Site icon Vistara News

ಕಿತ್ತೂರು ಕೋಟೆ ಸಮೀಪದಲ್ಲೆ ಅರಮನೆ ನಿರ್ಮಾಣಕ್ಕೆ ಪ್ರಾಶಸ್ತ್ಯ: ಶಾಸಕ‌ ದೊಡ್ಡಗೌಡರ

ಕಿತ್ತೂರು ಕೋಟೆ

ಬೆಳಗಾವಿ (ಚನ್ನಮ್ಮನ ಕಿತ್ತೂರು): ಈಗಿರುವ ರಾಣಿ ಚನ್ನಮ್ಮನ ಶಿಥಿಲ ಕೋಟೆ ಸಮೀಪದಲ್ಲೇ ಅರಮನೆ ಪ್ರತಿರೂಪ ನಿರ್ಮಾಣಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಸಾರ್ವಜನಿಕರ ಇಚ್ಛೆಯಂತೆ ಕೋಟೆ ಸಮೀಪದಲ್ಲೇ ನಿರ್ಮಾಣವಾಗಲಿ ಎಂಬ ಆಸೆಯೂ ನನ್ನದಾಗಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದ್ದಾರೆ.

ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಅರಮನೆ ನಿರ್ಮಾಣದ ವಿಷಯವನ್ನು ಸಾರ್ವಜನಿಕರೊಂದಿಗೆ ಚರ್ಚಿಸಲು ಗ್ರಾಮದೇವಿ ದೇವಸ್ಥಾನದಲ್ಲಿ ಸಭೆ ಕರೆಯಲಾಗಿತ್ತು. ಅಲ್ಲಿ ಈ ಸಂಗತಿಗೆ ಹೆಚ್ಚು ಮಹತ್ವ ನೀಡಲಾಗಿತ್ತು ಎಂದು ಹೇಳಿದರು.

ಅಂದು ನಡೆದ ಸಭೆಯಲ್ಲಿ, ಕೋಟೆ ಸಮೀಪದಲ್ಲಿರುವ ಜಮೀನುಗಳ ಮಾಲೀಕರು ಭಾಗವಹಿಸಿದ್ದರು. ನಮಗೆ ಭೂಮಿ ಇರುವುದೇ ಇಲ್ಲಿ. ಅದಕ್ಕಾಗಿ ಹೆಚ್ಚು ಹಣ ನೀಡಬೇಕು ಎಂದು ಮನದಾಸೆ ವ್ಯಕ್ತಪಡಿಸಿದ್ದರು, ಇದು ಸ್ವಾಭಾವಿಕವೂ ಆಗಿತ್ತು. ಈ ಸಭೆಯ ಬಳಿಕ ನಡೆದ ಮಾತುಕತೆಯಲ್ಲಿಯೂ ಧಾರಣಿ ಬಗ್ಗೆ ಚರ್ಚೆ ನಡೆಯಿತು. ಆದರೆ ಸಂಧಾನಕ್ಕೆ ಬರಲಾಗಲಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | ಮಂಡ್ಯ ಎಸ್‌ಪಿಗೆ ತಟ್ಟಿದ ಪ್ರತಿಭಟನೆ‌ ಬಿಸಿ; ಕಾಲ್ನಡಿಗೆಯಲ್ಲೇ ಡಿಸಿ ಕಚೇರಿಗೆ ತಲುಪಿದರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅರಮನೆ ಕನಸು ಬಿತ್ತಿದ್ದಾರೆ. ಕಿತ್ತೂರಿಗೆ ಏನಾದರೂ ಮಾಡಬೇಕೆಂಬ ಕಳಕಳಿ ಮತ್ತು ಪ್ರೀತಿ ಅವರಲ್ಲಿದೆ. ಹೀಗಾಗಿ ನಾಗರಿಕರ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು. ಭೂ ಮಾಲೀಕರಿಗೆ ಹೆಚ್ಚು ಪರಿಹಾರ ನೀಡುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಗುಂಟೆ ಭೂಮಿಯಿಲ್ಲ

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ವಂತದ್ದೆಂದು ಒಂದು ಗುಂಟೆ ಜಮೀನೂ ಇಲ್ಲ. ಅದಕ್ಕೆ ನಿವೇಶನ ಇರಲಿ ಎಂದು ಬಚ್ಚನಕೇರಿ ಬಳಿ ಭೂಮಿ ಕೇಳಲಾಗಿದೆ ಎಂದು ಮಹಾಂತೇಶ ದೊಡ್ಡಗೌಡರ ಹೇಳಿದರು. ಅರಮನೆ ಪುನರ್ ನಿರ್ಮಾಣ ಮಾಡಬೇಕು. ಪ್ರವಾಸೋದ್ಯಮ ಕೇಂದ್ರವನ್ನಾಗಿ ಕಿತ್ತೂರು ಅಭಿವೃದ್ಧಿ ಪಡಿಸಬೇಕೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಇದನ್ನು ರಾಜಕಾರಣಕ್ಕಾಗಿ ನಾನೇನೂ ಉಪಯೋಗ ಮಾಡಿಕೊಳ್ಳುತ್ತಿಲ್ಲ. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಕಿತ್ತೂರು ಅರಮನೆ ಮಾದರಿ ನಿರ್ಮಾಣ ಮತ್ತು ಅದರ ಸುತ್ತಲೂ ಸೌಂದರ್ಯೀಕರಣಕ್ಕೆ ಅಂದಾಜು 23 ಎಕರೆ ಭೂಮಿ ಬೇಕಾಗಿದೆ. ಇವೆಲ್ಲ ಕಾಮಗಾರಿ ನೆರವೇರಿಸಲು 113 ಕೋಟಿ ರೂ. ಅಂದಾಜು ವೆಚ್ಚ ತಗುಲಲಿದೆ ಎಂದು ಹೇಳಿದರು.

ಶಾಂತ ರೀತಿಯಲ್ಲಿ ಆ.೨ರಂದು ಬಂದ್ ಆಚರಿಸಿ
ಆ.2 ರಂದು ನಡೆಸಲಿರುವ ಕಿತ್ತೂರು ಬಂದ್ ಶಾಂತವಾಗಿರಲಿ. ಪ್ರತಿಭಟನಾಕಾರರು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿ ಬಳಿ ಮನವಿ ಸಲ್ಲಿಸಲಿ. ಇದರಿಂದ ನನಗೂ ಹೆಚ್ಚು ಬಲ ಸಿಕ್ಕಂತಾಗುತ್ತದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಬಂದ್ ಬಗ್ಗೆ ಪ್ರತಿಕ್ರಿಯಿಸಿದರು. ಕಿತ್ತೂರು ಕೋಟೆ ಸಮೀಪದಲ್ಲೇ ಅರಮನೆ ಮಾದರಿ ನಿರ್ಮಾಣವಾಗಬೇಕು ಎಂಬ ಇಲ್ಲಿಯ ಜನರ ಭಾವನೆಗಳನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಇದನ್ನೂ ಓದಿ | ಬಚ್ಚನಕೇರಿಯಲ್ಲಿ ಕಿತ್ತೂರು ಕೋಟೆ ನಿರ್ಮಾಣಕ್ಕೆ ವಿರೋಧ; ಆ.2ಕ್ಕೆ ಬಂದ್‌, ಬೃಹತ್‌ ಪ್ರತಿಭಟನೆಗೆ ತೀರ್ಮಾನ

Exit mobile version