Site icon Vistara News

Janapada University | ಕರ್ನಾಟಕ ಜಾನಪದ ವಿವಿಯ 100 ಎಕರೆಗೂ ಹೆಚ್ಚು ಭೂಮಿ ಒತ್ತುವರಿ; ಜಿಲ್ಲಾಡಳಿತಕ್ಕೆ ಮೊರೆ

Karnataka Janapada University old VV land encroachment

ಸುರೇಶ್‌ ನಾಯ್ಕ, ಹಾವೇರಿ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ (Janapada University) ೧66 ಎಕರೆ ಜಮೀನಿನಲ್ಲಿ 1೧೩ ಎಕರೆಗೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ. ಪ್ರಸ್ತುತ ವಿವಿ ಇರುವ ಪ್ರದೇಶದ ಹೊರತಾಗಿ ಉಳಿದ ಎಲ್ಲ ಕಡೆಯೂ ಒತ್ತುವರಿಯನ್ನು ಮಾಡಿಕೊಳ್ಳಲಾಗಿದೆ ಎಂದು ವಿವಿ ಆಡಳಿತ ಮಂಡಳಿ ಈಗ ಜಿಲ್ಲಾಡಳಿತದ ಕದ ತಟ್ಟಿದೆ.

ಜನಪದ ಕಲೆಯನ್ನು ಉಳಿಸಿ, ಬೆಳೆಸುವ ಮಹತ್ವಾಕಾಂಕ್ಷೆಯಿಂದ ೨೦೧೧ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ಪ್ರಾರಂಭ ಮಾಡಿತು. ಜಾನಪದ ಅಧ್ಯಯನಕ್ಕೆ ವಿಸ್ತೃತವಾದ ನೆಲೆಗಳನ್ನು ಒದಗಿಸುವ ಹಾಗೂ ಬಹುಭಾಷಾ ಸಂಸ್ಕೃತಿಯ ದೇಶವಾದ ಭಾರತದಲ್ಲಿ ಕನ್ನಡ ಸಂಸ್ಕೃತಿಯ ಕುರಿತು ಅರ್ಥಪೂರ್ಣವಾಗಿ ಅಧ್ಯಯನ ನಡೆಸುವುದು ಸೇರಿದಂತೆ ಜನಪದ ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ, ಕರಕುಶಲ ಕಲೆ, ಜನಪದ ವೈದ್ಯ ಪದ್ಧತಿ, ಆಹಾರ ಪಾನೀಯ, ಗುಡಿ ಕೈಗಾರಿಕೆ ಮೊದಲಾದ ಎಲ್ಲ ವಿಷಯಗಳನ್ನು ಒಳಗೊಂಡ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶವನ್ನು ಕಲ್ಪಿಸುವುದು ಹಾಗೂ ಇನ್ನಿತರ ಮಹದೊದ್ದೇಶದಿಂದ ಈ ವಿವಿಯನ್ನು ಪ್ರಾರಂಭ ಮಾಡಲಾಗಿತ್ತು. ಇದಕ್ಕಾಗಿ ೧೬೬ ಎಕರೆ ವಿಶಾಲ ಪ್ರದೇಶವನ್ನು ಮಂಜೂರು ಮಾಡಲಾಗಿತ್ತು.

ತಹಸೀಲ್ದಾರ್‌ಗೆ ಕುಲಸಚಿವರು ಬರೆದಿರುವ ಪತ್ರ

ಈಗ ವಿಶ್ವ ವಿದ್ಯಾಲಯವನ್ನು ಕಟ್ಟಿಕೊಂಡಿರುವ 52 ಎಕರೆ ಜಾಗ ಮಾತ್ರ ವಿವಿ ಬಳಿ ಉಳಿದುಕೊಂಡಿದೆ. ಉಳಿದ ಐದಾರು ಕಡೆಗಳಾದ ನಿಡಗುಂದಿ, ಸೋಮಾಪುರ, ರಾಷ್ಟ್ರೀಯ ಹೆದ್ದಾರಿ ೪ರ ಬಳಿ ಇರುವ ಜಾಗಗಳಲ್ಲಿ ಒತ್ತುವರಿಯಾಗಿರುವುದು ಈಗ ವಿವಿ ಗಮನಕ್ಕೆ ಬಂದಿದೆ. ಇನ್ನೂ ಹಲವಾರು ಕಡೆ ಒತ್ತುವರಿಯಾಗಿರುವ ಶಂಕೆ ಇದ್ದು, ಅಲ್ಲೆಲ್ಲ ಕಡೆ ವಿವಿ ಪರಿಶೀಲನೆ ನಡೆಸಲು ಮುಂದಾಗಿದೆ.

