Site icon Vistara News

Namma Clinic | ರಾಜ್ಯದಲ್ಲಿ 437 ನಮ್ಮ ಕ್ಲಿನಿಕ್ ಆರಂಭಿಸಲು ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ‌

Namma Clinic

ಹಾವೇರಿ: ರಾಜ್ಯದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಈ ವರ್ಷ ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಅತ್ಯಧಿಕ ಹಣವನ್ನು ಬಜೆಟ್‌ನಲ್ಲಿ ನೀಡಿದ್ದು, ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ 437 ನಮ್ಮ ಕ್ಲಿನಿಕ್ (Namma Clinic) ಆರಂಭ ಮಾಡುತ್ತಿದ್ದೇವೆ. ಯಾವುದಾದರೂ ಸಣ್ಣ ಪುಟ್ಟ ರೋಗ ಬಂದರೆ ಜನರು ಮುಖ್ಯ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ನಮ್ಮ ಕ್ಲಿನಿಕ್‌ಗೆ ಹೋದರೆ ಅಲ್ಲಿ ಔಷಧ, ಉಪಚಾರ ಮಾಡುವ ವ್ಯವಸ್ಥೆ ನಾವು ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಜಿಲ್ಲೆಯ ಶಿಗ್ಗಾಂವಿಯಲ್ಲಿ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಪಟ್ಟಣದ 100 ಬೆಡ್‌ ಆಸ್ಪತ್ರೆಯನ್ನು ಮೆಲ್ದರ್ಜೆಗೇರಿಸುತ್ತಿದ್ದೇವೆ. ಇದು ಈ ಹಿಂದೆ 50 ಬೆಡ್‌ ಆಸ್ಪತ್ರೆಯಾಗಿತ್ತು. 2008-2009ರಲ್ಲಿ 100 ಬೆಡ್‌ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರ್ಪಡಿಸಲಾಗಿತ್ತು. ಈಗ 14 ವೈದ್ಯರು ಜತೆಗೆ ಎಲ್ಲ ವ್ಯವಸ್ಥೆಯೊಂದಿಗೆ ಐಸಿಯು, ಎನ್.ಐ.ಸಿ.ಯು ಮತ್ತು ಡಯಾಲಿಸಿಸ್ ಇರುವಂತಹ ಆಸ್ಪತ್ರೆಯಾಗಿ ತನ್ನ ಸೇವೆ ಸಲ್ಲಿಸುತ್ತಿದೆ. ಜನಸಂಖ್ಯೆ ಹೆಚ್ಚಾಗಿದ್ದರಿಂದ ಇದನ್ನು 250 ಬೆಡ್‌ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ಹೇಳಿದರು.

ಈ ಆಸ್ಪತ್ರೆಯಿಂದ ವಿಶೇಷವಾಗಿ ಬಡವರಿಗೆ ಅನುಕೂಲವಾಗುತ್ತದೆ. ಈ ವರ್ಷ ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಅತ್ಯಧಿಕ ಹಣವನ್ನು ಬಜೆಟ್‌ ನೀಡಿದೆ. ಸುಮಾರು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು ಜನಸಂಖ್ಯೆ ಹೆಚ್ಚಿರುವ ತಾಲೂಕುಗಳಲ್ಲಿ ಮಾಡುವ ಯೋಜನೆ ಮಾಡುತ್ತಿದ್ದೇವೆ. 100 ಆಸ್ಪತ್ರೆಗಳನ್ನು ಇದೇ ವರ್ಷ ಮೇಲ್ದರ್ಜೆಗೇರಿಸಲಾಗುತ್ತಿದ್ದು, 60 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | ‌ವಚನಾನಂದ ಶ್ರೀ-ಯತ್ನಾಳ್‌ ನಡುವೆ ಜೋಕರ್‌-ಬ್ರೋಕರ್‌ ವಾರ್‌: ಸ್ವಾಮೀಜಿ ಬಣ್ಣ ಬಯಲು ಮಾಡುವೆ ಎಂದ ಶಾಸಕ

ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಒದಗಿಸಿ ರಾಜ್ಯದಲ್ಲಿ ಪ್ರತಿದಿನ 30 ಸಾವಿರದಿಂದ 60 ಸಾವಿರ ಸೈಕಲ್‌ಗೆ ಡಯಾಲಿಸಿಸ್ ಅನ್ನು ಹೆಚ್ಚಿಸಿದ್ದೇವೆ. 12 ಹೊಸ ಕ್ಯಾನ್ಸರ್ ಕೇಂದ್ರಗಳನ್ನು ನಾವು ಪ್ರಾರಂಭ ಮಾಡುತ್ತಿದ್ದೇವೆ. 60 ವರ್ಷ ಮೇಲ್ಪಟ್ಟವರ ಕಣ್ಣಿನ ತಪಾಸಣೆ ಮಾಡಿ, ಅವರಿಗೆ ಕನ್ನಡಕ ಕೊಡುವ ವ್ಯವಸ್ಥೆ ನಾವು ಇದೆ ವರ್ಷ ಮಾಡುತ್ತಿದ್ದೇವೆ. ಕಾಕ್ಲಿಯರ್ ಇಂಪ್ಲಾಂಟ್‌ಗೆ 500 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಹೀಗೆ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

1 ಕೋಟಿಗಿಂತ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಇದೊಂದು ದಾಖಲೆಯಾಗಿದೆ. ಅದೇ ರೀತಿ ಈ ಭಾಗದಲ್ಲಿ ಹೃದಯಸಂಬಂಧಿ ಸಮಸ್ಯೆ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆ ಸಹಯೋಗದಲ್ಲಿ ಮುಂದಿನ ತಿಂಗಳು ಹುಬ್ಬಳ್ಳಿಯಲ್ಲಿ ಆಸ್ಪತ್ರೆಗೆ ಅಡಿಗಲ್ಲು ಹಾಕುತ್ತಿದ್ದೇವೆ. ಬೆಳಗಾವಿಯಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಕಿದ್ವಾಯಿಯ ಪ್ರಮುಖ ಘಟಕವನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.

ಸವಣೂರಿನಲ್ಲಿ ಆರ್ಯುವೇದಿಕ್‌ ಕಾಲೇಜನ್ನು ಇದೇ ವರ್ಷ ಪ್ರಾರಂಭ ಮಾಡುತ್ತಿದ್ದೇವೆ.‌ ಮುಂದಿನ 15 ದಿನಗಳಲ್ಲಿ ಅದಕ್ಕೆ ನಾನು ಬಂದು ಅಡಿಗಲ್ಲು ಹಾಕುತ್ತೇನೆ. ಹಾವೇರಿ ಮೆಡಿಕಲ್ ಕಾಲೇಜು ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ಫೆಬ್ರವರಿ, ಮಾರ್ಚ್‌ನಲ್ಲಿ ಮೆಡಿಕಲ್ ಆರಂಭ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಇದರ ಜತೆಗೆ ಹಾವೇರಿಯಲ್ಲಿ 400 ಬೆಡ್‌ ದೊಡ್ಡ ಆಸ್ಪತ್ರೆ ಬರುತ್ತದೆ. ‌ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ, ಈ ಭಾಗದಲ್ಲಿ ಬಹಳ ದಿನಗಳಿಂದ ವಂಚಿತವಾಗಿರುವ ಯೋಜನೆಗಳಿಗೆ ನಮ ಸರ್ಕಾರ ಕಾಯಕಲ್ಪವನ್ನು ಕೊಟ್ಟು ಕೆಲಸ ಮಾಡುತ್ತಿದೆ ಎಂದು ಎಂದು ತಿಳಿಸಿದರು.

ಇದನ್ನೂ ಓದಿ | Skill Development | ಶಿಗ್ಗಾಂವಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ ಅಭಿವೃದ್ಧಿ ಆಗಲಿದೆ: ಸಿಎಂ ಬೊಮ್ಮಾಯಿ

Exit mobile version