Site icon Vistara News

Murder Case : ಹೆತ್ತ ತಾಯಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದೇಬಿಟ್ಟ ದುರುಳ!

Crime sene

ಚಿತ್ರದುರ್ಗ: ಕುಡಿಯಲು ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ಪಾಪಿ ಮಗನೊಬ್ಬ ತಾಯಿಗೆ ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರೊಪ್ಪ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಂಜಿನಮ್ಮ (58) ಹತ್ಯೆಯಾದವರು. ಶಿವಾರೆಡ್ಡಿ (35) ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ.

ಶಿವಾರೆಡ್ಡಿ ಕುಡಿತದ ಚಟಕ್ಕೆ ಬಿದ್ದಿದ್ದ. ಹಗಲು ರಾತ್ರಿಯನ್ನದೇ ಕುಡಿಯುವುದೇ ವೃತ್ತಿಯನ್ನಾಗಿಸಿಕೊಂಡಿದ್ದ. ಕಂಠಪೂರ್ತಿ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ತಾಯಿ ಅಂಜಿನಮ್ಮ ಬೇಸತ್ತು ಹೋಗಿದ್ದರು. ಈ ನಡುವೆ ಶಿವಾರೆಡ್ಡಿ ಕುಡಿತಕ್ಕೆ ಹಣ ಕೊಡುವುದನ್ನು ಅಂಜಿನಮ್ಮ ನಿಲ್ಲಿಸಿದ್ದರು.

ಆರೋಪಿ ಶಿವಾರೆಡ್ಡಿ

ಇದರಿಂದ ಸಿಟ್ಟಿಗೆದ್ದ ಶಿವಾರೆಡ್ಡಿ ಕುಡಿಯಲು ಹಣ ಕೊಡದಕ್ಕೆ ಹಾಗೂ ಸರಿಯಾದ ಸಮಯಕ್ಕೆ ಊಟ ನೀಡುತ್ತಿಲ್ಲ ಎಂದು ಕ್ಯಾತೆ ತೆಗೆದಿದ್ದ. ಮನೆ ಮುಂದಿನ ಕಟ್ಟೆ ಬಳಿ ಕುಳಿತುಕೊಂಡ ತಾಯಿಯ ಜತೆಗೆ ಗಲಾಟೆಗಿಳಿದ ಶಿವಾರೆಡ್ಡಿ, ನನ್‌ ಹೆಂಡ್ತಿ ಬಿಟ್ಟು ಹೋದ್ಮೇಲೆ, ನನಗೆ ಸರಿಯಾಗಿ ಊಟ ಹಾಕ್ತಿಲ್ಲ. ನೀನು ಇದ್ದು ಏನು ಪ್ರಯೋಜನ, ನಿನ್ನನ್ನು ಸಾಯಿಸಿದ್ರೆ ನನಗೆ ನೆಮ್ಮದಿ ಎಂದು ಸಿಟ್ಟಿಗೆದ್ದು ಈ ಮೊದಲೇ ತಂದಿದ್ದ ಚಾಕುವಿನಿಂದ ತಾಯಿಗೆ ಚುಚ್ಚಿ ಕೊಂದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಂಜಿನಮ್ಮಳನ್ನು ಕಂಡು ಸ್ಥಳೀಯರು ಕೂಡಲೇ ರಾಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಅಂಜಿನಮ್ಮ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಎಸ್‌ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಂಪುರ ಪೊಲೀಸರು ಆರೋಪಿ ಶಿವಾರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ತವರು ಮನೆ ಸೇರಿದ ಪತ್ನಿ

ಶಿವಾರೆಡ್ಡಿ ಸುಮಾರು 10 ವರ್ಷಗಳಿಂದ ಕುಡಿತದ ಚಟಕ್ಕೆ ಬಿದ್ದಿದ್ದ. ಈತನ ಚಟಕ್ಕೆ ಬೇಸತ್ತ ಪತ್ನಿ ಮೌನಿಕ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಳು.

ಇದನ್ನೂ ಓದಿ: ಅಪಘಾತ ಬಳಿಕ ವ್ಯಕ್ತಿಯ ಜೀವ ಉಳಿಸಿದ ಮೊಹಮ್ಮದ್‌ ಶಮಿ; ಎಷ್ಟು ಸಲ ಹೃದಯ ಗೆಲ್ತೀರಿ ಎಂದ ಜನ

ಕಂಡಕ್ಟರ್‌ಗೆ ಚಾಕು ಇರಿದು ‘ಪ್ರವಾದಿ ಮೊಹಮ್ಮದ್‌’ಗೆ ಅವಮಾನ ಎಂದ ಮುಸ್ಲಿಂ ಯುವಕನಿಗೆ ಗುಂಡೇಟು!

ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮುಸ್ಲಿಂ ಯುವಕನೊಬ್ಬ ಚಲಿಸುತ್ತಿದ್ದ ಬಸ್‌ನಲ್ಲಿಯೇ ಕಂಡಕ್ಟರ್‌ಗೆ ಚಾಕು (Cleaver) ಇರಿದ ಘಟನೆ ನಡೆದಿದೆ. ಬಸ್‌ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಬಸ್‌ ಕಂಡಕ್ಟರ್‌ ಹಾಗೂ 20 ವರ್ಷದ ಯುವಕನ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ ಯುವಕ ಲಾರೆಬ್‌ ಹಶ್ಮಿ (Lareb Hashmi) ಎಂಬಾತನು ಕಂಡಕ್ಟರ್‌ಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ್ದಾರೆ. ಸದ್ಯ ಕಂಡಕ್ಟರ್‌ ಹಾಗೂ ಲಾರೆಬ್‌ ಹಶ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಡಿಯೊ ಪೋಸ್ಟ್‌ ಮಾಡಿದ ಯುವಕ

ಹರಿಕೇಶ್‌ ವಿಶ್ವಕರ್ಮ (24) ಎಂಬ ಕಂಡಕ್ಟರ್‌ಗೆ ಬಸ್‌ನಲ್ಲಿಯೇ ಚಾಕು ಇರಿದ ವ್ಯಕ್ತಿಯು ಕಾಲೇಜು ಕ್ಯಾಂಪಸ್‌ಗೆ ಓಡಿ ಹೋಗಿದ್ದಾನೆ. ಓಡಿ ಹೋಗುತ್ತಲೇ ವಿಡಿಯೊ ರೆಕಾರ್ಡ್‌ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಆತ, “ಪ್ರವಾದಿ ಮೊಹಮ್ಮದ್‌ ಅವರಿಗೆ ಅವಮಾನ ಮಾಡಿದ ಕಾರಣ ಬಸ್‌ ಕಂಡಕ್ಟರ್‌ಗೆ ಚಾಕು ಇರಿದಿದ್ದೇನೆ” ಎಂದಿದ್ದಾನೆ. ವಿಡಿಯೊ ವೈರಲ್‌ ಆಗುತ್ತಲೇ ಪೊಲೀಸರು ಯುವಕನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇದರ ಕುರಿತು ಬಸ್‌ ಚಾಲಕ ಪ್ರತಿಕ್ರಿಯಿಸಿದ್ದು, “ಬಸ್‌ ತುಂಬ ಜನ ಇದ್ದರು. ಇದೇ ವೇಳೆ ಯುವಕನು ಬಸ್‌ ಕಂಡಕ್ಟರ್‌ಗೆ ಚಾಕು ಇರಿದು ಪರಾರಿಯಾಗಿದ್ದಾನೆ” ಎಂದಿದ್ದಾರೆ.

“ಮುಸ್ಲಿಮರ ಕುರಿತು ಬಸ್‌ ಕಂಡಕ್ಟರ್‌ ಅವಹೇಳನಕಾರಿಯಾಗಿ ಮಾತನಾಡಿದ. ಇದೇ ಕಾರಣಕ್ಕೆ ನಾನು ಅವನಿಗೆ ಚಾಕು ಇರಿದು ಹಲ್ಲೆ ನಡೆಸಿದೆ. ಅವನು ಶೀಘ್ರದಲ್ಲಿಯೇ ಸತ್ತು ಹೋಗುತ್ತಾನೆ. ಭಾರತದಿಂದ ಫ್ರಾನ್ಸ್‌ವರೆಗೆ, ಯಾರು ಪ್ರವಾದಿ ಮೊಹಮ್ಮದರಿಗೆ ಅವಮಾನ ಮಾಡುತ್ತಾರೋ, ಅವರನ್ನು ಕೊಂದು ಹಾಕುತ್ತೇನೆ” ಎಂದು ಲಾರೆಬ್‌ ಹಶ್ಮಿ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾನೆ. ಯುವಕನ ಕೃತ್ಯದ ಕುರಿತು ಈಗ ಪರ-ವಿರೋಧ ಚರ್ಚೆಯಾಗುತ್ತಿವೆ. ಟಿಕೆಟ್‌ ವಿಚಾರಕ್ಕೆ ಅಷ್ಟೇ ಜಗಳ ನಡೆದಿದೆ ಎಂಬುದಾಗಿ ಕೆಲ ಪ್ರಯಾಣಿಕರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗರಾಜ್‌ ಡಿಸಿಪಿ ಅಭಿನವ್‌ ತ್ಯಾಗಿ ಮಾಹಿತಿ ನೀಡಿದ್ದಾರೆ. “ಲಾರೆಬ್‌ ಹಶ್ಮಿ ಯು ಹಾಜಿಗಂಜ್‌ ನಿವಾಸಿಯಾಗಿದ್ದಾನೆ. ಈತನು ಯುನೈಟೆಡ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ ವಿದ್ಯಾರ್ಥಿಯಾಗಿದ್ದಾನೆ. ಈತನು ಹಲ್ಲೆ ಮಾಡಿರುವ ಕುರಿತು ಮಾಹಿತಿ ಲಭ್ಯವಾಗುತ್ತಲೇ ಪೊಲೀಸರು ಕಾಲೇಜಿಗೆ ತೆರಳಿದ್ದಾರೆ. ಇದೇ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದು, ಎನ್‌ಕೌಂಟರ್‌ ಮಾಡಿ ಆತನನ್ನು ಬಂಧಿಸಲಾಗಿದೆ” ಎಂದು ಹೇಳಿದ್ದಾರೆ. ಲಾರೆಬ್‌ ಹಶ್ಮಿಯ ತಂದೆ ಮೊಹಮ್ಮದ್‌ ಯೂನಸ್‌ ಅವರು ಪೌಲ್ಟ್ರಿ ಫಾರ್ಮ್‌ ಮಾಲೀಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version