Site icon Vistara News

Namma Metro : ನಮ್ಮ ಮೆಟ್ರೋಗೆ ಕೊನೆಗೂ ಪೂರ್ಣಾವಧಿ ಎಂ.ಡಿ ನೇಮಕ; ತೇಜಸ್ವಿ ಸೂರ್ಯ ಖುಷ್‌

Namma Metro Tejaswi surya Maheshwar Rao

ಬೆಂಗಳೂರು: ನಮ್ಮ ಮೆಟ್ರೋ (Bengaluru Metro Rail Corporation Ltd-BMRCL) ನೂತನ ಆಡಳಿತ ನಿರ್ದೇಶಕರಾಗಿ (Managing Director) ಮಹೇಶ್ವರ ರಾವ್‌ (Maheshwar Rao) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇವರು ಬಿಎಂಆರ್‌ಸಿಎಲ್‌ಗೆ ಪೂರ್ಣಾವಧಿ ಎಂ.ಡಿ. (BMRCL MD) ಆಗಿದ್ದಾರೆ. ನಮ್ಮ ಮೆಟ್ರೋ (Namma Metro) ಫೇಸ್‌ 2 ಕಾಮಗಾರಿಗಳು ವಿಳಂಬವಾಗುತ್ತಿವೆ. ಇದಕ್ಕೆ ಪೂರ್ಣಾವಧಿ ಎಂ.ಡಿ. ಇಲ್ಲದೇ ಇರುವುದೇ ಕಾರಣ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (MP Tejaswi Surya) ಅವರು ಆರೋಪಿಸಿದ್ದು, ಅವರ ಮನವಿಯ ಮೇರೆಗೆ ಈಗ ಪೂರ್ಣಾವಧಿ ಎಂ.ಡಿ. ನೇಮಕ ಮಾಡಲಾಗಿದೆ ಎನ್ನಲಾಗಿದೆ.

ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಮಹೇಶ್ವರ್ ರಾವ್​ ಅವರನ್ನು ನೇಮಕ ಮಾಡಿರುವಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೇಂದ್ರದ ಒಪ್ಪಿಗೆಯಿಲ್ಲದೆ ಬಿಎಂಆರ್ ಸಿಎಲ್ ಎಂಡಿಗೆ ಹೆಚ್ಚುವರಿ ಹುದ್ದೆ ನೀಡುವಂತಿಲ್ಲ ಅಂತ ಸೂಚನೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಎಂಡಿಯಾಗಿ ಮಹೇಶ್ವರ್ ರಾವ್.ಎಂ. ನೇಮಕಕ್ಕೆ ರಾಜ್ಯ ಸರ್ಕಾರ ಕೇಂದ್ರದ ಒಪ್ಪಿಗೆ ಕೇಳಿತ್ತು. ಅದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಒಪ್ಪಿಗೆಯಿಲ್ಲದೆ ಹೆಚ್ಚುವರಿ ಹುದ್ದೆ ನೀಡುವಂತಿಲ್ಲ, ವರ್ಗಾವಣೆ ಮಾಡುವಂತಿಲ್ಲ ಎಂದು ಹೇಳಿದೆ.

ಬಿಎಂಆರ್‌ಸಿಎಲ್‌ಗೆ ಆಡಳಿತ ನಿರ್ದೇಶಕರಾಗಿದ್ದ ಅಂಜುಂ ಪರ್ವೇಜ್‌ ಅವರಿಗೆ ಸರ್ಕಾರ ಇತ್ತೀಚೆಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿತ್ತು. ಅವರನ್ನು ಪಂಚಾಯಿತಿ ರಾಜ್‌ ಇಲಾಖೆಯ ಪ್ರಿನ್ಸಿಪಾಲ್‌ ಸೆಕ್ರೆಟರಿಯಾಗಿ ನೇಮಿಸಲಾಗಿತ್ತು. ಹೀಗಾಗಿ ಅವರಿಗೆ ಮೆಟ್ರೋದ ಜವಾಬ್ದಾರಿ ನಿರ್ವಹಿಸಲು ಸಮಯ ಸಾಲದೆ ಹಿನ್ನಡೆಯಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದರು. ಜತೆಗೆ ರಾಜ್ಯ ಸರ್ಕಾರದಿಂದ ಸೂಕ್ತ ವ್ಯಕ್ತಿಯ ಶಿಫಾರಸು ಮಾಡಿದರೆ ಕೇಂದ್ರದಿಂದ ಅನುಮತಿ ಕೊಡಿಸೋದಾಗಿ ಹೇಳಿದ್ದರು.

ಮೆಟ್ರೋ ಎಂ.ಡಿಯಾಗಿ ಮಹೇಶ್ವರ ರಾವ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್​ ಮಾಡಿದ್ದಾರೆ. ಕೊನೆಗೂ ನಮ್ಮ ಮೆಟ್ರೋಗೆ ಪೂರ್ಣ ಪ್ರಮಾಣದ ಎಂ.ಡಿಯನ್ನು ಪಡೆಯಲಾಗಿದೆ. ನಗರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತವಾಗಿ ನೇಮಕ ಮಾಡಿದಕ್ಕಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.

