Site icon Vistara News

ಡಿಸೆಂಬರ್ ಅಂತ್ಯದೊಳಗೆ ಪೂರ್ವ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಸಚಿವ ಬಿ.ಸಿ ಪಾಟೀಲ್ ಸೂಚನೆ

BC patil

ಬೆಂಗಳೂರು: 2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ವಿಮೆ ಪರಿಹಾರವನ್ನು ಡಿಸೆಂಬರ್ ಅಂತ್ಯದೊಳಗೆ ಇತ್ಯರ್ಥ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೃಷಿ ಸಚಿವರೂ ಆಗಿರುವ ಚಿತ್ರದುರ್ಗ, ಗದಗ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಂದು ವಿಕಾಸ ಸೌಧದ ಸಚಿವರ ಕಚೇರಿಯಲ್ಲಿ ಬೆಳೆವಿಮೆ ಪರಿಹಾರ ಇತ್ಯರ್ಥ ಸಂಬಂಧ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ಸಭೆಯಲ್ಲಿ 2022-23ನೇ ಸಾಲಿನ‌ ಬೆಳೆ ವಿಮೆ ಇತ್ಯರ್ಥ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡ ಸಚಿವರು ಯಾವುದೇ ಕಾರಣಕ್ಕೂ ಬೆಳೆ ವಿಮೆ ಪರಿಹಾರ ತಡವಾಗಬಾರದು ಎಂದರು. ರೈತರು ವಿಮೆಗಾಗಿ ಕಾದು ಕುಳಿತಿರುತ್ತಾರೆ. ಕೃಷಿ ಅಧಿಕಾರಿಗಳು ಸಂಬಂಧಿತ ವಿಮೆ ಕಂಪನಿಗಳೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು ಎಂದರು ಸಚಿವರು ಹೇಳಿದರು.

ಆಧಾರ್ ಕಾರ್ಡ್ ಲಿಂಕ್ ಆಗದ ಇನ್ನೂ ಹೆಚ್ಚಿನ ರೈತರು ಇರುವುದನ್ನು ಗಮನಿಸಿದ ಸಚಿವರು ಆದಷ್ಟು ಕೂಡಲೇ ರೈತರು ಆಧಾರ್ ಕಾರ್ಡ್ ಬೆಳೆ ವಿಮೆಗೆ ಸರಿಯಾಗಿ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ವಿಮಾ ಕಂಪನಿಗಳೊಂದಿಗೆ ಆಧಾರ್‌ನಲ್ಲಿ ಏನಾದರೂ ತಿದ್ದುಪಡಿ ಆಗಿದ್ದಲ್ಲಿ ಅದನ್ನು ಜರೂರಾಗಿ ಗಮನಕ್ಕೆ ತರಬೇಕು ಎಂದು ಹೇಳಿದರು.

ʻʻಬೆಳೆ ವಿಮೆಗೆ ಹಣ ಕಟ್ಟಿ ಆಯಿತು ಎಂದು ಸುಮ್ಮನಿರದೆ ಆಧಾರ್ ಕಾರ್ಡ್ ಮಾಹಿತಿ ಲಿಂಕ್ ಆಗಿದೆಯೇ ಇಲ್ಲವೇ, ಮಾಹಿತಿ ಸರಿಯಿದೆಯೇ ಇಲ್ಲವೇ ಎಂಬುದನ್ನು ರೈತರು ಖಚಿತಪಡಿಸಿಕೊಳ್ಳಬೇಕು. ಅಲ್ಲದೇ ಇನ್ಸೂರೆನ್ಸ್ ಕಂಪನಿಗಳು ಇನ್ಸೂರೆನ್ಸ್ ಮಾಡಿಸಿಕೊಂಡು ಸುಮ್ಮನಾದರಷ್ಟೇ ಸಾಲದು. ರೈತನಿಗೆ ನಿಯಮಬದ್ಧವಾಗಿ ಬೆಳೆವಿಮೆ ಪರಿಹಾರ ಒದಿಸುವಲ್ಲಿ ನ್ಯಾಯವಾಗಿ ಕೆಲಸ ಮಾಡಬೇಕುʼʼ ಎಂದು ಸಚಿವರು ಸಲಹೆ ನೀಡಿದರು.
ಮುಂಗಾರು ಹಂಗಾಮಿನ ಬೆಳೆಗಳಿಗೆ ಜನವರಿಯಲ್ಲಿ ವಿಮೆ‌ಪರಿಹಾರ ಇತ್ಯರ್ಥಪಡಿಸಲು ಪ್ರಕ್ರಿಯೆ ಆರಂಭಿಸುವಂತೆ ಸಭೆಯಲ್ಲಿ ಸಚಿವರು ಸೂಚಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ, ಆಯುಕ್ತರಾದ ಶರತ್ ಪಿ, ಬೆಳೆ ವಿಮೆ‌ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ಮತ್ತಿತರ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version