Site icon Vistara News

Modi in Karnataka: ಮೇ 3ಕ್ಕೆ ಪ್ರಧಾನಿ ಮೋದಿ ಕಾರ್ಯಕ್ರಮ; ಐತಿಹಾಸಿಕ ಸಮಾವೇಶವಾಗಿಸಲು ರೂಪಾಲಿ ನಾಯ್ಕ ಕರೆ

MLA Rupali urges PM Modi rally to be unprecedented Modi in Karnataka updates

ಕಾರವಾರ: ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಕಾರವಾರ – ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ಆಗಮಿಸುತ್ತಿರುವುದು ಇಡಿ ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ತಿಳಿಸಿದರು.

ಕ್ಷೇತ್ರದ ವಿವಿಧೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ದೇಶದ ಪ್ರಧಾನಿಯೊಬ್ಬರು ಆಗಮಿಸುತ್ತಿದ್ದಾರೆ. ಕಾರವಾರ – ಅಂಕೋಲಾ ವಿಧಾನಸಭಾ ಕ್ಷೇತ್ರದ ಹಟ್ಟಿಕೇರಿಯಲ್ಲಿ ಮೇ 3ರ ಮಧ್ಯಾಹ್ನ 12 ಗಂಟೆಗೆ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನನ್ನ ಕ್ಷೇತ್ರದ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದೇನೆ ಎಂದು ಹೇಳಿದರು.

ಜಾಗತಿಕ ನಾಯಕರಾಗಿ ಭಾರತದ ಕೀರ್ತಿಯನ್ನು ದೇಶ, ವಿದೇಶಗಳಲ್ಲಿ ಎತ್ತಿ ಹಿಡಿದ ನರೇಂದ್ರ ಮೋದಿ ನಮ್ಮ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ನಮ್ಮ ಸುದೈವವೇ ಸರಿ. ಪ್ರಧಾನಿ ನರೇಂದ್ರ ಮೋದಿ ಅವರು ಈ ಜಿಲ್ಲೆಗೆ, ನಮ್ಮ ಕ್ಷೇತ್ರಕ್ಕೆ ಆಗಮಿಸುವುದರಿಂದ ಭವಿಷ್ಯದಲ್ಲಿ ಭಾಗ್ಯದ ಬಾಗಿಲು ತೆರೆಯಲಿದೆ. ಇಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಶಾಸಕಿ ರೂಪಾಲಿ ನಾಯ್ಕ

ಇದನ್ನೂ ಓದಿ: Karnataka Election 2023: ಕಾಂಗ್ರೆಸ್‌ನ ವಾರಂಟಿಯೇ ಮುಗಿದಿರುವಾಗ ಗ್ಯಾರಂಟಿಗಳಿಗೆ ಇನ್ನೆಲ್ಲಿ ಬೆಲೆ! ಪ್ರಧಾನಿ ಮೋದಿ ಲೇವಡಿ

ನರೇಂದ್ರ ಮೋದಿ ಅವರನ್ನು ನೋಡಬೇಕು ಅವರ ಮಾತುಗಳನ್ನು ಕೇಳಬೇಕು ಎಂದು ಜನತೆ ಉತ್ಸಾಹದಲ್ಲಿದ್ದರೂ ಅದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಈಗ ಅಂತಹ ಸುವರ್ಣ ಅವಕಾಶ ನಮಗೆ ಲಭ್ಯವಾಗಲಿದೆ. ಮೋದಿ ಅವರು ನಮ್ಮೆದುರೇ ಬಂದು ಮಾತನಾಡಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಹೊಸ ಉತ್ಸಾಹ, ಹೊಸ ಶಕೆ

ನರೇಂದ್ರ ಮೋದಿ ಅಂದರೆ ಅಭಿವೃದ್ಧಿ, ನರೇಂದ್ರ ಮೋದಿ ಅಂದರೆ ಭರವಸೆ. ಅವರ ಆಗಮನದಿಂದ ಇಡೀ ಕ್ಷೇತ್ರ, ಜಿಲ್ಲೆಯಲ್ಲಿ ಹೊಸ ಉತ್ಸಾಹ, ಹೊಸ ಶಕೆ ಆರಂಭವಾಗಲಿದೆ. ನರೇಂದ್ರ ಮೋದಿ ಅವರ ಕೊಡುಗೆಗಳು ಈಗಾಗಲೇ ಈ ಕ್ಷೇತ್ರದ ಮನೆ ಮನೆಗೂ ತಲುಪಿದೆ. ಈಗ ನರೇಂದ್ರ ಮೋದಿ ಅವರೇ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್ ಕಟೀಲ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರಾದ ಅನಂತಕುಮಾರ್ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಶಾಸಕರಾದ ದಿನಕರ ಶೆಟ್ಟಿ, ಸುನೀಲ್‌ ನಾಯ್ಕ, ಮಾಜಿ ಶಾಸಕ ಸುನೀಲ್‌ ಹೆಗಡೆ, ಎಂಎಲ್‌ಸಿ ಗಣಪತಿ ಉಳ್ವೇಕರ್, ಶಾಂತಾರಾಮ ಸಿದ್ದಿ ಮುಂತಾದ ಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಮೋದಿ ಕಾರ್ಯಕ್ರಮ ಯಶಸ್ಸಿಗಾಗಿ ದೇವರ ಮೊರೆ ಹೋದ ರೂಪಾಲಿ ನಾಯ್ಕ

ಪಕ್ಷದ ಕಾರ್ಯಕರ್ತರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಕ್ತಿ ಕೇಂದ್ರಗಳು ಹಾಗೂ ಎಲ್ಲ ಪದಾಧಿಕಾರಿಗಳು, ಪ್ರಮುಖರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪ್ರಮುಖರು ಇದ್ದರು.

ಇದನ್ನೂ ಓದಿ: Karnataka Election 2023: ಪ್ರಭು ರಾಮ ಆಯ್ತು, ಈಗ ಹನುಮನನ್ನು ಬಂಧಿಸಿಡಲು ಹೊರಟಿದೆ ಕಾಂಗ್ರೆಸ್: ಪಿಎಂ ಮೋದಿ

ಐತಿಹಾಸಿಕ ಸಮಾವೇಶವನ್ನಾಗಿಸಬೇಕು- ರೂಪಾಲಿ ನಾಯ್ಕ

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬರೂ ಆಗಮಿಸಿ ಮೋದಿ ಅವರು ನಡೆಸಲಿರುವ ಸಮಾವೇಶವನ್ನು ಯಶಸ್ವಿಗೊಳಿಸಬೇಕು. ವಿಶ್ವನಾಯಕ ಮೋದಿ ಅವರ ಸಮಾವೇಶವನ್ನು ಅಭೂತಪೂರ್ವವಾಗಿಸಬೇಕು. ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಎಲ್ಲ ಮುಖಂಡರು, ಜನತೆ ಒಂದಾಗಿ ಸೇರಿ ಇದೊಂದು ಐತಿಹಾಸಿಕ ಸಮಾವೇಶವನ್ನಾಗಿಸಬೇಕು ಎಂದು ರೂಪಾಲಿ ನಾಯ್ಕ ಮನವಿ ಮಾಡಿದರು.

Exit mobile version