Site icon Vistara News

Karnataka Elections | ನಾಯಿಮರಿ ಅಸಾಂವಿಧಾನಿಕ ಪದವಾ? ಬಿಎಸ್‌ವೈಗೆ ರಾಜಾ ಹುಲಿ ಅನ್ನಲ್ವಾ?: ಸಿದ್ದರಾಮಯ್ಯ ಪ್ರಶ್ನೆ

ಸಿದ್ದರಾಮಯ್ಯ ಕುದ್ರೋಳಿಯಲ್ಲಿ

ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಾಯಿ ಮರಿ ತರ ಇರ್ತಾರೆ ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾದ ಮಾಜಿ ಸಿಎಂ ಸಿದ್ದರಾಮಯ್ಯ (Karnataka Elections) ಅವರು ತನ್ನ ಮಾತಿನ ಬಗ್ಗೆ ಸಮಜಾಯಿಷಿ ನೀಡಿದ್ದಾರೆ.

ʻʻನಾನು ಮುಖ್ಯಮಂತ್ರಿ ಅವರಿಗೆ ನಾಯಿ ಅಂತ ಹೇಳಿಲ್ಲ ಅಥವಾ ಆ ರೀತಿ ಹೋಲಿಕೆ ಮಾಡಿಲ್ಲ. ನಾನು ಹೇಳಿದ್ದು ಕೇಂದ್ರದ ಅನುದಾನ ತರುವ ದೈರ್ಯ ತೋರಿಸಿ ಅಂತʼʼ ಎಂದು ಅವರು ಮಂಗಳೂರಿನಲ್ಲಿ ಹೇಳಿದ್ದಾರೆ. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಕೇಂದ್ರವನ್ನು ಕೇಳುವ ಧೈರ್ಯ ತೋರಿಸಿ, ನಾಯಿ ಮರಿ ತರ ಇರಬೇಡಿ ಅಂತ ಹೇಳಿದ್ದೆ. ಅದು ಯಾವ ರೀತಿ ತಪ್ಪು ಆಗುತ್ತದೆʼʼ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ʻʻನನ್ನನ್ನು ಟಗರು, ಅಂತಾರೆ ಹುಲಿಯಾ ಅಂತೆಲ್ಲ ಕರೀತಾರೆ. ಯಡಿಯೂರಪ್ಪ ಅವರನ್ನು ಬಿಜೆಪಿಯವರೇ ರಾಜಾ ಹುಲಿ ಅಂತಾರೆ. ಇದ್ಯಾವುದೂ ಅಸಂವಿಧಾನಿಕ ಪದಗಳು ಅಲ್ಲ. ಅದೇ ರೀತಿ ನಾಯಿ ಮರಿಯಂತೆ ಇರಬೇಡಿ ಅನ್ನೋದು ಅಸಾಂವಿಧಾನಿಕ ಪದ ಅಲ್ಲʼʼ ಎಂದು ಸಿದ್ದರಾಮಯ್ಯ ಹೇಳಿದರು.

ನಳಿನ್‌ ಹೇಳಿಕೆಗಳಿಗೆ ಉತ್ತರ ಕೊಡಲ್ಲ!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿಯ ಜೋಕರ್ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ ಅವರು, ʻʻನಳಿನ್ ಕುನಾರ್ ಹೇಳಿಕೆಗಳಿಗೆ ಉತ್ತರ ಕೊಡಲ್ಲ. ಅವರೊಬ್ಬ ಜೋಕರ್ ಆಗಿದ್ದು ಬಾಲಿಶ ಹೇಳಿಕೆ ನೀಡ್ತಾರೆ. ವಿದೂಷಕರ ಹೇಳಿಕೆಗೆ ಯಾವುದೇ ಉತ್ತರ ನೀಡೋದಿಲ್ಲʼʼ ಎಂದರು.

ನನ್ನನ್ನು ಜೈಲಿಗೆ ಕಳುಹಿಸಲು ಅವರು ಪೊಲೀಸಾ? ಅಥವಾ ಅವರಿಗೆ ಏನಾದ್ರೂ ಕಾನೂನಿನ ಅರಿವಿದೆಯಾ ಎಂದು ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಕೆಣಕಿದರು.

ಇದನ್ನೂ ಓದಿ | Karnataka politics | ಹೌದು, ಸಿಎಂ ಬೊಮ್ಮಾಯಿ ಆರು ಕೋಟಿ ಜನರ ನಿಯತ್ತಿನ ನಾಯಿ ಎಂದ ಸಚಿವ ಸುಧಾಕರ್‌!

Exit mobile version