ಇದನ್ನೂ ಓದಿ | Voter data | ಚಿಲುಮೆ ಮಾದರಿಯಲ್ಲೇ ವಿಜಯಪುರದಲ್ಲೂ ಗೋಲ್‌ಮಾಲ್‌: ಸಿಕ್ಕಿಬಿದ್ದವನ ಹಿಂದಿದ್ದಾರಾ ಬಿಜೆಪಿ ನಾಯಕ ಯತ್ನಾಳ್‌?

ಜಿಲ್ಲಾಧಿಕಾರಿಗೆ ಪತ್ರ ಬರೆದ ಕುಲಸಚಿವರು
ಕರ್ನಾಟಕ ವಿಶ್ವ ವಿದ್ಯಾಲಯದ 113 ಎಕರೆಗೂ ಹೆಚ್ಚು ಜಾಗವು ಒತ್ತುವರಿಯಾಗಿದೆ. ಈ ಜಾಗವು ಕರ್ನಾಟಕ ಸರ್ಕಾರದಿಂದ ವಿವಿಗೆ ಮಂಜೂರಿಯಾಗಿರುವ ಪ್ರದೇಶವಾಗಿದೆ. ಗೊಟಗೋಡಿ, ಶೀಲವಂತ ಸೋಮಾಪುರ, ಹುಲಸೋಗಿ, ಅಡವಿಸೋಮಾಪುರ, ತಡಸ, ಗುಡಗೇರಿ, ಹಿರೇಬೆಂಡಿಗೇರಿ, ನಿಡಗುಂದಿ, ತಿಮ್ಮಾಪುರ ಗ್ರಾಮಗಳಲ್ಲಿ ಒತ್ತುವರಿಯಾಗಿದೆ. ಈ ಸಂಬಂಧ ದಾಖಲೆ ಸಲ್ಲಿಸಲಾಗಿದ್ದು, ಒತ್ತುವರಿಯಾಗಿರುವ ಸರ್ವೇ ನಂಬರ್‌ ಹೊಂದಿರುವ ಜಮೀನನ್ನು ಹದ್ದುಬಸ್ತು ಮಾಡಿಕೊಡುವಂತೆ ಮನವಿ ವಿವಿ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್‌ ಅವರು ತಹಸೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಒತ್ತುವರಿಯಾಗಿರುವ ಪ್ರದೇಶಗಳು ಯಾವುವು?
೧. ಗೊಟಗೋಡಿಯಲ್ಲಿರುವ ಸರ್ವೇ ನಂಬರ್ 116 ಎ ನಲ್ಲಿ 7 ಎಕರೆ 38 ಗುಂಟೆ
೨. ಗೊಟಗೋಡಿಯಲ್ಲಿರುವ ಸರ್ವೇ ನಂಬರ್ 116ಎ ನಲ್ಲಿ 45 ಎಕರೆ 38 ಗುಂಟೆ
೩. ಶೀಲವಂತ ಸೋಮಾಪುರದಲ್ಲಿ‌ ಸರ್ವೆ ನಂಬರ್ 51 ರಲ್ಲಿ 9 ಎಕರೆ 18 ಗುಂಟೆ
೪. ಹುಲಸೋಗಿಯಲ್ಲಿ ಸರ್ವೇ ನಂಬರ್ 107/ಅ ನಲ್ಲಿ 9 ಎಕರೆ 02 ಗುಂಟೆ
೫. ಅಡವಿಸೋಮಾಪುರದಲ್ಲಿರುವ ಸರ್ವೇ ನಂಬರ್ 76ರಲ್ಲಿ‌ 3 ಎಕರೆ 11 ಗುಂಟೆ
೬. ತಡಸದಲ್ಲಿರುವ ಸರ್ವೇ ನಂಬರ್ 168 ರಲ್ಲಿ 11 ಎಕರೆ 12 ಗುಂಟೆ
೭. ಗುಡಗೇರಿಯಲ್ಲಿರುವ ಸರ್ವೇ ನಂಬರ್ 16 ರಲ್ಲಿ 19 ಎಕರೆ 37 ಗುಂಟೆ
೮. ಹಿರೇಬೆಂಡಿಗೇರಿಯಲ್ಲಿ ಸರ್ವೇ ನಂಬರ್ 70/1ಅ ನಲ್ಲಿ 3 ಎಕರೆ 09 ಗುಂಟೆ
೯. ನಿಡಗುಂದಿಯಲ್ಲಿ ಸರ್ವೇ ನಂಬರ್ 42/1ಅ ನಲ್ಲಿರುವ 56 ಎಕರೆ 19 ಗುಂಟೆ
೧೦. ತಿಮ್ಮಾಪುರದ ಸರ್ವೇ ನಂಬರ್ 10ಎ ನಲ್ಲಿರುವ 1 ಎಕರೆ 33 ಗುಂಟೆ ಭೂಮಿ

