Site icon Vistara News

Murder Case : ತಂದೆಯನ್ನೇ ಕೊಂದ ಮಗ; ರೌಡಿಶೀಟರ್‌ನ ಕೊಚ್ಚಿ ಕೊಲೆ

Road accident

ವಿಜಯಪುರ : ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ತಂದೆಯನ್ನೇ ಕೊಂದು (murder case) ಹಾಕಿರುವ ಘಟನೆ ವೆಂಕಟೇಶ ನಗರದಲ್ಲಿ ನಡೆದಿದೆ. ರಮೇಶ ಕೂಡಿಗನೂರ ಹತ್ಯೆಯಾದವರು.

ಆರೋಪಿ ಅಮೀತ್‌

ರಮೇಶ ಕೂಡಿಗನೂರ ಅವರ ಮಗ ಅಮೀತ್ ಕೂಡಿಗನೂರ ಎಂಬಾತನೇ ಆರೋಪಿಯಾಗಿದ್ದಾನೆ. ರಮೇಶ ನಿದ್ರೆಗೆ ಜಾರಿದ ನಂತರ ಅಮೀತ್ ಹತ್ಯೆಗೈದು ಪರಾರಿ ಆಗಿದ್ದಾನೆ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.

ರೌಡಿಶೀಟರ್‌ನನ್ನು ಅಟ್ಟಾಡಿಸಿ ಕೊಂದರು

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ರೌಡಿಶೀಟರ್‌ನ ಭೀಕರ ಹತ್ಯೆ ಆಗಿದೆ. ಆಲಮೇಲ ಪಟ್ಟಣದ ನಿವಾಸಿ ರೌಡಿಶೀಟರ್ ಮಾಳಪ್ಪ ಮೇತ್ರಿ ಕೊಲೆಯಾದವನು. ಮಾಳಪ್ಪರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಿದ್ದಾರೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉಸಿರು ನಿಟ್ಟಿಸಿದ ಸ್ನೇಹಿತರು

ಬೆಂಗಳೂರಿನ ಕೆಂಗೇರಿ ರಾಮಸಂದ್ರದಲ್ಲಿ ಯುವಕನ ಕಿಡ್ನ್ಯಾಪ್‌ (Kidnaping Case) ಮಾಡಿ ಹತ್ಯೆ (Murder case) ಮಾಡಲಾಗಿದೆ. ಮೊಹಮ್ಮದ್ ತಾಹೀರ್ ಹತ್ಯೆಯಾದವನು. ಸೋಮವಾರ ತಡರಾತ್ರಿ (ಜು.10) ಮೊಹಮ್ಮದ್ ತಾಹೀರ್‌ನನ್ನು ಆತನ ಸೇಹಿತರೇ ಆಟೋದಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಕೆಂಗೇರಿ ಬಳಿ ಕರೆದುಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನ್ಯಾಮತ್ ಹಾಗೂ ಆತನ ಸ್ನೇಹಿತರು ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ.

ಚಂದ್ರಲೇಔಟ್ ಗಂಗೋಡನಹಳ್ಳಿ ನಿವಾಸಿ ಮೊಹಮ್ಮದ್‌ ತಾಹೀರ್ ಹಿಂದೂಸ್ತಾನ ಕಂಪೆನಿಯಲ್ಲಿ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತಾಹೀರ್‌ಗೆ ರಾತ್ರಿ 11 ಗಂಟೆಗೆ (ಜು.10) ನ್ಯಾಮತ್ ಹಾಗೂ ಸ್ನೇಹಿತರು ಫೋನ್‌ ಮಾಡಿ ಕರೆಸಿಕೊಂಡಿದ್ದಾರೆ. ನಾಯಂಡಹಳ್ಳಿ ಮೆಟ್ರೋ ಬಳಿ ಆಟೋದಲ್ಲಿ ಕಿಡ್ನ್ಯಾಪ್‌ ಮಾಡಿ ಕೆಂಗೇರಿ ಕಡೆ ಕರೆದುಕೊಂಡು ಹೋಗಿದ್ದಾರೆ.

ತಡರಾತ್ರಿ ಹೊರಗೆ ಹೋಗಿದ್ದ ಮಗ ಮನೆಗೆ ವಾಪಸ್‌ ಬಾರದೆ ಇದ್ದಾಗ ಗಾಬರಿಗೊಂಡ ತಾಹೀರ್‌ ತಂದೆ ಸೈಯದ್ ಮೆಹಬೂಬ್ ಮಗನಿಗೆ ಕರೆ ಮಾಡಿದ್ದಾರೆ. ಆದರೆ ತಾಹೀರ್ ಫೋನ್‌ ರಿಸೀವ್ ಮಾಡಿಲ್ಲ. ಬಳಿಕ ಮೆಹಬೂಬ್‌ ನ್ಯಾಮತ್ ಮನೆ ಬಳಿ ತೆರಳಿ ವಿಚಾರಿಸಿದ್ದಾರೆ. ನ್ಯಾಮತ್‌ನ ತಂದೆ ಕೂಡ ಫೋನ್‌ ಮಾಡಿ, ತಾಹೀರ್‌ನನ್ನು ವಾಪಸ್ ಕರೆತರುವಂತೆ ಹೇಳಿದ್ದಾರೆ. ಆದರೆ ಇವರ ಮಾತಿಗೆ ಕ್ಯಾರೆ ಎನ್ನದೆ ನ್ಯಾಮತ್‌ ಫೋನ್‌ ಕಾಲ್‌ ಕಟ್‌ ಮಾಡಿದ್ದಾನೆ.

ಇದನ್ನೂ ಓದಿ : Woman Death: ಮಹಿಳೆ ನೇಣಿನಿಂದ ಸಾವು, ಹೃದಯಾಘಾತ ಎಂದ ಪತಿ ಮನೆಯವರು

ತಾಹೀರ್‌ಗಾಗಿ ಪೋಷಕರು ಕೆಂಗೇರಿ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ ಮಗನ ಸುಳಿವು ಸಿಗದೆ ಇದ್ದಾಗ ಚಂದ್ರಲೇಔಟ್ ಪೊಲೀಸ್‌ ಠಾಣೆಯಲ್ಲಿ ಕಿಡ್ನ್ಯಾಪ್‌ ಕೇಸ್‌ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದಾಗ ಮಂಗಳವಾರ ಬೆಳಗ್ಗೆ (ಜು.12) ಕೆಂಗೇರಿ ಬಳಿಯ ಕೋಣಸಂದ್ರ ಕೆರೆ ಬಳಿ ತಾಹೀರ್‌ ಮೃತದೇಹ ಪತ್ತೆಯಾಗಿದೆ.

ಸದ್ಯ ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version