Site icon Vistara News

Murder Case : ಚಿಕ್ಕಮಗಳೂರಿನ ಚಾರ್ಮಾಡಿಯಲ್ಲಿ ಮೂರು ದಿನ ಹುಡುಕಿದರೂ ಸಿಗದ ಶರತ್‌ ಕಳೇಬರ; ಬರಿಗೈಲಿ ಪೊಲೀಸರು ವಾಪಸ್‌

sharat murder case ಚಾರ್ಮಾಡಿ ಘಾಟ್

ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಬೆಂಗಳೂರಿನ ಯುವಕ ಶರತ್ ಮೃತದೇಹದ ಅವಶೇಷಗಳನ್ನು ಹುಡುಕುತ್ತಿದ್ದ ಪೊಲೀಸರು ಬರಿಗೈಲಿ ವಾಪಸಾಗಿದ್ದಾರೆ. ಹೀಗಾಗಿ ಕೊಲೆ ಪ್ರಕರಣಕ್ಕೆ (Murder Case) ಸಂಬಂಧಪಟ್ಟಂತೆ ಪೊಲೀಸರಿಗೆ ಇನ್ನೂ ಮಹತ್ವದ ಸಾಕ್ಷ್ಯ ಲಭ್ಯವಾದಂತೆ ಆಗಲಿಲ್ಲ.

10ಕ್ಕೂ ಹೆಚ್ಚು ಪೊಲೀಸರ ಜತೆ 20ಕ್ಕೂ ಹೆಚ್ಚು ಸ್ಥಳೀಯರ ನೇತೃತ್ವದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಹುಡುಕಿದರೂ ಶವ ಸಿಗದ ಹಿನ್ನೆಲೆ ಮತ್ತೆ ಬರುವುದಾಗಿ ಹೇಳಿ ಬೆಂಗಳೂರಿಗೆ ಪೊಲೀಸರು ಹಿಂದಿರುಗಿದ್ದಾರೆ. ಬೆಂಗಳೂರಿನ ಕೋಣನಕುಂಟೆ ಮೂಲದ ಶರತ್ ಸಬ್ಸಿಡಿ ದರದಲ್ಲಿ ಕಾರು ಕೊಡಿ ಕೊಡಿಸುತ್ತೇನೆ ಎಂದು ಹಣ ಪಡೆದು ಕಾರು ಕೊಡಿಸದ ಹಿನ್ನೆಲೆಯಲ್ಲಿ ಹಣ ಕೊಟ್ಟವರು ಶರತ್‌ನನ್ನು ಅಪಹರಿಸಿ ಹಲ್ಲೇ ಮಾಡಿ ಕೊಲೆಗೈದಿದ್ದರು.

ಕೊಲೆಗೈದ ಬಳಿಕ ಮೃತ ದೇಹವನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. ಒಂಬತ್ತು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮೃತ ದೇಹಕ್ಕಾಗಿ ಮೂರು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಶೋಧ ನಡೆಸಿದ್ದರು. ಆದರೆ 9 ತಿಂಗಳು ಕಳೆದಿದ್ದರಿಂದ ಪೊಲೀಸರಿಗೆ ಮೃತದೇಹದ ಯಾವುದೇ ಕುರುಹುಗಳು ಸಹ ಪತ್ತೆಯಾಗಿಲ್ಲ. ಅಲ್ಲದೆ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಬೇಕಾದ ಹಿನ್ನೆಲೆಯಲ್ಲಿ ಮೃತ ದೇಹವನ್ನು ಶೋಧಿಸುವ ಕಾರ್ಯಾಚರಣೆಗೆ ಬ್ರೇಕ್ ಹಾಕಿ ಬೆಂಗಳೂರಿಗೆ ಬರಿಗೈಲಿ ಹಿಂದಿರುಗಿದ್ದಾರೆ.

ಚಾರ್ಮಾಡಿ ಘಾಟಿ ಸಾವಿರಾರು ಅಡಿ ಪ್ರಪಾತವನ್ನು ಹೊಂದಿದೆ. ಅಲ್ಲದೆ, ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶ ಇರುವುದರಿಂದ ಹುಡುಕುವುದು ಅಷ್ಟು ಸುಲಭವಲ್ಲ ಎಂಬ ಮಾತು ಸ್ಥಳೀಯರಿಂದ ಕೇಳಿಬಂದಿದೆ.

ಇದನ್ನೂ ಓದಿ | Karnataka Election : ಮುಂದುವರಿದ ಜೆ.ಪಿ. ನಡ್ಡಾ ಮಠ ಯಾತ್ರೆ; ಸಮುದಾಯ ಆಧಾರಿತ ಮತ ಬೇಟೆ ತೀವ್ರ

Exit mobile version