ಹಾಲಿ ವಿವಿ ಸ್ಥಾಪನೆಗೊಂಡಿರುವ ಗೊಟಗೋಡಿಯಲ್ಲಿರುವ ಭೂಮಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಭೂ ಒತ್ತುವರಿಯಾಗಿದೆ ಎಂದು ವಿವಿ ದೂರಿದೆ. ಜಾನಪದ ವಿವಿ ಭೂಮಿಯಲ್ಲಿ ಜನರು ಉಳುಮೆ ಪ್ರಾರಂಭ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಎಲ್ಲ ಕಾರಣಗಳಿಂದ ಜಾಗವನ್ನು ಮರಳಿ ಕೊಡಿಸುವಂತೆ ಜಿಲ್ಲಾಡಳಿತದ ಮೊರೆ ಹೋಗಲಾಗಿದೆ.

ಸರ್ಕಾರಕ್ಕೆ ವರದಿ ನೀಡಲಾಗಿದೆ
ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಭೂಮಿ ಒತ್ತುವರಿಯಾಗಿದೆ. ಗೊಟಗೋಡಿಯಲ್ಲಿರುವ 52 ಎಕರೆ ಜಮೀನು ಹೊರತುಪಡಿಸಿ ಉಳಿದ ಕಡೆಗಳಲ್ಲಿರುವ ಭೂಮಿ ಒತ್ತುವರಿಯಾಗಿದೆ. ನಾನು ನಿಡಗುಂದಿ, ಸೋಮಲಾಪುರ ಸೇರಿದಂತೆ ಐದಾರು ಕಡೆ ಬೇಟಿ ನೀಡಿದ್ದೇನೆ. ಎಲ್ಲ ಜಮೀನು ಮೂಲ ಜಾಗವಾಗಿರದೆ, ಒತ್ತುವರಿಯಾಗಿದೆ. ಗೋವಿನಜೋಳ ಸೇರಿದಂತೆ ಇನ್ನಿತರ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಈ ಕುರಿತಾಗಿ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ವರದಿ ನೀಡಿದ್ದೇನೆ.
| ಟಿ.ಎಂ ಭಾಸ್ಕರ, ಕರ್ನಾಟಕ ಜಾನಪದ ವಿವಿ ಕುಲಪತಿ

ಇದನ್ನೂ ಓದಿ | Criminal politics | ಕ್ರಿಮಿನಲ್‌ ಹಿನ್ನೆಲೆ ಬಗ್ಗೆ ಫೈಟರ್‌ ರವಿಯಿಂದ ಮಾಹಿತಿ ಕೇಳಿದ ನಳಿನ್‌ ಕುಮಾರ್‌ ಕಟೀಲ್‌

Exit mobile version