Site icon Vistara News

Murder case: 11, 13 ವರ್ಷ ಬಾಲಕಿಯರ ಮದುವೆಗೆ ಮುಂದಾದ ಪತ್ನಿ; ಹೇಳಿದರೂ ಕೇಳದ್ದಕ್ಕೆ ಕತ್ತು ಹಿಸುಕಿ ಕೊಂದ ಪತಿ

Woman murdered in Shahpur police station area

ಯಾದಗಿರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿದ್ದ ದಂಪತಿಯಲ್ಲಿ ಮಕ್ಕಳ ಮದುವೆ ವಿಷಯವಾಗಿ ಗಲಾಟೆ ನಡೆದಿದೆ. ಬಾಲಕಿಯರನ್ನು ಪತ್ನಿ ಮದುವೆ ಮಾಡಲು ಮುಂದಾಗಿದ್ದಾಳೆಂದು ತಿಳಿದ ಪತಿ ಆಕೆಯ ಕತ್ತು ಹಿಸುಕಿ ಕೊಲೆ (Murder case) ಮಾಡಿದ್ದಾನೆ. ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಶಹಾಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ದೋರನಹಳ್ಳಿ ಗ್ರಾಮದ ಲಕ್ಷ್ಮಿ (32) ಕೊಲೆಯಾದ ಮಹಿಳೆ. ಲಕ್ಷ್ಮಿ ಮತ್ತು ನಿಂಗಪ್ಪ ದಂಪತಿ ನಡುವೆ ಎರಡು ವರ್ಷದಿಂದ ಕೌಟುಂಬಿಕ ಕಲಹವಿದ್ದ ಹಿನ್ನೆಲೆಯಲ್ಲಿ ದಂಪತಿ ಬೇರೆ ಬೇರೆ ವಾಸವಾಗಿದ್ದರು. ಈ ಮಧ್ಯೆ ಪತ್ನಿ ಲಕ್ಷ್ಮಿ‌ ತನ್ನ 13 ವರ್ಷದ ಮತ್ತು 11 ವರ್ಷದ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಮುಂದಾಗಿದ್ದಳು, ದಿನಾಂಕವು ಸಹ ನಿಗದಿಯಾಗಿತ್ತು ಎಂದು ಹೇಳಲಾಗಿದೆ. ಇದಕ್ಕೆ ತೀವ್ರ ಕೋಪಗೊಂಡಿದ್ದ ಪತಿ ನಿಂಗಪ್ಪ , ಪತ್ನಿ ಲಕ್ಷ್ಮಿ ವಾಸವಿದ್ದ ಮನೆಗೆ ಮಂಗಳವಾರ ರಾತ್ರಿ ಆಗಮಿಸಿದ್ದಾನೆ. ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಪತ್ನಿ ರಾತ್ರಿ ಮಲಗಿದ್ದಾಗ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: Actor Sharwanand: ನಿಶ್ಚಿತಾರ್ಥ ಮುರಿದುಬಿದ್ದ ಸುದ್ದಿ ಬೆನ್ನಲ್ಲೇ ಮದುವೆಗೆ ಸಜ್ಜಾದ ನಟ ಶರ್ವಾನಂದ್!

ಸ್ಥಳಕ್ಕೆ ಶಹಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೃತ ಲಕ್ಷ್ಮಿ ಸಹೋದರ ಶಹಾಪುರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪಿ ನಿಂಗಪ್ಪನನ್ನು ಶಹಾಪುರ ಪೊಲೀ‌ಸರು ಬಂಧಿಸಿದ್ದಾರೆ.

Exit mobile version