Site icon Vistara News

ಕೆ.ಎಸ್‌. ಈಶ್ವರಪ್ಪಗೆ ಬೆದರಿಕೆ ಪತ್ರ; ಮುಸ್ಲಿಮರ ಬಗ್ಗೆ ಮಾತನಾಡಿದರೆ ನಾಲಿಗೆ ಕಟ್‌!

ಶಿವಮೊಗ್ಗ: ಮಾಜಿ ಸಚಿವ, ಶಾಸಕ ಕೆ ಎಸ್‌ ಈಶ್ವರಪ್ಪಗೆ ಅನಾಮಧೇಯ ವ್ಯಕ್ತಿಯೋರ್ವ ಬೆದರಿಕೆ ಪತ್ರ ಬರೆದಿದ್ದು, ಮುಸ್ಲಿಮರ ಹಾಗೂ ಟಿಪ್ಪು ಸುಲ್ತಾನ್‌ ಬಗ್ಗೆ ಮಾತನಾಡಿದರೆ ನಾಲಿಗೆ ಕಟ್‌ ಮಾಡಲಾಗುವುದು ಎಂದು ಎಚ್ಚರಿಸಿದ್ದಾನೆ. ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಈ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ.

ಬೆದರಿಕೆ ಪತ್ರದ ಕುರಿತು ಈಶ್ವರಪ್ಪ ಅವರ ಆಪ್ತ ಸಹಾಯಕ ದೂರು ನೀಡಿದ್ದಾರೆ. ನಗರದ ಮಲ್ಲೇಶ್ವರ ನಗರ ಮುಖ್ಯ ರಸ್ತೆಯಲ್ಲಿರುವ ಈಶ್ವರಪ್ಪ ಅವರ ನಿವಾಸಕ್ಕೆ ಈ ಪತ್ರವನ್ನು ಕಳುಹಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ಬೆದರಿಕೆ ಪತ್ರದಲ್ಲಿ “ಸ್ವಾತಂತ್ರ್ಯ ಸೇನಾನಿಯಾದ ನಮ್ಮ ಸಮಾಜದ ಟಿಪ್ಪು ಸುಲ್ತಾನ್‌ ಬಗ್ಗೆ ಮುಸ್ಲಿಂ ಗೂಂಡಾ ಎಂದು ಹೇಳಿದಿಯಾ, ಹಾವೇರಿ ಜಿಲ್ಲೆ ವ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ನಮ್ಮ ಮುಸ್ಲಿಮರ ಸಿಮೆಂಟ್ ಬ್ರಿಕ್ಸ್‌ ಬೇಕು. ಆದರೆ ನಿನಗೆ ಮುಸ್ಲಿಮರು ಬೇಡ. ಮಗನೇ ನಾಚಿಕೆಯಾಗಬೇಕು, ನಾಲಿಕೆ ಕಟ್‌ ಮಾಡುತ್ತೇವೆ, ಬಾಲ ಬಿಚ್ಚಬೇಡ ” ಎಂದು ಕೆ.ಎಸ್‌.ಈಶ್ವರಪ್ಪಗೆ ಬೆದರಿಕೆ ಹಾಕಲಾಗಿದೆ.

ಬೆದರಿಕೆ ಪತ್ರ ಹೀಗಿದೆ;

ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ ಎಂದ ಈಶ್ವರಪ್ಪ
ಬೆದರಿಕೆ ಪತ್ರ ಬಂದಿರುವ ಕುರಿತು ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯಿಸಿ, ನಾನು ಟಿಪ್ಪು ಸುಲ್ತಾನ್‌ಗೆ ಮುಸ್ಲಿಂ ಗೂಂಡಾ ಎಂದು ಹೇಳಿಕೆ ನೀಡಿರುವುದಾಗಿ ಹಾಗೂ ನಾಲಿಗೆ ಕಟ್‌ ಮಾಡುವುದಾಗಿ ಬೆದರಿಕೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಈ ರೀತಿಯ ಗೊಡ್ಡು ಬೆದರಿಕೆಗಳಿಗೆ, ಹೇಡಿಗಳು ಬರೆಯುವ ಪತ್ರಗಳಿಗೆ ನಾನು ಹೆದರಲ್ಲ, ಬೆದರಲ್ಲ. ಆದರೂ ಈ ರೀತಿಯ ಪತ್ರ ಬರೆದಿರುವ ಹೇಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಸ್‌ಪಿಗೆ ದೂರು ನೀಡಿರುವುದಾಗಿ ತಿಳಿಸಿದರು.

ಎಲ್ಲ ಮುಸಲ್ಮಾನರಿಗೆ ಗೂಂಡಾಗಳು ಎಂದು ನಾನು ಕರೆದಿಲ್ಲ. ಗೂಂಡಾಗಿರಿ, ಕೊಲೆ, ದರೋಡೆ ಮಾಡುವ ಮುಸಲ್ಮಾನರ ಬಗ್ಗೆ ಮುಸ್ಲಿಂ ಗೂಂಡಾಗಳು ಎಂದು ಹೇಳಿದ್ದೇನೆ. ಆದರೆ ಇದು ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎಂಬಂತೆ ಗೂಂಡಾಗಿರಿ ಮಾಡುವ ಹೇಡಿಗಳು ಈ ಪತ್ರ ಬರೆದಿದ್ದಾರೆ. ಆ ಪದ ಬಳಕೆಯಿಂದ ಬೇಸರಗೊಂಡವನು ಗೂಂಡಾ ಎಂದು ಭಾವಿಸಿಕೊಂಡು ನನಗೆ ಪತ್ರ ಬರೆದಿದ್ದಾನೆ. ಈ ಹಿಂದೆ ವಿದೇಶದಿಂದಲೂ ಬೆದರಿಕೆ ಬಂದಿತ್ತು. ನನಗೆ ಯಾವ ರೀತಿಯ ಭದ್ರತೆ ಬೇಕಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ವೀರ ಸಾವರ್ಕರ್‌ ಕುರಿತ ಸತ್ಯವನ್ನು ಎಲ್ಲರಿಗೂ ತಿಳಿಸಲು ಪುಸ್ತಕ ಪ್ರಕಟಿಸಿದ್ದೇವೆ ಎಂದ ಚಕ್ರವರ್ತಿ ಸೂಲಿಬೆಲೆ

Exit mobile version