Site icon Vistara News

ರಾಜಕೀಯವಾಗಿ ಡಿ‌.ಕೆ.ಶಿವಕುಮಾರ್‌ ಮುಗಿಸಲು 500 ಕೋಟಿ ರೂಪಾಯಿ ಸುಪಾರಿ: ಸಚಿವ ಆರ್.ಅಶೋಕ್ ಆರೋಪ

minister r ashoka says rs 500 crore supari to finish dk shivakumar

ಹೊಸಕೋಟೆ: ಕೆಪಿಸಿಸಿ ಅಧ್ಯಕ್ಷ ಡಿ‌.ಕೆ.ಶಿವಕುಮಾರ್‌ನ ಸೋಲಿಸಲು ಕಾಂಗ್ರೆಸ್‌ನಲ್ಲಿರುವ ಮತ್ತೊಂದು ಬಣಕ್ಕೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್, 500 ಕೋಟಿ ರೂಪಾಯಿ ಸುಪಾರಿ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಸೋಲಿಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ೫೦೦ ಕೋಟಿ ರೂಪಾಯಿ ಸುಪಾರಿ ನೀಡಿದ್ದಾರೆ ಎಂಬ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರೇವಂತ್‌ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಡಿ ಕಾಂಗ್ರೆಸ್‌ ವರ್ಸಸ್ ಎಸ್ ಕಾಂಗ್ರೆಸ್ ಬಣಗಳಿವೆ (ಡಿಕೆಶಿ ಬಣ ಮತ್ತು ಸಿದ್ದರಾಮಯ್ಯ ಬಣ). ಡಿ ಕಾಂಗ್ರೆಸ್‌ನ ಸೋಲಿಸಲು ಎಸ್ ಕಾಂಗ್ರೆಸ್‌ಗೆ 500 ಕೋಟಿ ರೂ.ಗಳನ್ನು ಕೆಸಿಆರ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇವರಿಬ್ಬರಿದ್ದರೂ ಬಿಜೆಪಿಗೆ‌ ಲಾಭವಾಗುತ್ತದೆ, ಇವರಿಲ್ಲದಿದ್ದರೂ ಲಾಭವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹವಾ ಈಗಾಗಲೆ ಶುರುವಾಗಿದೆ. ಮೂರು ನಾಲ್ಕು ದಿನಗಳಲ್ಲಿ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ನಂತರ ಪ್ರಧಾನಿ ನರೇಂದ್ರ ಮೋದಿಯವರು ಬರಲಿದ್ದಾರೆ. ಇದಿರಿಂದ ರಾಜ್ಯದಲ್ಲಿ ಬಿಜೆಪಿ ಅಲೆ ಹೆಚ್ಚಾಗಲಿದೆ ಎಂದರು.

ಇದನ್ನೂ ಓದಿ | Prajadwani Yatra : ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ಮಾಜಿ ಸಿಎಂ ಸಿದ್ದರಾಮಯ್ಯ

ರೇವಂತ ರೆಡ್ಡಿಯವರು ನನಗೂ ಸ್ನೇಹಿತರು. ಅವರು ಕಾಂಗ್ರೆಸ್‌ನಲ್ಲಿದ್ದು, ಒಳ್ಳೆಯ ವಾಗ್ಮಿ, ಒಳ್ಳೆಯ ನಾಯಕರಾಗಿದ್ದಾರೆ. ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ಹೇಳುವುದು ಸುಳ್ಳಾಗಲು ಸಾಧ್ಯವಿಲ್ಲ. ಅವರು ಹೇಳಿದ ಮೇಲೆ ಕಾಂಗ್ರೆಸ್‌ ಸೋಲಿಸಲು ವ್ಯವಹಾರವು ನಡೆದಿರುತ್ತದೆ. ಕೆಸಿಆರ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ‌. ವಿರೋಧ ಪಕ್ಷದವರನ್ನು ಮುಗಿಸಲು ಹೊರಟಿದ್ದಾರೆ ಎಂದು ಹೇಳಿದರು.

ಇನ್ನು ಸಿದ್ದಾರಾಮಯ್ಯನ ಕೋಲಾರದಲ್ಲಿ ಮುಗಿಸಲು ಒಂದು ಟೀಂ ರೆಡಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲು ಸುಪಾರಿಯಾಗಿದೆ. ಚಟ್ಟ ಕಟ್ಟಿಕೊಂಡು ಕಾಂಗ್ರೆಸ್‌ನವರು ಸ್ಮಶಾನದ ಕಡೆ ಪ್ರಯಾಣ ಬೆಳೆಸಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು.

Exit mobile version