Site icon Vistara News

Murder Case : ನೀನೇ ನನ್ನುಸಿರು ಎಂದವ ಉಸಿರುಗಟ್ಟಿಸಿ ಕೊಂದ; ಆತ್ಮಹತ್ಯೆಯೆಂದು ಬಿಂಬಿಸಲಾಗದೆ ಓಡಿ ಹೋದ!

bangalore murder case

ಬೆಂಗಳೂರು: ಇಲ್ಲಿನ ಜೀವನ್ ಬಿಮಾನಗರದ ಕೋಡಿಹಳ್ಳಿ ಬಳಿ ಇರುವ ಪ್ಯಾರಡೈಸ್ ಅಪಾರ್ಟ್ಮೆಂಟ್‌ನಲ್ಲಿ (Paradise Apartment) ಹೈದರಾಬಾದ್‌ ಮೂಲದ ಯುವತಿಯೊಬ್ಬಳು ಪ್ರಿಯಕರನಿಂದಲೇ (Murder case) ಹತ್ಯೆಯಾಗಿದ್ದಾಳೆ. ಆಕಾಂಕ್ಷ ವಿದ್ಯಾಸಾಗರ್ (23) ಮೃತ ದುರ್ದೈವಿ. ಅರ್ಪಿತ್ ಗುರಿಜಾಲ ಕೊಲೆ ಆರೋಪಿ.

ಹೈದರಾಬಾದ್ ಮೂಲದ ಆಕಾಂಕ್ಷ, ದೆಹಲಿ ಮೂಲದ ಅರ್ಪಿತ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಒಟ್ಟಿಗೆ ಬೆಂಗಳೂರಲ್ಲಿ ವಾಸವಾಗಿದ್ದ ಇವರು ಇತ್ತೀಚೆಗೆ ಬೇರೆಯಾಗಬೇಕು ಎಂದು ಮಾತಾಡಿಕೊಂಡಿದ್ದರು. ಆದರೆ ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಹಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಅದೇ ರೀತಿ ನಿನ್ನೆ ಸೋಮವಾರ ರಾತ್ರಿಯೂ (ಜೂ.5) ಇಬ್ಬರ ನಡುವೆ ಜಗಳ ನಡೆದಿದೆ.

ಹತ್ಯೆಯಾದ ಆಕಾಂಕ್ಷ ಹಾಗೂ ಹತ್ಯೆ ಮಾಡಿದ ಅರ್ಪಿತ್‌ ಗುರಿಜಾಲ

ಜಗಳ ವಿಕೋಪಕ್ಕೆ ತಿರುಗಿದ್ದು ಅರ್ಪಿತ್‌ ಸಿಟ್ಟಿನಲ್ಲಿ ಅಕಾಂಕ್ಷಳ ಕುತ್ತಿಗೆಗೆ ಬಟ್ಟೆ ಕಟ್ಟಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಹತ್ಯೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಲು ನೇಣು ಹಾಕಿಕೊಂಡಿರುವ ರೀತಿ ಬಿಂಬಿಸಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗದೇ ಮೃತದೇಹವನ್ನು ನೆಲದ ಮೇಲೆಯೇ ಬಿಟ್ಟು, ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿ ಆಗಿದ್ದಾನೆ.

ರಾತ್ರಿ ಮತ್ತೊಬ್ಬ ರೂಮೆಂಟ್ ಕೆಲಸ ಮುಗಿಸಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೊದಲು ಅನುಮಾನಾಸ್ಪದ ಸಾವು ಎಂದು ಪೊಲೀಸರು ಶಂಕಿಸಿದ್ದರು. ಸ್ಥಳ ಪರಿಶೀಲನೆ ಬಳಿಕ ಕೊಲೆ ಎಂಬುದು ತಿಳಿದು ಬಂದಿದೆ. ಸದ್ಯ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಅರ್ಪಿತ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹಂತಕನ ಪತ್ತೆಗಾಗಿ ತಂಡ ರಚಿಸಿದ ಪೊಲೀಸರು

ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ಆಕಾಂಕ್ಷ ವಿದ್ಯಾಸಾಗರ್ ಬಿ.ಕಾಂ ವ್ಯಾಸಂಗ ಮುಗಿಸಿ ಸೇಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಆಕಾಂಕ್ಷ ಹಾಗೂ ಅರ್ಪಿತ್‌ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಕೆಲಸ ಬದಲಾವಣೆ ಮಾಡಿ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರು. ಆರೋಪಿಯು ಯುವತಿಯನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಆರೋಪಿಯ ಬಂಧನದ ಬಳಿಕ ಮತ್ತಷ್ಟು ಮಾಹಿತಿ ಬೆಳಕಿಗೆ ಬರಲಿದೆ. ಆರೋಪಿ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version