Site icon Vistara News

Murder Case : ಹಣದಾಸೆಗೆ ಪತ್ನಿಗೆ ವಿಷ ಕುಡಿಸಿದ ಪತಿ!

lalbi and kasim kahan

ಕಲಬುರಗಿ: ಕಲಬುರಗಿ ತಾಲೂಕಿನ ಸಿಂದಗಿ ಬಿ ಗ್ರಾಮದಲ್ಲಿ ಹಣದ ಆಸೆಗೆ ಪತ್ನಿಯನ್ನೇ ಪಾಪಿ ಪತಿ ಕೊಂದಿದ್ದಾನೆ. ಲಾಲ್ ಬಿ (35) ಮೃತ ದುರ್ದೈವಿ.

ಲಾಲ್‌ ಬಿ ಪತಿ ಖಾಸಿಂ ಸಾಬ್ ಎಂಬಾತ ವಿಷ ಕುಡಿಸಿ ಕೊಲೆಗೈದಿದ್ದಾನೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯಲ್ಲಿ ಪದೇಪದೆ ಕಳ್ಳತನ‌ ಮಾಡುತ್ತಾಳೆ ಎಂದು ಆರೋಪ ಮಾಡಿದ್ದರು. ಜತೆಗೆ ಮತ್ತೊಂದು ಮದುವೆ ಮಾಡಿಕೊಳ್ಳುವುದಾಗಿ ಖಾಸಿಂ ಕಿರುಕುಳ ನೀಡುತ್ತಿದ್ದ‌ ಎಂದು ಆರೋಪಿಸಿದ್ದಾರೆ.

ಶನಿವಾರವೂ ಇದೇ ವಿಷಯಕ್ಕೆ ಗಲಾಟೆ ನಡೆದಿದ್ದು, ಮನೆಯಲ್ಲಿ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಸಬರ್ ಬನ್ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಾರಾಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಕೊಲೆ

ಬೆಂಗಳೂರಿನ ಸಂಪಿಗೇಹಳ್ಳಿಯ ಕೋಗಿಲು ಲೇಔಟ್‌ನಲ್ಲಿ ವ್ಯಕ್ತಿಯ ಬರ್ಬರ ಹತ್ಯೆಯಾಗಿದೆ. ಶಕೀಲ್ ಅಕ್ತರ್ (28) ಹತ್ಯೆಯಾದವನು. ಶಕೀಲ್‌ನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಸೈಟ್‌ವೊಂದರ ಪಿಟ್ ಗುಂಡಿಯಲ್ಲಿ ಹಾಕಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎದುರಾಳಿಗಳ ಮಚ್ಚಿನೇಟಿಗೆ ರೌಡಿಶೀಟರ್‌ ಸಾವು

ರಾಮನಗರ: ಇಲ್ಲಿನ ಕೆರೆಮೇಗಲದೊಡ್ಡಿ ಗ್ರಾಮದಲ್ಲಿ ರೌಡಿಶೀಟರ್‌ ಬರ್ಬರವಾಗಿ (Murder Case) ಕೊಲೆಯಾಗಿದ್ದಾನೆ. ಎದುರಾಳಿಗಳು ನಡುರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರದಿಂದ ಕೊಚ್ಚಿ ಹಲ್ಲೆ ಮಾಡಿದ್ದಾರೆ. ಲೋಕೇಶ್ (34) ಮೃತ ರೌಡಿ ಶೀಟರ್.

ಲೋಕೇಶ್ ಮನೆ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಮನಬಂದಂತೆ ಹೊಡೆದು ಹತ್ಯೆ ಮಾಡಿದ್ದಾರೆ. ಕೊಲೆಯ ಕುರಿತು ನಿಖರ ಕಾರಣಗಳು ತಿಳಿದು ಬಂದಿಲ್ಲ. ಲೋಕೇಶ್‌ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.

ನಿರ್ಜನ ಪ್ರದೇಶದಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ರಾಯಚೂರು ಹೊರವಲಯದ ಯರಮರಸ್ ಬಳಿಯಿರುವ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವ (Murder case) ಪತ್ತೆಯಾಗಿದೆ. ಅತ್ಯಾಚಾರವೆಸಗಿ ಬಳಿಕ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು 28-30 ವರ್ಷದ ಆಸುಪಾಸಿನ ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 3-4 ದಿನಗಳ ಹಿಂದೆಯೇ ಘಟನೆ ನಡೆದಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version