ಪೂರ್ಣ ಸಮಯದ ನಿರ್ದೇಶಕರ ನೇಮಕದೊಂದಿಗೆ, ನಮ್ಮ ನಗರದ ಉನ್ನತ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಅವರ ಗಮನಕ್ಕೆ ಬರುತ್ತವೆಂದು ನಾವು ಭಾವಿಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತೇಜಸ್ವಿ ಸೂರ್ಯ ಆರೋಪಗಳು, ಬೇಡಿಕೆ ಏನಿತ್ತು?

  1. 1.ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ನೆಟ್‌ ವರ್ಕ್‌ ಹೆಚ್ಚಿಸಬೇಕೆಂಬುದು ಚಿಂತನೆ ಆಗಿತ್ತು. ಆದರೆ ಮೆಟ್ರೋ ನೆಟ್‌ವರ್ಕ್ ವಿಸ್ತರಿಸುವಲ್ಲಿ ಬಿಎಂಆರ್‌ಸಿಎಲ್ ಹಾಗೂ ಸರ್ಕಾರ ವಿಫಲವಾಗಿದೆ. ಸರ್ಕಾರ ಬಂದು 7 ತಿಂಗಳು ಆಗಿದೆ. ಇಲ್ಲಿವರೆಗೂ ಮೆಟ್ರೋಗೆ ಪೂರ್ಣಾವಧಿ ಎಂಡಿ ನೇಮಕವಾಗಿಲ್ಲ. ಹೀಗಾಗಿ ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಮ್, ಜನರ ಹಣ ಪೋಲು ಆಗುತ್ತಿದೆ.
  2. 2. ಮೆಟ್ರೋ ಯೋಜನೆ ಯಾವತ್ತು ಅವರು ನೀಡಿರುವ ಡೆಡ್‌ಲೈನ್‌ಗೆ ಮುಗಿದಿಲ್ಲ. ಪ್ರತಿ ಪ್ರಾಜೆಕ್ಟ್ ಮೇಲೆ 2-3 ವರ್ಷ ವಿಳಂಬ ಆಗುತ್ತಿದೆ. ಇದಕ್ಕೆ ಕಾರಣ BMRCLಗೆ ಬೇಕಾದ ಒಬ್ಬ ವ್ಯಕ್ತಿನ (ಎಂಡಿ) ನೇಮಿಸಿಲ್ಲ.
  3. 3. ಸರಿಸುಮಾರು ಮೆಟ್ರೋದಲ್ಲಿ 8 ಲಕ್ಷ ಜನ ಓಡಾಡುತ್ತಾರೆ. ಆದರೂ BMRCL ಅವರಿಗೆ ಸರಿಯಾದ ಕಾರ್ಯ ನಿರ್ವಹಿಸಲು ಕಚೇರಿ ಕೂಡ ಇಲ್ಲ. ಇಷ್ಟು ವೆಚ್ಚದ ಕಾಮಗಾರಿ ನಡೆಸುವ ನಮ್ಮ ಮೆಟ್ರೋಗೆ ಒಂದು ಕಾರ್ಪೋರೇಟನ್ ಕಚೇರಿ ಇಲ್ಲ. ದೆಹಲಿಯ ರೀತಿಯಲ್ಲಿ ಮೆಟ್ರೋ ಕಾರ್ಯವಹಿಸಬೇಕು. ಆದರೆ, ಇಲ್ಲಿ ಪ್ರಧಾನ ವ್ಯವಸ್ಥಾಪಕರು, ಹೆಚ್​ಆರ್ ನಿವೃತ್ತರಾಗಿ ಒಂದೂವರೆ ವರ್ಷವಾದರೂ ಆ ಎರಡು ಸ್ಥಾನಗಳನ್ನು ಭರ್ತಿ ಮಾಡಿಲ್ಲ. ಹೀಗಿರುವಾಗ ಮೆಟ್ರೋ ಕಾಮಗಾರಿ ಹೇಗೆ ಆಗುತ್ತದೆ?
  4. 4. BMRCLನಲ್ಲಿ ಶೇ.90 ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಮೆಟ್ರೋದಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಷ್ಟೋ ಜನ ಪೋಸ್ಟ್ ರಿಟೈರ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೊಂದು ಕೆಲಸದಲ್ಲಿ ರಿಟೈರ್‌ಮೆಂಟ್ ಆದವರು ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ.
  5. 5. ಹಳದಿ ಮಾರ್ಗ ಫೆಬ್ರವರಿ 23-24ರಂದು ಆರಂಭವಾಗಬೇಕಿತ್ತು. ಆದರೆ ಈ ಕಾಮಾಗಾರಿಯು ಕೂಡ ವಿಳಂಬವಾಗಲಿದೆ. ಈ ಬಗ್ಗೆ ಪ್ರಶ್ನಿಸಿದಾಗ ಫೆಬ್ರವರಿಯಲ್ಲಿ ಟೆಸ್ಟಿಂಗ್‌ ಮಾಡಿ ಆಮೇಲೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಫುಲ್ ಟೈಂ ಎಂಡಿ ಇಲ್ಲದಿರುವುದು.
Exit mobile version