Site icon Vistara News

DK Shivakumar: ತೆರಿಗೆ ಪಾವತಿಗೆ ಹೆಚ್ಚಿನ ಕಾಲಾವಕಾಶ, ಸರಳ ವಿಧಾನ: ಡಿಕೆಶಿ

DK Shivakumar

ಬೆಂಗಳೂರು: ಆಸ್ತಿ ತೆರಿಗೆಗೆ ಹೆಚ್ಚಿನ ಕಾಲಾವಕಾಶ ಹಾಗೂ ಅದರಲ್ಲಿರುವ ತೊಡಕುಗಳನ್ನು ನಿವಾರಣೆ ಮಾಡಲು ಅನೇಕ ಅರ್ಜಿಗಳು ಬಂದಿವೆ. ಹೀಗಾಗಿ ತೆರಿಗೆ ಪಾವತಿಗೆ ಕಾಲಾವಕಾಶ ಕಲ್ಪಿಸಿ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಭರವಸೆ ನೀಡಿದರು.

ಶಿವಾಜಿನಗರದ ಆರ್‌ಬಿಎಎನ್ಎಂಎಸ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ʼಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರʼ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಇಂದು ಅಹವಾಲು ತಂದಿರುವವರ ಪೈಕಿ ಅನೇಕರು ವಸತಿ ನಿವೇಶನಗಳಲ್ಲಿ ವಾಣಿಜ್ಯ ಕಟ್ಟಡಗಳನ್ನು ಕಟ್ಟಿದ್ದಾರೆ. ಇದಕ್ಕೆ ತೆರಿಗೆ ಹಾಗೂ ದಂಡ ಹೆಚ್ಚಾಗಿದೆ, ನಮಗೆ ಸಮಯಾವಕಾಶ ಬೇಕು ಎಂಬ ಮನವಿ ಸಲ್ಲಿಸುತ್ತಿದ್ದಾರೆ. ನಾಗರಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅವರಿಗೆ ಮತ್ತಷ್ಟು ಸಮಯಾವಕಾಶ ನೀಡುತ್ತೇವೆ. ಇನ್ನು ಸರಳ ವ್ಯವಸ್ಥೆ ಜಾರಿಗೆ ತರಲು ಅಗತ್ಯ ಕಾನೂನು ತಿದ್ದುಪಡಿ ಮಾಡುತ್ತೇವೆ. ನಾಗರಿಕರು ಕೂಡ ನಮಗೆ ಸಹಾಯ ಮಾಡಬೇಕು. ವಸತಿ ನಿವೇಶನಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಜನರು ಕೂಡ ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡಿ ಸಹಕಾರ ನೀಡಬೇಕು. ಆಗ ನಾವು ಕೂಡ ಜನರಿಗೆ ಸಹಾಯ ಮಾಡಬಹುದು ಎಂದು ತಿಳಿಸಿದರು.

ಜನರಿಗೆ ಎಷ್ಟು ದಿನ ಕಾಲಾವಕಾಶ ನೀಡುತ್ತೀರಿ ಎಂದು ಕೇಳಿದಾಗ, ಕೆಲವರಿಗೆ ಮೂರು ದಿನ, ಒಂದು ವಾರದಲ್ಲಿ ಪಾವತಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೂ ನಾವು ಹೋದ ಕಡೆಗಳಲ್ಲಿ ಜನರು ಈ ಬಗ್ಗೆ ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಕನ್ನಡದ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದೆ

ಸಚಿವ ಸಂಪುಟ ಸಭೆಯಲ್ಲಿ ಕನ್ನಡ ನಾಮಫಲಕ ವಿಚಾರವಾಗಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ಕೇಳಿದಾಗ, ಇದು ಕರ್ನಾಟಕ ಸರ್ಕಾರಕ್ಕೆ ಕನ್ನಡ ಭಾಷೆ ಬಗೆಗಿರುವ ಬದ್ಧತೆ. ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಬೇಕು. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮಾಡುತ್ತಿದ್ದು, ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಉಳಿದಂತೆ ಅವರು ಯಾವುದೇ ಭಾಷೆಯಲ್ಲಿ ಹಾಕಿಕೊಳ್ಳಲಿ. ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಬೇಕು. ವ್ಯಾಪಾರ ಮಾಡುವವರು ಕನ್ನಡ ತಾಯಿ ಹಾಗೂ ಭೂಮಿಗೆ ಗೌರವ ನೀಡಬೇಕು ಎಂದು ತಿಳಿಸಿದರು.

ಅಮಾಯಕರಿಗೆ ಅನ್ಯಾಯ ಆಗಬಾರದು

ಕೆ.ಜೆ ಹಳ್ಳಿ ಡಿ.ಜೆ ಹಳ್ಳಿ ಬಂಧಿತರ ಬಿಡುಗಡೆ ವಿಚಾರವಾಗಿ ಕುಟುಂಬಸ್ಥರ ಒತ್ತಾಯದ ಬಗ್ಗೆ ಕೇಳಿದಾಗ, ನಾವು ಏನೇ ಮಾಡಿದರೂ ಕಾನೂನು ವ್ಯಾಪ್ತಿಯಲ್ಲಿ ಮಾಡಬೇಕು. ಈ ಬಗ್ಗೆ ಹೆಚ್ಚು ಮಾತನಾಡಲು ಆಗುವುದಿಲ್ಲ. ಬಿಜೆಪಿ ಸರ್ಕಾರ ಕೆಲವು ಸೆಕ್ಷನ್‌ಗಳನ್ನು ಪ್ರಯೋಗ ಮಾಡಿರುವುದರಿಂದ ಅವರು ಹೊರಬರಲು ಆಗುತ್ತಿಲ್ಲ. ಕಾನೂನಿನ ಅಡಿಯಲ್ಲಿ ನ್ಯಾಯ ಒದಗಿಸಿಕೊಡಬೇಕು. ಈ ಬಗ್ಗೆ ಶಾಸಕರು ನಮ್ಮ ಬಳಿ ಚರ್ಚೆ ಮಾಡಿದ್ದು ಕಾನೂನು ತಂಡದ ಜತೆ ಮಾತನಾಡಿ ತೀರ್ಮಾನ ಮಾಡುತ್ತೇವೆ. ಕಾನೂನು ಕೈಗೆತ್ತಿಕೊಂಡವರ ವಿರುದ್ಧದ ಕ್ರಮಕ್ಕೆ ನಮ್ಮ ಅಭ್ಯಂತರವಿಲ್ಲ. ಕೆಲವು ಅಮಾಯಕರು ಇದರಲ್ಲಿ ಸಿಲುಕಿದ್ದಾರೆ ಎಂಬ ಕೂಗು ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಹೆಚ್ಚುವರಿ ಡಿಸಿಎಂ ವಿಚಾರವಾಗಿ ಹೈಕಮಾಂಡ್ ಉತ್ತರ

ಸರ್ಕಾರದಲ್ಲಿ ಮೂವರು ಡಿಸಿಎಂ ಮಾಡಬೇಕು ಎಂಬ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಕೇಳಿದಾಗ, ಹೆಚ್ಚುವರಿ ಡಿಸಿಎಂ ವಿಚಾರವಾಗಿ ಹೈ ಕಮಾಂಡ್ ನಾಯಕರು ಉತ್ತರ ನೀಡುತ್ತಾರೆ. ನಾನು ಆ ಬಗ್ಗೆ ಉತ್ತರ ನೀಡುವುದಿಲ್ಲ. ಸಂಸತ್ ಚುನಾವಣೆಯನ್ನು ಗೆಲ್ಲಬೇಕು. ಅದಕ್ಕಾಗಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ತಿಳಿಸಿದರು.

Exit mobile version