Site icon Vistara News

ಕಾರ್ಯಕರ್ತರ ಸಭೆಯಲ್ಲಿ ನಿದ್ದೆಗೆ ಜಾರಿದ ಕಟೀಲ್;‌ ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆ ಎಂದು ಕಾಂಗ್ರೆಸ್‌ ವ್ಯಂಗ್ಯ

ಕಟೀಲ್

ಬಾಗಲಕೋಟೆ: ಜಿಲ್ಲೆಯ ಇಳಕಲ್‌ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿ ಹಲವು ನಾಯಕರು ನಿದ್ದೆಗೆ ಜಾರಿದ್ದಾರೆ. ಇದಕ್ಕೆ ಚಿಂತೆ ಇಲ್ಲದವರಿಗೆ ಸಂತೆಯಲ್ಲಿ ನಿದ್ದೆ ಎಂದು ಕೆಪಿಸಿಸಿ ವ್ಯಂಗ್ಯ ಮಾಡಿದೆ.

ಇಳಕಲ್ ನಗರದ ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹುನಗುಂದ ಮತ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ‌ ಭಾಷಣದ ವೇಳೆ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚಂದ್ರಶೇಖರ ಕವಟಗಿ ಸೇರಿ ಕೆಲ ಬಿಜೆಪಿ ಮುಖಂಡರು ವೇದಿಕೆಯ ಮೇಲೆಯೇ ನಿದ್ದೆಗೆ ಜಾರಿದ್ದಾರೆ.

ಕಾರ್ಯಕರ್ತರು ವೇದಿಕೆ ಅಲ್ಲಾಡಿಸುವ ಮುನ್ನ ಎಚ್ಚರವಾಗಿ
ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕಾರ್ಯಕರ್ತರ ಸಭೆಯಲ್ಲಿ ನಿದ್ದೆಗೆ ಜಾರಿದ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್, ಚಿಂತೆ ಇಲ್ಲದವರಿಗೆ ಸಂತೆಯಲ್ಲಿ ನಿದ್ದೆ, ಚಿಂತನೆ ಇಲ್ಲದವರಿಗೆ ವೇದಿಕೆಯಲ್ಲೇ ನಿದ್ದೆ! ಸುಳ್ಯದಲ್ಲಿ ಕಾರು ಅಲ್ಲಾಡಿಸಿದಂತೆ ಇಲ್ಲಿ ನಿಮ್ಮ ಕಾರ್ಯಕರ್ತರು ವೇದಿಕೆ ಅಲ್ಲಾಡಿಸುವ ಮುನ್ನ ಎಚ್ಚರವಾಗಿಬಿಡಿ! ಅಧ್ಯಕ್ಷರಿಗೆ ಪ್ರತಿ ರಾತ್ರಿ ಬಿಟ್‌ ಕಾಯಿನ್ ಕನಸು ಬೀಳುವುದರಿಂದ ನಿದ್ದೆ ಬರುವುದಿಲ್ಲವೋ ಏನೋ ಎಂದು ವ್ಯಂಗ್ಯವಾಗಿ ಟೀಕಿಸಿದೆ.

ಇದನ್ನೂ ಓದಿ | ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಸೇರಲಿದ್ದಾರೆ: ನಳಿನ್‌ ಕುಮಾರ್ ಕಟೀಲ್‌

Exit mobile version