Site icon Vistara News

MLA Dadesugooru | ವೃದ್ಧೆಗಲ್ಲ, ನನ್ನ ಕಾರು ಡಿಕ್ಕಿ ಹೊಡೆದಿದ್ದು ನಾಯಿಗೆ; ನಾಯಿ ಅಪ್ಪಳಿಸಿ ವೃದ್ಧೆಯ ಸಾವು ಎಂದು ವಾದಿಸಿದ ಶಾಸಕ!

ಬಸವರಾಜ ದಡೇಸೂಗೂರು

ಕೊಪ್ಪಳ: ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಕಾರು ಡಿಕ್ಕಿಯಾಗಿ (MLA Dadesugooru) ವೃದ್ಧೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿಗಳಿಗೆ ಶಾಸಕರು ಪ್ರತಿಕ್ರಿಯಿಸಿ, ವೃದ್ಧೆ ನನ್ನ ಕಾರು ಡಿಕ್ಕಿಯಾಗಿ ಮೃತಪಟ್ಟಿಲ್ಲ. ನನ್ನ ಕಾರು ನಾಯಿಗೆ ಡಿಕ್ಕಿ ಹೊಡೆಯಿತು. ಆಗ ನಾಯಿ ಎಗರಿ ಆ ವೃದ್ಧೆಯ ಮೇಲೆ ಬಿತ್ತು. ಹಾಗಾಗಿ ವೃದ್ಧೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿವರಣೆ ನೀಡಿದ್ದಾರೆ.

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಕ್ರಾಸ್ ಬಳಿ ಮಂಗಳವಾರ ಮಧ್ಯಾಹ್ನ ಈ ಅಪಘಾತ ನಡೆದಿದ್ದು, ಮರಿಯಮ್ಮ‌ ನಾಯಕ (70) ಎಂಬವರು ಮೃತಪಟ್ಟಿದ್ದರು. ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮದ ನಿವಾಸಿಯಾಗಿರುವ ಮಹಿಳೆ ರಸ್ತೆ ದಾಟುತ್ತಿದ್ದಾಗ ಶಾಸಕರ ಕಾರು ಡಿಕ್ಕಿಯಾಗಿದೆ ಎಂದು ದೂರಲಾಗಿದೆ.

ಆದರೆ, ದಡೇಸೂಗೂರು ಅವರು ಹೇಳುವ ಪ್ರಕಾರ, ವೃದ್ಧೆಗೆ ಅವರ ಕಾರು ಡಿಕ್ಕಿಯಾಗಿಲ್ಲ. ಕಾರು ನಾಯಿಗೆ ಡಿಕ್ಕಿ ಹೊಡೆದಿತ್ತು. ಆ ರಭಸಕ್ಕೆ ನಾಯಿ ವೃದ್ಧೆಯ ಮೇಲೆ ಎಗರಿ ಬಿದ್ದಿದೆ. ನಾಯಿ ಬಿದ್ದ ಪರಿಣಾಮ ವೃದ್ಧೆಗೆ ಗಾಯವಾಗಿತ್ತು. “”ನಾನು ಕಾರಿನಿಂದ ಇಳಿದು ಮುದುಕಿಯನ್ನು ಕಾರಟಗಿ ಆಸ್ಪತ್ರೆಗೆ ಕಳುಹಿಸಿದೆ. ಮಾನವೀಯತೆ ದೃಷ್ಟಿಯಿಂದ ನಾನು ಸಹಾಯ ಮಾಡಿದ್ದೇ ತಪ್ಪಾಗಿದೆʼʼ ಎಂದು ಹೇಳಿಕೊಂಡಿದ್ದಾರೆ. ನಾನು ಮೃತ ವೃದ್ಧೆ ಕುಟುಂಬಕ್ಕೆ ವೈಯಕ್ತಿಕವಾಗಿ ಸಹಾಯ ಮಾಡುವೆ ಎಂದು ಹೇಳಿದ್ದಾರೆ ದಡೇಸೂಗೂರು. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident | ಅಯ್ಯೋ ದುರ್ವಿಧಿಯೇ! ಒಂದೇ ದಿನಾಂಕದಂದು ಅಣ್ಣ-ತಮ್ಮನ ಮೃತ್ಯು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Exit mobile version