Site icon Vistara News

Murder Case: ಪ್ರೇಯಸಿಯ ಪತಿಯನ್ನು ಇರಿದು ಕೊಂದ ಪ್ರೇಮಿ; ಈಗ ಜೈಲಿನಲ್ಲಿ ಬಂಧಿ

Murder Case

Murder Case 18

ಬೆಂಗಳೂರು: ಇಲ್ಲಿನ ಮಹದೇವಪುರದ ಶಿವನ ದೇವಾಲಯ ಬಳಿ ವ್ಯಕ್ತಿಯೊಬ್ಬ ತಾನು ಏಕಮುಖ ಪ್ರೇಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯ ಪತಿಯನ್ನು ಚಾಕುವಿನಿಂದ ಇರಿದು ಹತ್ಯೆ (Murder Case) ಮಾಡಿದ್ದಾನೆ. ಉದಯ್ ಕುಮಾರ್ ಮೃತ ದುರ್ದೈವಿ. ಅನ್ವರ್ ಖಾನ್‌ ಕೊಲೆಗಾರ.

ಉದಯ್ ಕುಮಾರ್ ಅವರ ಪತ್ನಿ ಪ್ರಿಯಾ ಮತ್ತು ಅನ್ವರ್‌ ಖಾನ್‌ ನಡುವೆ ಪ್ರೇಮ ಸಂಬಂಧವಿತ್ತು. ಆದರೆ, ತನಗೆ ಮದುವೆಯಾಗಿ ಮಕ್ಕಳಿವೆ ಎಂದು ಪ್ರಿಯಾ ಅನ್ವರ್‌ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೆ ಅನ್ವರ್‌ನ ಸ್ನೇಹವನ್ನು ಮುಂದುವರಿಸಿದ್ದಳು. ಈ ನಡುವೆ ನನ್ನ ಪತಿ ಉದಯ್‌ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಾನೆ ಎಂದು ಪ್ರಿಯಾ ಅನ್ವರ್‌ ಬಳಿ ಕಷ್ಟ ತೋಡಿಕೊಂಡಿದ್ದಳು.

ಉದಯ್‌ ಕುಮಾರ್‌ ವೃತ್ತಿಯಲ್ಲಿ ಮೆಕ್ಯಾನಿಕ್‌ ಆಗಿದ್ದ. ಇದನ್ನೇ ನೆಪ ಮಾಡಿಕೊಂಡ ಅನ್ವರ್‌, ನನ್ನ ಬೈಕ್‌ ರಿಪೇರಿ ಮಾಡಿಸಬೇಕು. ನಿನ್ನ ಪತಿಯ ಫೋನ್‌ ನಂಬರ್‌ ಕೊಡು ಎಂದು ಪ್ರಿಯಾಳಿಂದ ನಂಬರ್‌ ಪಡೆದುಕೊಂಡಿದ್ದ. ಬಳಿಕ ಗುರುವಾರ ರಾತ್ರಿ (ಮೇ 18) ಅನ್ವರ್‌ ಫೋನ್ ಮಾಡಿ ಬೈಕ್ ರಿಪೇರಿ ಇದೆ ಎಂದು ಉದಯ್‌ನನ್ನು ಕರೆಸಿಕೊಂಡಿದ್ದ.

ಈ ವೇಳೆ ಅನ್ವರ್‌ ಯಾಕೆ ನೀನು ನಿನ್ನ ಪತ್ನಿಗೆ ಕುಡಿದು ಹಿಂಸೆ ಕೊಡುವೆ ಎಂದು ಉದಯ್‌ಗೆ ಅವಾಜ್ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಉದಯ್‌, ನನ್ನ ಪತ್ನಿ ಬಗ್ಗೆ ಇದೆಲ್ಲ ಕೇಳಲು ನೀನು ಯಾರೋ ಎಂದು ಕೇಳಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಇದರಿಂದ ಸಿಟ್ಟಿಗೆದ್ದ ಅನ್ವರ್‌, ಏಕಾಏಕಿ ತನ್ನ ಬಳಿ ಇದ್ದ ಚಾಕುವಿನಿಂದ ಇರಿದು ಉದಯ್‌ನನ್ನು ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: Fire Accident : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌; 2 ಮನೆ, 3 ಬಸ್‌ಗಳು ಭಸ್ಮ

ಸದ್ಯ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪತ್ನಿ ಪ್ರಿಯಾ ಸಹ ಈ ಸಂಚಿನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version