಗಳಲ್ಲಿ ನಡೆಯುತ್ತಿರುವ ಶೋಷಣೆ ಕುರಿತು ತನಿಖೆಯಾಗಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ಈ ಪ್ರಕರಣ ಸರ್ಕಾರಕ್ಕೆ ಗೌರವ ತರುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ ಅವರ ಮೇಲೆ ಕ್ರಮ‌ ಕೈಗೊಳ್ಳಬೇಕು ಎಂದು ಹೇಳಿದರು. ಕೋಲಾರ ಸಂಸದ, ಮುನಿಸ್ವಾಮಿ ಇದ್ದರು.

ಅಧ್ಯಯನಕ್ಕೆ ರಾಜ್ಯ ಸಮಿತಿ ರಚಿಸಿದ ಬಿಜೆಪಿ

ಮಾಲೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶೌಚಗುಂಡಿಗೆ ಮಕ್ಕಳನ್ನು ಇಳಿಸಿದ ಪ್ರಕರಣಕ್ಕೆ ಸಂಬಂಧೊಟ್ಟಂತೆ ಅಧ್ಯಯನ ನಡೆಸಲು ರಾಜ್ಯ ಸಮಿತಿಯೊಂದನ್ನು ಬಿಜೆಪಿ ರಚಿಸಿದೆ. ಈ ಸಮಿತಿಯು ವಸತಿ ಶಾಲೆಗೆ ಭೇಟಿ ನೀಡಿ ವಾಸ್ತವಾಂಶದ ವರದಿ ನೀಡಲು ಸೂಚನೆ ನೀಡಲಾಗಿದೆ. ಸಮಿತಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಚಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ , ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ್ ಇದ್ದಾರೆ.

ಏನಿದು ಪ್ರಕರಣ?

ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಪೋಷಕರು ಬೇಸರ ವ್ಯಕ್ತಪಡಿಸಿ ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಈ ಕುರಿತ ವಿಡಿಯೊ ಹಾಗೂ ಫೊಟೊಗಳು ಎಲ್ಲೆಡೆ ಹರಿದಾಡಿದ್ದರಿಂದ ವಿರೋಧ ವ್ಯಕ್ತವಾಗಿತ್ತು. ನಂತರ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ, ಶಿಕ್ಷಕರ ವಿರುದ್ಧ ಪೋಷಕರು ದೂರು ದಾಖಲಿಸಿದ್ದರು.

ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿಯು ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದರು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ಇದೇ ರೀತಿಯಲ್ಲಿ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರಿಂದ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವಿದೆ.

ಇದನ್ನೂ ಓದಿ | School Teacher : ಸ್ವಚ್ಛತೆ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ ಶಿಕ್ಷಕರು!

ಇದಲ್ಲದೆ, ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಕೊಡಲಾಗುತ್ತಿದೆ ಎಂದು ದೂರಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದು, ಅವರಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಪ್ರಾಂಶುಪಾಲೆ, ಶಿಕ್ಷಕನ ಬಂಧನ

ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ (Manual Scavenging) ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲೆ ಮತ್ತು ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Heavy Rain: ತಮಿಳುನಾಡಿನಲ್ಲಿ ಭಾರೀ ಮಳೆ; 4 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ, ರೈಲುಗಳ ಸಂಚಾರ ರದ್ದು

ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಭಾರತಮ್ಮ ಹಾಗೂ ಚಿತ್ರಕಲೆ ಶಿಕ್ಷಕ ಮುನಿಯಪ್ಪ ಅವರನ್ನು ಬಂಧಿತರು. ಪ್ರಕರಣದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರನ್ನು ಮಾಸ್ತಿ ಠಾಣೆ ಬಂಧಿಸಲಾಗಿದೆ. ಹಾಸ್ಟೆಲ್ ವಾರ್ಡನ್ ಮಂಜುನಾಥ್ ಹಾಗೂ ಸಹ ಶಿಕ್ಷಕ ಅಭಿಷೇಕ್ ಮೇಲೆ ಕೂಡ ಎಫ್‌ಐಆರ್ ದಾಖಲಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.

Exit mobile version