Site icon Vistara News

ಸ್ಮರಣೆ | ಕನ್ನಡದ ಕಣ್ವ ಬಿ.ಎಂ ಶ್ರೀಕಂಠಯ್ಯ

b m sri

| ಡಾ. ಡಿ.ಸಿ. ರಾಮಚಂದ್ರ

‘ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ’ ಎಂದು ಗುಣಗಾನ ಮಾಡಿ ಕನ್ನಡ ಭಾಷೆಯ ಘನತೆ ತೋರಿಸಿಕೊಟ್ಟ ಕವಿಕುಲೋತ್ತಮ ಬಿಎಂಶ್ರೀ. ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು 20ನೇ ಶತಮಾನದ ಆದಿಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದ ಕವಿ ಮತ್ತು ಸಾಹಿತಿ.

ಬಿ.ಎಂ.ಶ್ರೀಯವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಎಂಬ ಗ್ರಾಮದಲ್ಲಿ ಮೈಲಾರಯ್ಯ ಮತ್ತು ಭಾಗೀರಥಮ್ಮನವರ ಸುಪುತ್ರರಾಗಿ 1884ನೇ ಜನವರಿ 03ರಂದು ಜನಿಸಿದರು. ಇದು ತಾಯಿಯ ತವರೂರು. ತಂದೆಯ ಊರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು.

ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚಪಡುತ್ತಿದ್ದ ಕಾಲ. ಆಗ ಎಲ್ಲಾ ಕಾರ್ಯವು ಇಂಗ್ಲೀಷ್‍ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡಕ್ಕೆ ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ.ಎಂ.ಶ್ರೀಕಂಠಯ್ಯನವರು.

ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಳ್ಳೂರಿನಲ್ಲಿ ಕಲಿತರು. ನಂತರದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿಯನ್ನು, ಮದರಾಸು ವಿಶ್ವವಿದ್ಯಾಲಯದಿಂದ ಬಿ.ಎಲ್. ಪದವಿಯನ್ನು ಪಡೆದು, 1909ರಲ್ಲಿ ಎಂ.ಎ. ಪದವಿ ಪಡೆದರು. ಅದೇ ವರ್ಷ ಮೈಸೂರು ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಸೇರಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 25 ವರ್ಷ ಸೇವೆ ಸಲ್ಲಿಸಿ, 1930ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾಗಿ 1942ರವರೆಗೆ ಕಾಲೇಜಿನ ಸರ್ವತೋಮುಖ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸಿದರು. 1944ರಲ್ಲಿ ಧಾರವಾಡದ ಕೆ.ಇ.ಬೋರ್ಡ್‍ನ ಮುಖ್ಯಸ್ಥರಾಗಿ ನೇಮಕಗೊಂಡು ಅವರು ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿದರು. ‌

ಬಿ.ಎಂ.ಶ್ರೀಕಂಠಯ್ಯನವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ ಮಾಸ್ತಿ, ಕುವೆಂಪು, ಎಸ್.ವಿ.ರಂಗಣ್ಣ, ತೀ.ನಂ.ಶ್ರೀಕಂಠಯ್ಯ, ಜಿ.ಪಿ.ರಾಜರತ್ನಂ, ಡಿ.ಎಲ್.ನರಸಿಂಹಾಚಾರ್ ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿಸಿದರು.

‘ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ’, ಇಂಗ್ಲಿಷಲ್ಲ, ಹಿಂದಿಯಲ್ಲ. ಈ ಕನ್ನಡ ಸಾವಿರಾರು ವರ್ಷಗಳಿಂದಲೂ ಬೆಳೆದುಕೊಂಡು ಬಂದಿರುವ ಭಾಷೆ. ಕನ್ನಡ ಭಾಷೆಗೆ ಯಾವ ರೀತಿಯಲ್ಲೂ ಅಪಾಯ ತಟ್ಟದ ಹಾಗೆ, ಕನ್ನಡ ನಾಡಿನಲ್ಲಿ ಅದಕ್ಕೆ ಪ್ರಧಾನ ಸ್ಥಾನವನ್ನು ಕೊಟ್ಟು, ಭಗವಂತನು ನಮಗೆ ಕೊಟ್ಟಿರುವ ಧನ ಬಲವನ್ನು ಮತ್ತು ಬುದ್ಧಿ ಬಲವನ್ನು ಅದಕ್ಕಾಗಿ ವಿನಿಯೋಗಿಸುವುದು ಕನ್ನಡಿಗರ ಕರ್ತವ್ಯ ಎಂದು 1928ರ ಕಲ್ಬುರ್ಗಿಯಲ್ಲಿ ನಡೆದ 14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಾಡಿದ ಮಾತುಗಳನ್ನು ಕನ್ನಡಿಗರಾದ ನಾವೆಲ್ಲರೂ ಅರ್ಥ ಮಾಡಿಕೊಂಡು ಮುನ್ನಡೆಯಬೇಕು.

