ಆನೇಕಲ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ನಡೆಯುತ್ತಿರುವ ಇ.ಡಿ ವಿಚಾರಣೆಯನ್ನು ಖಂಡಿಸಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಇದು ಬಿಜೆಪಿಯ ಎಲೆಕ್ಷನ್ ಮ್ಯಾನೇಕ್ಮೆಂಟ್ ಸಿಸ್ಟಂ ಎಂದಿದ್ದಾರೆ.
ಆನೇಕಲ್ ಪುರಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ನಲಪಾಡ್, ಇ.ಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಆದರೆ, ಕಾಂಗ್ರೆಸ್ ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಬಿಜೆಪಿಯವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಇದರಲ್ಲಿ ಯಾವುದೇ ವಹಿವಾಟು ನಡೆದಿಲ್ಲ. ರಾಹುಲ್ ಗಾಂಧಿಯವರು ತಪ್ಪೇ ಮಾಡದೆ ಅವರಿಗೆ ನೋಟಿಸ್ ಕೊಟ್ಟಿರುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ| ದೇಶಾದ್ಯಂತ ಕೈ ಹೋರಾಟ; ವಾಹನಗಳನ್ನು ಸುಟ್ಟು, ಬ್ಯಾರಿಕೇಡ್ಗಳನ್ನು ಹತ್ತಿ ರಾಹುಲ್ ಗಾಂಧಿಗೆ ಬೆಂಬಲ
ಈ ಸರ್ಕಾರ ಬಂದ ದಿನದಿಂದಲೂ ಯಾವೊಬ್ಬ ಬಿಜೆಪಿ ನಾಯಕನಿಗೂ ನೋಟಿಸ್ ನೀಡಿಲ್ಲ. ಈ ಹಿಂದೆ ಕಾಂಗ್ರೆಸ್ನಲ್ಲಿ ಇದ್ದವರ ಮೇಲೆ ಐಟಿ, ಇಡಿ ಕೇಸ್ ಇತ್ತು. ಆದರೆ, ಅವರು ಬಿಜೆಪಿಗೆ ಹೋದ ಮೇಲೆ ಅವರಿಗೆ ಯಾವ ನೋಟಿಸ್ ಸಹ ನೀಡಿಲ್ಲ, ವಿಚಾರಣೆಯೂ ಇಲ್ಲ. ಅವರೇನು ಗಂಗಾ ಸ್ನಾನ ಮಾಡಿದ್ದಾರ?. ಬಿಜೆಪಿ ಹೀಗೆ ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ನಲ್ಲಿ ಲಕ್ಷಾಂತರ ರಾಹುಲ್ ಗಾಂಧಿ ಇದ್ದಾರೆ, ನನ್ನಲ್ಲೂ ರಾಹುಲ್ ಗಾಂಧಿ ಇದ್ದಾರೆ. ಐ ಆಮ್ ರಾಹುಲ್ ಗಾಂಧಿ, ನಾಟ್ ಸಾವರ್ಕರ್. ಇದು ಇ.ಡಿ ಅಲ್ಲ ಇದು ಎಲೆಕ್ಷನ್ ಮ್ಯಾನೇಜ್ಮೆಂಟ್ ಸಿಸ್ಟಮ್ ಎಂದು ನಲಪಾಡ್ ಕಿಡಿಕಾರಿದರು.