Site icon Vistara News

Group Clash: ಫ್ಲೆಕ್ಸ್‌ ವಿಚಾರದಲ್ಲಿ ಸೋಮಣ್ಣ, ಪ್ರಿಯಕೃಷ್ಣ ಬೆಂಬಲಿಗರ ನಡುವೆ ಘರ್ಷಣೆ; ಕಲ್ಲು ತೂರಾಟದಿಂದ ಉದ್ವಿಗ್ನ ಸ್ಥಿತಿ

BJP leader seriously injured in Group clashes in Govindarajanagar

#image_title

ಬೆಂಗಳೂರು: ಫ್ಲೆಕ್ಸ್‌ ಕಟ್ಟುವ ವಿಚಾರದಲ್ಲಿ ಗೋವಿಂದರಾಜನಗರ ಶಾಸಕ ವಿ.ಸೋಮಣ್ಣ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ಬೆಂಬಲಿಗರ ನಡುವೆ ಜಗಳ, ಕಲ್ಲು ತೂರಾಟ (Group Clash) ನಡೆದು ವಿಜಯನಗರದ ಬಿಜಿಎಸ್‌ ಮೈದಾನದಲ್ಲಿ ಶುಕ್ರವಾರ ಸಂಜೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಲಾಠಿ ಚಾರ್ಚ್‌ ಮಾಡುವ ಮೂಲಕ ಗುಂಪು ಚದುರಿಸಿದರು. ಗಲಾಟೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.

ಕಾಂಗ್ರೆಸ್‌ ವತಿಯಿಂದ ಮಾರ್ಚ್‌ 19 ರಂದು ಸ್ತ್ರೀಶಕ್ತಿ ಮಹಿಳಾ ಸಮಾಜದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಫ್ಲೆಕ್ಸ್‌ ಕಟ್ಟಲು ಮಾಜಿ ಶಾಸಕ ಪ್ರಿಯಕೃಷ್ಣ ಬೆಂಬಲಿಗರು ಮುಂದಾಗಿದ್ದರು. ಕ್ರಿಕೆಟ್‌ ಆಡುತ್ತಿದ್ದ ಕೆಲ ಯುವಕರು, ಭಾನುವಾರ ಇರುವ ಕಾರ್ಯಕ್ರಮಕ್ಕೆ ಶನಿವಾರ ಫ್ಲೆಕ್ಸ್‌ ಹಾಕಬಹುದಿತ್ತು, ಈಗ ಯಾಕೆ ಹಾಕುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಈ ಗಲಾಟೆ ರಾಜಕೀಯ ತಿರುವು ಪಡೆದು ರಾದ್ಧಾಂತಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಇಬ್ಬರು ಮಾಂಸದ ವ್ಯಾಪಾರಿಗಳ ಮೇಲೆ ಹಲ್ಲೆ, ಮುಖದ ಮೇಲೆ ಮೂತ್ರ ವಿಸರ್ಜನೆ; ಕೆಲಸ ಕಳೆದುಕೊಂಡ ಮೂವರು ಪೊಲೀಸ್​

ವಿಷಯ ತಿಳಿದು ಬಿಜೆಪಿ ಕಾರ್ಯಕರ್ತರು ಕೂಡ ಸ್ಥಳಕ್ಕೆ ಬಂದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಹೊಡೆದಾಡುವ ಹಂತಕ್ಕೆ ಹೋಗಿದ್ದಾರೆ. ತಕ್ಷಣ ಗೋವಿಂದರಾಜ ನಗರ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಲಾಠಿ ಚಾರ್ಚ್‌ ನಡೆಸಿ ಗುಂಪು ಚದುರಿಸಿದರು. ಈ ವಿಚಾರ ತಿಳಿಯಿತ್ತಿದ್ದಂತೆ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳದಲ್ಲಿ 100 ಪೊಲೀಸರನ್ನು ಬಿಗಿ ಭದ್ರತೆಗೆ ಆಯೋಜಿಸಿದ್ದಾರೆ.

ಗಲಾಟೆಯಲ್ಲಿ ಇಬ್ಬರು ಪೊಲೀಸರಿಗೂ ಏಟಾಗಿದ್ದರಿಂದ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ. ಪೊಲೀಸರು ಲಾಠಿ ಚಾರ್ಚ್‌ ನಡೆಸಿದ್ದನ್ನು ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರನ್ನು ಮನವೊಲಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

Exit mobile version