ಕೆಲವರ ಬದುಕಲ್ಲಿ ‘ಪ್ರೀತಿ‘ ದುರಂತವಾಗಿ ಮಾರ್ಪಾಡಾಗಿಬಿಡುತ್ತದೆ. ಬೆಂಗಳೂರಿನ ಆರ್ಆರ್ ನಗರ ನಿವಾಸಿ, ಕಾಲೇಜು ವಿದ್ಯಾರ್ಥಿ ಶಶಾಂಕ್ನಿಗೂ ಈಗ ಅದೇ ಪ್ರೀತಿ ಸುಟ್ಟುಹಾಕಿದೆ. ಈತ ಯಾವ ಹುಡುಗಿಯನ್ನು ಪ್ರೀತಿಸಿದ್ದನೋ (love Case), ಅದೇ ಯುವತಿಯ ಸಂಬಂಧಿಕರು ಸೇರಿ ಶಶಾಂಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಆರ್ ನಗರದ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿ ಪುತ್ರ ಶಶಾಂಕ್ ತನ್ನ ಸಂಬಂಧಿಕರ ಯುವತಿಯನ್ನೇ ಪ್ರೀತಿಸುತ್ತಿದ್ದ. ಅವಳು ಮೈಸೂರಿನವಳಾಗಿದ್ದು, ಆಕೆಗೂ ಶಶಾಂಕ್ ಮೇಲೆ ಮನಸಿತ್ತು. ಶಶಾಂಕ್ ಮನೆಯವರಿಗೆ, ಯುವತಿ ಕುಟುಂಬದವರಿಗೆಲ್ಲ ಇವರಿಬ್ಬರ ಪ್ರೀತಿ ವಿಚಾರ ಗೊತ್ತಾಗಿತ್ತು. ಯುವತಿಯ ಮನೆಯವರು ಶಶಾಂಕ್ನನ್ನು ಒಪ್ಪಿಕೊಂಡಿರಲಿಲ್ಲ. ಯಾವ ಕಾರಣಕ್ಕೂ ಈ ಸಂಬಂಧ ಬೇಡ ಎಂದು ಹೇಳಿದ್ದರು.
ಆದರೆ ಯುವತಿ ತನಗೆ ಶಶಾಂಕ್ ಬೇಕು ಎಂದು ಕಳೆದ ಸೋಮವಾರ ಮೈಸೂರಿನಿಂದ ಬೆಂಗಳೂರಿಗೆ ಬಂದು ಇಳಿದಿದ್ದಳು. ಶಶಾಂಕ್ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ಶಶಾಂಕ್ ಮನೆಗೆ ನುಗ್ಗಿ, ಗಲಾಟೆ ಮಾಡಿ ಅವಳನ್ನು ಕರೆದುಕೊಂಡು ಹೋಗಿದ್ದು. ಇಷ್ಟೆಲ್ಲ ಆದ ಮೇಲೆ ಶಶಾಂಕ್ ಕೂಡ ಗಟ್ಟಿ ಮನಸು ಮಾಡಿದ್ದ. ಇನ್ನು ಆ ಹುಡುಗಿಯ ಸಹವಾಸಕ್ಕೆ ಹೋಗೋದಿಲ್ಲ ಎಂದಿದ್ದ. ಕಾಲೇಜಿಗೆ ಹೋಗಲು ಶುರು ಮಾಡಿದ್ದ.
ಇದನ್ನೂ ಓದಿ: Viral News : ಕೊಲೆಗಾರರ ನಡುವೆ ಜೈಲಿನಲ್ಲೇ ಹುಟ್ಟಿತು ಪ್ರೀತಿ! ಪೆರೋಲ್ ಪಡೆದು ಮದುವೆ!
ಶನಿವಾರ ಬೆಳಗ್ಗೆ ಶಶಾಂಕ್ನನ್ನು ಅವನ ತಂದೆ ರಂಗನಾಥ್ ಅವರೇ ಡ್ರಾಪ್ ಮಾಡಿದ್ದರು. ವಾಪಸ್ ಮನೆಗೆ ಬರಲು ಶಶಾಂಕ್ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಯುವತಿಯ ಕಡೆಯವರು ಅವನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಶಶಾಂಕ್ನ ಕೈಕಾಲು ಕಟ್ಟಿ, ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ಅಷ್ಟಕ್ಕೂ ಬಿಡದೆ ಅವನ ಮೈಮೇಲೆಲ್ಲ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾರೆ. ಶಶಾಂಕ್ನ ಇಡಿ ಮೈ ಸುಟ್ಟು ಹೋಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.