Site icon Vistara News

Murder case : ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆಯ ಕೊಲೆ; ವರದಕ್ಷಿಣೆಗಾಗಿ ಕೊಂದು ಹಾಕಿದರೇ?

Woman murder story

#image_title

ಕಲಬುರಗಿ: ಕೇವಲ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮಹಿಳೆಯ ಕತ್ತುಹಿಸುಕಿ ಕೊಲೆ ಮಾಡಲಾಗಿದೆ (Murder case) ಎಂದು ಆರೋಪಿಸಲಾಗಿದೆ.

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಾನಂದ ರಾಜು ಅಟ್ಟದಮನಿ (22) ಮೃತಪಟ್ಟವರು. ಮಹಾನಂದ ಅವರನ್ನು ಗಂಡನ ಮನೆಯವರಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ, ವರದಕ್ಷಿಣೆಗಾಗಿ ಕಿರುಕುಳ ನೀಡಿ ಸಾಯಿಸಲಾಗಿದೆ ಎನ್ನುವುದು ಅವರ ತವರು ಮನೆಯವರ ದೂರು.

ಮಹಾನಂದ ಅವರು ಮೂಲತಃ ಜೇವರ್ಗಿ ತಾಲೂಕಿನ ಹಂದನೂರ ಗ್ರಾಮದ ನಿವಾಸಿ. ಅವರನ್ನು ವರ್ಷದ ಹಿಂದೆ ಹೊನ್ನಕಿರಣಗಿ ಗ್ರಾಮದ ರಾಜು ಅಟ್ಟದಮನಿ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ಮದುವೆ ಸಂದರ್ಭದಲ್ಲಿ ಸಾಕಷ್ಟು ಹಣ ಮತ್ತು ಒಡವೆ ನೀಡಲಾಗಿದ್ದರು ರಾಜು ಅಟ್ಟದಮನಿ ಮತ್ತು ಮನೆಯವರು ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ. ಮದುವೆಯಾದ ಬಳಿಕ ಸರಿಯಾಗಿ ಊಟ ಕೊಡದೆ ಸತಾಯಿಸುತ್ತಿದ್ದರು ಎಂಬ ಆರೋಪವಿದೆ.

ಈ ನಡುವೆ, ಮದುವೆ ವಾರ್ಷಿಕೊತ್ಸವಕ್ಕೆ ಬಂಗಾರ ನೀಡುವಂತೆ ಅಳಿಯ ರಾಜು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬಂಗಾರ ಕೊಡದ ಹಿನ್ನಲೆಯಲ್ಲಿ ರಾಜು ಮತ್ತು ಆತನ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗಂಡ ರಾಜು ಮತ್ತು ಮನೆಯವರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಕೋಳಿ ಪದಾರ್ಥದ ವಿಷಯದಲ್ಲಿ ಜಗಳ; ಮಗನನ್ನು ಬಡಿಗೆಯಿಂದ ಹೊಡೆದು ಕೊಂದ ತಂದೆ

ಕಡಬ (ದಕ್ಷಿಣ ಕನ್ನಡ ಜಿಲ್ಲೆ): ಸಣ್ಣ ಸಣ್ಣ ಸಂಗತಿಗಳಿಗೂ ಕೆಲವರು ತಮ್ಮ ವಿವೇಕವನ್ನು ಕಳೆದುಕೊಳ್ಳುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲೂ ಅಂತಹುದೇ ಒಂದು ಘಟನೆ ನಡೆದಿದೆ. ಸಿಟ್ಟಿನ ಭರದಲ್ಲಿ ತಂದೆಯೊಬ್ಬ ತನ್ನ ಮಗನನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೆ ಕಾರಣವಾದ ಅಂಶ ತುಂಬಾ ಸಣ್ಣದು. ಮನೆಯಲ್ಲಿ ಕೋಳಿ ಪದಾರ್ಥ ಮಾಡಿದ್ದರು. ಅದು ತಾನು ಬರುವಾಗ ಖಾಲಿ ಆಗಿತ್ತೆಂದು ಮಗ ಸಿಟ್ಟಿಗೆದ್ದಿದ್ದ. ತಂದೆ ಮತ್ತು ಮಗನ ನಡುವೆ ಜಗಳ ಶುರುವಾಗಿದೆ. ಅದು ಸಾವಿನಲ್ಲಿ (Murder case) ಅಂತ್ಯವಾಗಿದೆ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ಈ ಘಟನೆ ನಡೆದಿದೆ. ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಎಂಬಾತನೇ ತನ್ನ ಮಗ ಶಿವರಾಮ (32) ನನ್ನು ಬಡಿಗೆಯಿಂದ ಬಡಿದು ಕೊಂದವನು. ಅವರಿಬ್ಬರ ನಡುವೆ ಕೋಳಿ ಪದಾರ್ಥಕ್ಕೆ ಸಂಬಂಧಿಸಿ ಆರಂಭವಾದ ಜಗಳ ಕೊನೆಗೆ ಮಾತಿಗೆ ಮಾತು ಬೆಳೆದು ತಂದೆಯಿಂದ ಮಗನ ಹತ್ಯೆ ನಡೆದಿದೆ.

ಕೊಲೆಯಾದ ಮಹಾನಂದ ಮತ್ತು ಪತಿ ರಾಜು

ಈ ಜಗಳ ನಡೆದಿದ್ದು ಮಂಗಳವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ. ಶೀನ ಅವರ ಮನೆಯಲ್ಲಿ ಮಂಗಳವಾರ ಕೋಳಿ ಪದಾರ್ಥ ಮಾಡಿದ್ದರು. ಆದರೆ, ರಾತ್ರಿ ಶಿವರಾಮ ಮನೆಗೆ ಬರುವ ಹೊತ್ತಿಗೆ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಆಕ್ಷೇಪಿಸಿ ಶಿವರಾಮ ಮಾತನಾಡತೊಡಗಿದ.

ಕೋಳಿ ಪದಾರ್ಥ ಖಾಲಿಯಾಗಿದ್ದು ಯಾಕೆ ಎನ್ನುವ ವಿಚಾರದಲ್ಲಿ ತಂದೆ ಸಾಕಷ್ಟು ವಿಚಾರಗಳನ್ನು ಹೇಳಿದರೂ ಮಗ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ತಂದೆ ಶೀನ ಮತ್ತು ಮಗ ಶಿವರಾಮನ ನಡುವೆ ಜಗಳ ಆರಂಭವಾಯಿತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದರೆನ್ನಲಾಗಿದೆ.

ಏಟು ಬಲವಾಗಿ ಬಿದ್ದು ತಲೆಯ ಬುರುಡೆ ಒಡೆದಿದ್ದು, ಇದರಿಂದ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ಹೇಳಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮನ ಮೃತ ದೇಹ ಕಡಬ ಆಸ್ಪತ್ರೆಯಲ್ಲಿ ಇಡಲಾಗಿದೆ.

ಇದನ್ನೂ ಓದಿ : Pocso Case : 18 ವರ್ಷದೊಳಗಿನ ಬಾಲಕಿ ಪ್ರೀತಿಗೆ ಅನುಮತಿಸಬಹುದೇ ಹೊರತು ದೈಹಿಕ ಸಂಪರ್ಕಕ್ಕಲ್ಲ ಎಂದ ಕೋರ್ಟ್‌

Exit mobile version