Site icon Vistara News

Murder Case : ಟಿವಿ ರಿಮೋಟ್‌ಗಾಗಿ ಅಣ್ಣ ತಮ್ಮಂದಿರ ಜಗಳ; ಸಿಟ್ಟಿಗೆದ್ದು ಮಗನನ್ನೇ ಕೊಂದ ತಂದೆ!

Murder case in chithradurga

ಮೊಳಕಾಲ್ಮುರು: ಟಿವಿ ರಿಮೋಟ್ ವಿಚಾರಕ್ಕಾಗಿ ಅಣ್ಣ ತಮ್ಮಂದಿರಿಬ್ಬರ ಮಧ್ಯೆ ನಡೆದ ಗಲಾಟೆಯಲ್ಲಿ ತಂದೆಯೇ ಮಗನನ್ನು ಕೊಲೆ (Murder Case) ಮಾಡಿರುವ ಘಟನೆಯು ಚಿತ್ರದುರ್ಗದ ಮೊಳಕಾಲ್ಮುರು ಪಟ್ಟಣದ ಎನ್‌ಎಂಎಸ್ ಬಡಾವಣೆಯಲ್ಲಿ ಶನಿವಾರ (ಅ.14) ರಾತ್ರಿರಂದು ನಡೆದಿದೆ.

ಪಟ್ಟಣದ ಎನ್‌ಎಂಎಸ್ ಬಡಾವಣೆ ನಿವಾಸಿಯಾದ ಲಕ್ಷ್ಮಣ ಬಾಬು ಎಂಬುವವರೇ ಸ್ವಂತ ಮಗನನ್ನು ಕೊಲೆ ಮಾಡಿರುವ ಆರೋಪಿ ಆಗಿದ್ದಾರೆ. ಲಕ್ಷ್ಮಣ ಅವರ ಮೊದಲ ಮಗ ಚಂದ್ರಶೇಖರ್ (16) ಮತ್ತು 2ನೇ ಮಗ ಪವನ್ ಕುಮಾರ್ (14) ಇಬ್ಬರು ಟಿವಿ ರಿಮೋಟ್‌ಗಾಗಿ ಕಳೆದ ರಾತ್ರಿ 8 ಗಂಟೆ ಸಮಯದಲ್ಲಿ ಜಗಳವಾಡುತ್ತಿದ್ದರು.

ಇದನ್ನೂ ಓದಿ: Murder Case: ಎದುರಾಳಿಗಳ ಮಚ್ಚಿನೇಟಿಗೆ ರೌಡಿಶೀಟರ್‌ ಸಾವು

ಆಗ ತಂದೆ ಲಕ್ಷ್ಮಣಬಾಬು ಜಗಳ ಮಾಡದಂತೆ ಹೇಳಿದ್ದಾರೆ. ಆದರೂ ಇವರಿಬ್ಬರು ತಮ್ಮ ಜಗಳವನ್ನು ಮುಂದುವರಿಸಿದ್ದಾರೆ. ಮಕ್ಕಳು ಮಾತು ಕೇಳಲಿಲ್ಲ ಎಂಬ ಸಿಟ್ಟಿಗೆ ಲಕ್ಷ್ಮಣ ಪಕ್ಕದಲ್ಲಿದ್ದ ಕತ್ತರಿಯನ್ನು ತೆಗೆದುಕೊಂಡಿದ್ದಾರೆ. ಬಳಿಕ ಚಂದ್ರಶೇಖರ್ ಕಡೆಗೆ ಬೀಸಿದ್ದರೆ, ಕತ್ತರಿಯೂ ಚಂದ್ರಶೇಖರನ ಕುತ್ತಿಗೆಯ ಬಲಭಾಗಕ್ಕೆ ಬಿದ್ದಿದೆ. ಕತ್ತರಿ ನೇರವಾಗಿ ಕುತ್ತಿಗೆಗೆ ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವವಾಗಿದೆ.

ತಾಯಿ ಲಕ್ಷ್ಮಿ ಅಡುಗೆ ಮನೆಯಿಂದ ಕಿರುಚುತ್ತಾ ಹೊರಬಂದು ಕೂಡಲೇ ಮಗನನ್ನು ಮೊಳಕಾಲ್ಮುರು ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ರಾಂಪುರ ಸಮೀಪದಲ್ಲಿ ಮೃತಪಟ್ಟಿದ್ದಾನೆ.

ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಲಕ್ಷ್ಮಣ ವಿರುದ್ಧ ಮೊಳಕಾಲ್ಮುರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಪಿಎಸ್ಐ ಪಾಂಡುರಂಗಪ್ಪ ಮತ್ತು ರಾಂಪುರ ಪಿಎಸ್ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೋಪದ ಕೈಗೆ ಬುದ್ದಿ ಕೊಟ್ಟ ತಂದೆ ಕೊಲೆಗಾರನಾಗಿದ್ದು ದುರಂತವೇ ಸರಿ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version