ಇದನ್ನೂ ಓದಿ | ಕುವೆಂಪು ಜಯಂತಿ | ನಾಡಿನ ಕವಿಯಾದ ಕಾಡಿನ ಕವಿ

ಬಿ.ಎಂ.ಶ್ರೀಯವರ ‘ಹೊಂಗನಸು’, ‘ಇಂಗ್ಲೀಷ್ ಗೀತೆಗಳು’ ಎಂಬ ಕವನ ಸಂಕಲನ 1921ರಲ್ಲಿ ಪ್ರಕಟಗೊಂಡಿತು. ನ್ಯೂಮನ್ ಕವಿ ಬರೆದ Lead Kindly Light ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ ‘ಕರುಣಾಳು ಬಾ ಬೆಳಕೆ’ ತುಂಬಾ ಜನಪ್ರಸಿದ್ಧವಾಯಿತು.

ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ
ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು.

ಈ ಕವಿತೆಯನ್ನು ಕೇಳಿದರೆ ದಾಸರ ಪದಗಳು ಕಣ್ಮುಂದೆ ಬಂದು ನುಡಿಸಿದಂತಾಗುತ್ತದೆ.

Lord Ullin’s daughter ಕವಿತೆಯು ಕನ್ನಡದಲ್ಲಿ

ಪಡುವ ದಿಬ್ಬದ ಗೌಡನೊಬ್ಬನು
ಬಿಡದೆ ತೊರೆಯನ ಕೂಗಿಕೊಂಡನು
ತಡೆಯದೀಗಲೆ ಗಡುವ ಹಾಯಿಸು
ಕೊಡುವೆ ಕೇಳಿದ ಹೊನ್ನನು !

ಇಂಥ ಸಾಲುಗಳಿಂದ ಕೂಡಿರುವ ಕವಿತೆಯಲ್ಲಿ ಗ್ರಾಮೀಣ ಸೊಗಡಿದೆ.

ನಾಟಕಕಾರ

ಬಿ.ಎಂ.ಶ್ರೀ.ಯವರು ಕನ್ನಡದಲ್ಲಿ ಬರೆದ ಗದಾಯುದ್ಧ, ಅಶ್ವತ್ಥಾಮ, ಪಾರಸಿಕರು ನಾಟಕಗಳು ಬಹಳ ಪ್ರಸಿದ್ಧವಾದವು. ಬಿ.ಎಂ.ಶ್ರೀಯವರು ಕನ್ನಡ ಭಾಷೆಯ ಉಳಿವಿಗಾಗಿ ಸಲ್ಲಿಸಿದ ಸೇವೆಗೆ ಮೈಸೂರಿನ ಮಹಾರಾಜರು 1938ರಲ್ಲಿ ರಾಜಸೇವಾಸಕ್ತ ಎಂಬ ಬಿರುದನ್ನು ನೀಡಿ ಗೌರವಿಸಿದರು. 1928ರಲ್ಲಿ ಗುಲ್ಬರ್ಗಾದಲ್ಲಿ ನಡೆದ 14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು.

ಬಿ.ಎಂ.ಶ್ರೀ. ತಮ್ಮ ಜೀವಿತದ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಕನ್ನಡದ ಕಣ್ವ. ಇವರು 1946ರ ಜನವರಿ 05ರಂದು ಧಾರವಾಡದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಇಹಲೋಕ ತ್ಯಜಿಸಿದರು.
ಬಿ.ಎಂ.ಶ್ರೀ ಕನ್ನಡ ಸಾಹಿತ್ಯದ ದಿಗ್ಗಜರಾಗಿ ಸಾರಸ್ವತಲೋಕ ಎಂದೂ ಮರೆಯದಂತಹ ವಿಪುಲವಾದ ಸಾಹಿತ್ಯ ಕೃಷಿಯನ್ನು ನಡೆಸಿದವರು.

ಇದನ್ನೂ ಓದಿ | ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ನಟ ಡಾ.ರಮೇಶ್ ಅರವಿಂದ್ ಆಯ್ಕೆ

Exit mobile version